ADVERTISEMENT

ಸಂಗೀತ ನೃತ್ಯ ಕಲಾವಿದರ ಮಾಹಿತಿ ಡಿಜಿಟಲೀಕರಣ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 16:16 IST
Last Updated 26 ಸೆಪ್ಟೆಂಬರ್ 2024, 16:16 IST
ಶುಭಾ ಧನಂಜಯ್
ಶುಭಾ ಧನಂಜಯ್   

ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ವಿವಿಧ ಕಲಾ ಪ್ರಕಾರಗಳ ಕಲಾವಿದರ ಮಾಹಿತಿಯನ್ನು ಡಿಜಿಟಲೀಕರಣಗೊಳಿಸುವ ‘ನಮ್ಮ ಕಲಾವಿದರು’ ಯೋಜನೆ ಹಮ್ಮಿಕೊಂಡಿದೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ್, ‘ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ನೃತ್ಯ, ಕಥಾ ಕೀರ್ತನ ಮತ್ತು ಗಮಕ ಕಲಾ ಪ್ರಕಾರಗಳಿಗೆ ಸಂಬಂಧಿಸಿದ ಕಲಾವಿದರ ಮಾಹಿತಿಯುಳ್ಳ ಆರು ಪುಸ್ತಕಗಳನ್ನು ಹೊರತರಲಾಗುತ್ತದೆ. ನಮ್ಮ ಕಲಾವಿದರು ಪ್ರಪಂಚದಾದ್ಯಂತ ಪರಿಚಯವಾಗಬೇಕು ಎಂಬ ಉದ್ದೇಶದಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಮುದ್ರಿತ ಪುಸ್ತಕಗಳನ್ನು ಸರ್ಕಾರಿ ಗ್ರಂಥಾಲಯಗಳಿಗೆ ಒದಗಿಸಲಾಗುತ್ತದೆ. ‘ಇ ಪುಸ್ತಕ’ವನ್ನು ಅಕಾಡೆಮಿ ವೆಬ್‌ಸೈಟ್‌ಗೆ ಅಳವಡಿಸಲಾಗುತ್ತದೆ. ಡಿಸೆಂಬರ್ ವೇಳೆಗೆ ಪುಸ್ತಕ ಪ್ರಕಟಿಸಲಾಗುತ್ತದೆ’ ಎಂದರು.

‘2014ರಲ್ಲಿಯೇ ಅಕಾಡೆಮಿ ಈ ಯೋಜನೆಯನ್ನು ಹಮ್ಮಿಕೊಂಡಿತ್ತು. ಆದರೆ, ಕಾರಣಾಂತರಗಳಿಂದ ನನೆಗುದಿಗೆ ಬಿದ್ದಿತು. ಆ ವೇಳೆ ಕೆಲ ಕಲಾವಿದರು ಮಾಹಿತಿ ಕಳುಹಿಸಿದ್ದರು. ಅವರು ಸೇರಿ ಎಲ್ಲ ಕಲಾವಿದರು ಅಕಾಡೆಮಿ ವೆಬ್‌ಸೈಟ್‌ sangeetanrityaacademy.karnataka.gov.in ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಕಿರಿಯ ಮತ್ತು ಯುವ ಕಲಾವಿದರು ಎಂದು ವಿಂಗಡಿಸಲಾಗಿದ್ದು, ಅಕ್ಟೋಬರ್‌ 25ರೊಳಗೆ ಕಲಾವಿದರು ತಮ್ಮ ಸ್ವವಿವರವನ್ನು ಸಲ್ಲಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಆರೂ ಪುಸ್ತಕಗಳಿಗೆ ಸಂಪಾದಕರು ಇರಲಿದ್ದಾರೆ. ಕರ್ನಾಟಕ ಸಂಗೀತಕ್ಕೆ ಪಿ. ಶ್ರೀನಿವಾಸಮೂರ್ತಿ (9945194569), ಹಿಂದೂಸ್ತಾನಿ ಸಂಗೀತಕ್ಕೆ ನಿರಂಜನಮೂರ್ತಿ (8277766109), ನೃತ್ಯಕ್ಕೆ ಸುಗ್ಗನಹಳ್ಳಿ ಷಡಕ್ಷರಿ (9844349464), ಸುಗಮ ಸಂಗೀತಕ್ಕೆ ಆನಂದ ಮಾದಲಗೆರೆ (9742116467), ಕಥಾಕೀರ್ತನ ಮತ್ತು ಗಮಕಕ್ಕೆ ಎಂ.ಆರ್. ಸತ್ಯನಾರಾಯಣ (9243412585) ಅವರು ಸಂಪಾದಕರಾಗಿದ್ದು, ಹೆಚ್ಚಿನ ಮಾಹಿತಿಗೆ ಅವರನ್ನು ಸಂಪರ್ಕಿಸಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.