ಬೆಂಗಳೂರು: ಬಸವ ಜಯಂತಿ ಹಾಗೂ ರಂಜಾನ್ ಹಬ್ಬವನ್ನು ವಿಶೇಷವಾಗಿ ಆಚರಿಸಿದ ಪೊಲೀಸರು, ಸಾರ್ವಜನಿಕ ಶೌಚಾಲಯ ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಿದರು. ಸುಮನಹಳ್ಳಿ ಹಾಗೂ ಕೆಂಗುಂಟೆ ಬಳಿ ಬಿಬಿಎಂಪಿ ಸಾರ್ವಜನಿಕ ಶೌಚಾಲಯಗಳನ್ನು ಪೊಲೀಸರು ಸ್ವಚ್ಛಗೊಳಿಸಿದರು.
ವಿಧಾನಸೌಧ ಭದ್ರತಾ ವಿಭಾಗದ ಪಿಎಸ್ಐ ಶಾಂತಪ್ಪ ಜಡೆಮ್ಮನವರ ಅವರ ಜೊತೆ ಪೊಲೀಸ್ ಸಿಬ್ಬಂದಿ ಶ್ರಮದಾನಕ್ಕೆ ಕೈ ಜೋಡಿಸಿದ್ದರು. ಬೆಳಿಗ್ಗೆ ಶೌಚಾಲಯಕ್ಕೆ ಬಂದಿದ್ದ ಪಿಎಸ್ಐ ಹಾಗೂ ಸಿಬ್ಬಂದಿ, ಬ್ರೆಷ್ ಹಾಗೂ ಇತರೆ ಸಲಕರಣೆ ಹಿಡಿದು ಶೌಚಾಲಯಗಳನ್ನು ಸ್ವಚ್ಛ ಮಾಡಿದರು.
'ಪವಿತ್ರ ರಂಜಾನ್ ಮತ್ತು ಬಸವ ಜಯಂತಿ ಒಟ್ಟೊಟ್ಟಿಗೆ ಆಗಮಿಸಿ ಧಾರ್ಮಿಕ ಸೌಹಾರ್ದತೆಯ ಸಂದೇಶವನ್ನು ಸಾರಿವೆ. ನೊಂದವರ, ಬೆಂದವರ ಧ್ವನಿಯಾಗಿ ಕಂಡುಬರುವ ಬಸವಣ್ಣನ ಕಾಯಕ ತತ್ತ್ವ ಅಹಂಕಾರವನ್ನು ಅಳಿದು ಹಾಕುವ ಕ್ರಮಗಳಲ್ಲಿ ಒಂದು. ಅಲ್ಲದೇ, ಅದು ವ್ಯಕ್ತಿಗೆ ಮತ್ತು ವ್ಯಕ್ತಿತ್ವಕ್ಕೆ ಘನತೆ ತಂದುಕೊಡುತ್ತದೆ. ಕನ್ನಡ ಸಾಂಸ್ಕೃತಿಕ ರಾಯಭಾರಿಯಂತೆ ಕಂಡುಬರುವ ಬಸವಣ್ಣ ಹೇಳಿದಂತೆ, ' ಇವನಾರವ ಇವನಾರವ ' ಎನ್ನುವ ವಚನ ಇಂದಿನ ಕಾಲಮಾನದ ತುರ್ತು.
ರಂಜಾನ್ ಮತ್ತು ಬಸವ ಜಯಂತಿ ಶುಭ ಸಂದರ್ಭದಲ್ಲಿ ಬೆಂಗಳೂರು ಪೊಲೀಸ್ ತಂಡ ಸಾರ್ವಜನಿಕ ಶೌಚಾಲಯಗಳ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡಿದೆ.
ಧಾರ್ಮಿಕ ಸೌಹಾರ್ದತೆ ಮತ್ತು ಶ್ರಮ ಸಂಸ್ಕೃತಿಯ ಮೇರು ಪರ್ವತಗಳಾಗಿರುವ ಪೌರ ಕಾರ್ಮಿಕರನ್ನು ಸಾಂಕೇತಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ' ಎಂದು ಪಿಎಸ್ಐ ಶಾಂತಪ್ಪ 'ಪ್ರಜಾವಾಣಿ'ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.