ADVERTISEMENT

‘ಸತ್ತಾಗ ಗೌರವಕ್ಕಾಗಿ ಮುಪ್ಪಿನಲ್ಲಿ ಮಂತ್ರಿಗಿರಿ ಹಂಬಲ’: ದಿಂಗಾಲೇಶ್ವರ ಸ್ವಾಮೀಜಿ

ಸರ್ವ ಧರ್ಮಗಳ ಸಮ್ಮೇಳನದಲ್ಲಿ ರಾಜಕಾರಣಿಗಳ ನಡೆ ಟೀಕಿಸಿದ ಗದಗದ ದಿಂಗಾಲೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 13:47 IST
Last Updated 13 ಜುಲೈ 2025, 13:47 IST
<div class="paragraphs"><p>ಸಮ್ಮೇಳನದಲ್ಲಿ (ಕುಳಿತವರು ಎಡದಿಂದ) ಪ್ರೊ. ಮಲ್ಲಿಕಾರ್ಜುನ ಯಾಳವಾರ ಮತ್ತು ರಾಜೇಂದ್ರ ಎಸ್. ಗಡಾದ ಅವರಿಗೆ ‘ಸಾಹಿತ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. </p><p>ಪ್ರಜಾವಾಣಿ ಚಿತ್ರ</p></div>

ಸಮ್ಮೇಳನದಲ್ಲಿ (ಕುಳಿತವರು ಎಡದಿಂದ) ಪ್ರೊ. ಮಲ್ಲಿಕಾರ್ಜುನ ಯಾಳವಾರ ಮತ್ತು ರಾಜೇಂದ್ರ ಎಸ್. ಗಡಾದ ಅವರಿಗೆ ‘ಸಾಹಿತ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಚಿತ್ರ

   

ಬೆಂಗಳೂರು: ‘ಮುಪ್ಪಿನವರೆಗೂ ರಾಜಕಾರಣಿಗಳು ಸಚಿವ ಸ್ಥಾನಕ್ಕೆ ಹಂಬಲಿಸುತ್ತಾರೆ. ಮಾಜಿಯಾದಲ್ಲಿ ಸತ್ತಾಗ ಗೌರವ ಸಿಗುವುದಿಲ್ಲವೆಂಬ ಕಾರಣಕ್ಕೆ ಕೊನೆಯವರೆಗೂ ಮಂತ್ರಿಯಾಗಿಯೇ ಇರಲು ಬಯಸುತ್ತಾರೆ’ ಎಂದು ಗದಗದ ಶಿರಹಟ್ಟಿಯ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ADVERTISEMENT

ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಸ್ಥೆಯ ದಶಮಾನೋತ್ಸವ ಹಾಗೂ ಸರ್ವ ಧರ್ಮಗಳ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 

‘ಈಗಿನ ಬಹಳಷ್ಟು ಮಂತ್ರಿಗಳು ಬೇರೆಯವರಿಗೆ ರಾಜಕೀಯದಿಂದ ಸನ್ಯಾಸತ್ವ ಕೊಡಿಸಲು ಪ್ರಯತ್ನಿಸುತ್ತಾರೆ ಹೊರತು, ಅವರು ಸಾಯುವವರೆಗೂ ಸನ್ಯಾಸಿಯಾಗುವುದಿಲ್ಲ. ಸತ್ತಾಗಲೂ ಗೌರವ ಬಯಸುವ ಅವರು, ಇಳಿವಯಸ್ಸಿನಲ್ಲಿಯೂ ಮಂತ್ರಿಯಾಗಬೇಕೆಂದು ಬಯಸುತ್ತಾರೆ. ಸಾಯುವ ವೇಳೆ ಮಂತ್ರಿಯಾಗಿರದಿದ್ದಲ್ಲಿ ಯಾರೂ ತಮಗೆ ಗೌರವ ನೀಡುವುದಿಲ್ಲ ಎಂಬ ಭಾವನೆ ಅವರಲ್ಲಿದೆ. ಆದ್ದರಿಂದಲೇ ರಾಜಕೀಯ ಸನ್ಯಾಸ ಪಡೆಯುವುದಿಲ್ಲ’ ಎಂದರು. 

‘ಹಿಂದೂ ಸಂಸ್ಕೃತಿಯಲ್ಲಿ ನಾಲ್ಕು ಆಶ್ರಮಗಳನ್ನು ಪರಿಚಯಿಸಲಾಗಿದ್ದು, ಪ್ರತಿಯೊಂದೂ ಅದರ ನಿರ್ದಿಷ್ಟ ಕರ್ತವ್ಯಗಳನ್ನು ಹೊಂದಿದೆ. ಬಾಲ್ಯದಲ್ಲಿ ತಾಯಿಯ ಹತ್ತಿರ ಇದ್ದರೆ, ತಾರುಣ್ಯದಲ್ಲಿ ಮಹಾತ್ಮರ ಬಳಿ ಇರಬೇಕು. ಮುಪ್ಪಿನಲ್ಲಿ ಪರಮಾತ್ಮನ ಹತ್ತಿರ ಹೋಗಬೇಕು. 50 ವರ್ಷಗಳವರೆಗೂ ಮೋಜು ಮಸ್ತಿ ಮಾಡುತ್ತಾ, ಬಳಿಕ ದುಡಿಯಲು ಪ್ರಾರಂಭಿಸಿದರೆ ಕುಟುಂಬಸ್ಥರ ಜತೆಗೆ ಸಮಾಜವೂ ತಿರಸ್ಕರಿಸುತ್ತದೆ’ ಎಂದು ಹೇಳಿದರು. 

ಬಸವಕಲ್ಯಾಣದ ಹುಲಸೂರಿನ ಗುರು ಬಸವೇಶ್ವರ ಮಠದ ಶಿವಾನಂದ ಸ್ವಾಮೀಜಿ, ‘12ನೇ ಶತಮಾನದಲ್ಲಿ ಬಸವಣ್ಣ ಅವರು ಜಾತಿ, ಧರ್ಮವನ್ನು ಕಿತ್ತೆಸೆದು, ಎಲ್ಲರಿಗೂ ಬೆಳಕಾದರು. ಬಸವಾದಿ ಶರಣರು ರಚಿಸಿದ ವಚನಗಳನ್ನು ಓದಿ, ಅವುಗಳ ಪ್ರಕಾರ ನಡೆಯಬೇಕು’ ಎಂದರು. 

ವಿವಿಧ ಮಠಾಧೀಶರು ಹಾಗೂ ಧರ್ಮಗುರುಗಳು ಸಮ್ಮೇಳನದಲ್ಲಿ ಉಪಸ್ಥಿತರಿದ್ದರು. ಇದಕ್ಕೂ ಮೊದಲು ನಡೆದ ಜಾನಪದ ಮೆರವಣಿಗೆಗೆ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಚಾಲನೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.