ADVERTISEMENT

ವಿದ್ಯುತ್ ದರ ಏರಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 18:26 IST
Last Updated 20 ಜೂನ್ 2021, 18:26 IST

ಯಲಹಂಕ: ‘ಕೋವಿಡ್ ಸಂಕಷ್ಟದಿಂದ ತತ್ತರಿಸಿರುವ ರಾಜ್ಯದ ಜನತೆಗೆ ವಿದ್ಯುತ್ ಬೆಲೆ ಏರಿಕೆಯ ಬರೆ ಎಳೆದಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ’ ಎಂದು ಜಯ ಜಯ ಕರ್ನಾಟಕ ಜನಪರ ವೇದಿಕೆ ಹೇಳಿದೆ.

ವೇದಿಕೆಯ ಬೆಂಗಳೂರು ಜಿಲ್ಲಾ ಅಧ್ಯಕ್ಷ ಜೆ.ಶ್ರೀನಿವಾಸ, ‘2020 ರ ನಂತರ ಪ್ರತಿ ಯುನಿಟ್‌ಗೆ 40 ಪೈಸೆಯಷ್ಟು ಏರಿಸಿದ್ದ ವಿದ್ಯುತ್‌ ದರವನ್ನು ಈಗ ಮತ್ತೆ ಪ್ರತಿ ಯುನಿಟ್‌ಗೆ 30 ಪೈಸೆ ಏರಿಸಲಾಗಿದೆ. ಆ ಮೂಲಕ ಜನರ ಮೇಲೆ ಸರ್ಕಾರ ದೊಡ್ಡ ಹೊರೆ ಹೊರೆಸಿದೆ’ ಎಂದು ದೂರಿದರು.

‘ವಿದ್ಯುತ್ ಸರಬರಾಜು ಕಂಪನಿಗಳು ನಷ್ಟದಲ್ಲಿವೆ ಎಂದು ಹೇಳುವ ಸರ್ಕಾರ, ಮೊದಲು ದುಬಾರಿ ಬೆಲೆಗೆ ವಿದ್ಯುತ್ ಖರೀದಿಸುವುದನ್ನು ನಿಲ್ಲಿಸಬೇಕು. ವಿದ್ಯುತ್ ಉತ್ಪಾದನೆ ಹೆಚ್ಚಿಸಿ, ಸೋರಿಕೆ ತಡೆಗಟ್ಟಬೇಕು. ಇಲಾಖೆಯಲ್ಲಿರುವ ಲೋಪಧೋಷಗಳನ್ನು ಸರಿಪಡಿಸಿದರೆ ಸಾಕಷ್ಟು ಸಮಸ್ಯೆಗಳು ಬಗೆಹರಿಯಲಿವೆ’ ಎಂದರು.

ADVERTISEMENT

‘ಈಗಾಗಲೇ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯವಸ್ತುಗಳ ಬೆಲೆ ವಿಪರೀತ ಏರಿಕೆಯಾಗಿದ್ದು, ಇಂತಹ ಸಂದರ್ಭದಲ್ಲಿ ವಿದ್ಯುತ್‌ ದರ ಹೆಚ್ಚಳ ಸರಿಯಲ್ಲ. ಮುಖ್ಯಮಂತ್ರಿಗಳು ಕೂಡಲೇ ದರಏರಿಕೆ ಮಾಡದಂತೆ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳಿಗೆ ಆದೇಶ ನೀಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.