ಬೆಂಗಳೂರು: ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್ನಲ್ಲಿ ಒಟ್ಟು 115 ಮಂದಿ ಕೋವಿಡ್ ಸೋಂಕು ಹೊಂದಿರುವುದು ದೃಢಪಟ್ಟಿದೆ.
ಈ ವಾರ್ಡ್ನಲ್ಲಿ 39 ಮಂದಿ ಕೊರೊನಾ ಸೋಂಕು ಹೊಂದಿರುವುದು ಖಚಿತಪಟ್ಟಿದ್ದರಿಂದ ಇದನ್ನು ಕೋವಿಡ್ ಕ್ಲಸ್ಟರ್ ಎಂದು ಬಿಬಿಎಂಪಿ ಸೋಮವಾರ ಗುರುತಿಸಿತ್ತು. ಸೋಂಕಿತರ ಜೊತೆಗೆ ಸಂಪರ್ಕಕ್ಕೆ ಬಂದಿದ್ದ 2,086 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಲ್ಲಿ ಮತ್ತೆ 76 ಮಂದಿ ಕೋವಿಡ್ ಹೊಂದಿರುವುದು ಶುಕ್ರವಾರ ದೃಢಪಟ್ಟಿದೆ. ಕೆಲವು ಮಂದಿಯ ಕೋವಿಡ್ ಪರೀಕ್ಷೆಯ ಫಲಿತಾಂಶ ಇನ್ನಷ್ಟೇ ಬರಬೇಕಿದೆ.
ಐತಿಹಾಸಿಕ ಕರಗ ಉತ್ಸವ ನಡೆಯುವ ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನವು ಇದೇ ವಾರ್ಡ್ನಲ್ಲಿದೆ. ಕರಗ ಮಹೋತ್ಸವ ವಿಧಿವಿಧಾನಗಳನ್ನು ಇದೇ 19ರಿಂದ 27ರವರೆಗೆ ನಿರ್ಬಂಧಿತ ವಾತಾವರಣದಲ್ಲಿ ನಡೆಸಲು ಬಿಬಿಎಂಪಿ ಹಾಗೂ ಜಿಲ್ಲಾಡಳಿತ ನಿರ್ಧರಿಸಿತ್ತು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಶುಕ್ರವಾರ 5,576 ಮಂದಿಯಲ್ಲಿ ಕೋವಿಡ್ ಪತ್ತೆಯಾಗಿದೆ. ಸಾವಿನ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದ್ದು ಒಟ್ಟು 29 ಮಂದಿ ಈ ರೋಗದಿಂದ ಕೊನೆಯುಸಿರೆಳೆದಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಎರಡನೇ ಅಲೆ ಕಾಣಿಸಿಕೊಂಡ ಬಳಿಕ 56 ಕಂಟೈನ್ಮೆಂಟ್ ವಲಯಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 20 ಕಂಟೈನ್ಮೆಂಟ್ ವಲಯಗಳು ಸಹಜ ಸ್ಥಿತಿಗೆ ಮರಳಿವೆ. 10 ದಿನಗಳಲ್ಲಿ ಬೆಳ್ಳಂದೂರು, ಶಾಂತಲಾನಗರ, ಆರ್.ಆರ್.ನಗರ, ಎಚ್.ಎಸ್.ಆರ್ ಬಡಾವಣೆ, ಹೊರಮಾವು, ವಿದ್ಯಾರಣ್ಯಪುರ, ವಸಂತಪುರ, ಬೇಗೂರು, ಅರಕೆರೆ, ವಿಶ್ವೇಶ್ವರಪುರ ವಾರ್ಡ್ಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.