ಬೆಂಗಳೂರು: ಆಸ್ಪತ್ರೆ ನಿರ್ಮಿಸಲು ರಾಜ್ಯ ಸರ್ಕಾರದಿಂದ ಭೂಮಿ ಮಂಜೂರು ಮಾಡಿಸಿ ಕೊಡುವುದಾಗಿ ನಂಬಿಸಿ ವೈದ್ಯರೊಬ್ಬರಿಗೆ ₹ 1.50 ಕೋಟಿ ವಂಚಿರುವ ಘಟನೆ ಫ್ರೇಜರ್ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಡಾ. ಅಶ್ಫಾಕ್ ಅಹಮ್ಮದ್ ವಂಚನೆಗೆ ಒಳಗಾದವರು. ಈ ಸಂಬಂಧ ನಟರಾಜ್, ಶಿಲ್ಪಶ್ರೀ ಮತ್ತು ಸಲಾಹುದ್ದೀನ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅಶ್ಫಾಕ್ ಅಹಮದ್ ಅವರು ಆಸ್ಪತ್ರೆ ನಿರ್ಮಿಸಲು ಜಮೀನು ಹುಡುಕಾಡುತ್ತಿದ್ದರು. ಈ ವಿಷಯ ತಿಳಿದ ಪರಿಚಿತ ಸಲಾಹುದ್ದೀನ್, ಅಶ್ಫಾಕ್ ಅವರಿಗೆ ನಟರಾಜ್ನನ್ನು ಪರಿಚಯಿಸಿದ್ದ. ‘ನಟರಾಜ್ಗೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಪರಿಚಯವಿದೆ. ಸೂಕ್ತ ಭೂಮಿ ಕೊಡಿಸುತ್ತಾರೆ’ ಎಂದು ಹೇಳಿದ್ದ. ಅವರನ್ನು ಮಾಗಡಿ ಮುಖ್ಯರಸ್ತೆಯಲ್ಲಿರುವ ಬ್ಯಾಡರಹಳ್ಳಿಗೆ ಕರೆದುಕೊಂಡು ಹೋಗಿದ್ದ ನಟರಾಜ್ ಬೇರೆಯವರ ಮಾಲೀಕತ್ವದ 20 ಎಕರೆ ಭೂಮಿ ತೋರಿಸಿ, ಅದನ್ನು ಸರ್ಕಾರಿ ಜಮೀನು ಎಂದು ಹೇಳಿದ್ದ. ಭೂ ಪರಿವರ್ತನೆ ಮಾಡಲು ₹ 75 ಲಕ್ಷ ಪಡೆದುಕೊಂಡಿದ್ದ. ಬಳಿ ಆತನ ಪತ್ನಿ ಶಿಲ್ಪಶ್ರೀ ಮತ್ತು ಸ್ನೇಹಿತ ಸಲಾಹುದ್ದೀನ್ ಸೇರಿ ಹಂತ ಹಂತವಾಗಿ ಒಟ್ಟು ₹ 1.50 ಕೋಟಿ ಪಡೆದಿದ್ದರು. ಆದರೆ, ಭೂಮಿ ನೋಂದಣಿ ಮಾಡಿಸದೆ ಆರೋಪಿಗಳು ಏನೇನೊ ಕಾರಣಗಳನ್ನು ಹೇಳುತ್ತಿದ್ದರು. ವಂಚನೆ ಆಗಿರುವ ವಿಷಯ ಗೊತ್ತಾಗುತ್ತಿದ್ದಂತೆ ಅಶ್ಫಾಕ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.