ADVERTISEMENT

ಬೆಂಗಳೂರು | ಫ್ಲೆಕ್ಸ್‌: 12 ಎಫ್‌ಐಆರ್‌, ₹12 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2025, 16:20 IST
Last Updated 17 ಮಾರ್ಚ್ 2025, 16:20 IST
<div class="paragraphs"><p>ಎಫ್‌ಐಆರ್‌</p></div>

ಎಫ್‌ಐಆರ್‌

   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಿಗ್ಗೆ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಿ, 12 ಎಫ್‌ಐಆರ್‌ ದಾಖಲಿಸಿ ₹12 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ಪೂರ್ವ, ಪಶ್ಚಿಮ ಹಾಗೂ ಯಲಹಂಕ ಸೇರಿದಂತೆ ಮೂರೂ ವಲಯಗಳಲ್ಲಿ ಭಾನುವಾರ ಸಂಜೆಯಿಂದ 1,350ಕ್ಕೂ ಹೆಚ್ಚು ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದೆ. 600ಕ್ಕೂ ಹೆಚ್ಚು ಪಕ್ಷದ ಧ್ವಜಗಳನ್ನು ತೆರವುಗೊಳಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಬಳ್ಳಾರಿ ರಸ್ತೆಯಲ್ಲಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಲಾಗಿದ್ದು, ಅವುಗಳನ್ನು ತೆರವುಗೊಳಿಸಿ ದಂಡ ವಿಧಿಸಿ, ಎಫ್‌ಐಆರ್‌ ದಾಖಲಿಸಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭಾನುವಾರ ಸಂಜೆ ಸೂಚಿಸಿದ್ದರು.

ನಗರದ ಎಲ್ಲ ಭಾಗಗಳಲ್ಲೂ ಅನಧಿಕೃತವಾಗಿ ಅಳವಡಿಸುವ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಬೇಕು. ದುಪ್ಪಟ್ಟು ದಂಡ ವಿಧಿಸುವ ಜೊತೆಗೆ ಎಫ್‌ಐಆರ್ ದಾಖಲಿಸಲು ಅಧಿಕಾರಿಗಳ ಸಭೆಯಲ್ಲಿ ತುಷಾರ್‌ ಗಿರಿನಾಥ್‌ ಸೋಮವಾರ ಸೂಚಿಸಿದರು.

ಕೆರೆ ಒತ್ತುವರಿ ತೆರವಿಗೆ ಸೂಚನೆ: ಬಿಬಿಎಂಪಿ ವ್ಯಾಪ್ತಿಯ ಕೆರೆಗಳ ಒತ್ತುವರಿಯನ್ನು ಶೀಘ್ರ ತೆರವುಗೊಳಿಸಬೇಕು ಎಂದು  ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಹೈಕೋರ್ಟ್‌ ನಿರ್ದೇಶನದಂತೆ, ಕೆರೆಗಳ ಒತ್ತುವರಿ ತೆರವುಗೊಳಿಸಬೇಕು. 183 ಕೆರಗಳಲ್ಲಿ, ಕಂದಾಯ ಇಲಾಖೆಯ ಭೂಮಾಪಕರು 168 ಕೆರೆಗಳಲ್ಲಿ ಸರ್ವೆ ಮಾಡಿದ್ದಾರೆ. 126 ಕೆರೆಗಳಲ್ಲಿ 28 ಕೆರಗಳಲ್ಲಿ ಒತ್ತುವರಿ ಇಲ್ಲ. ಇನ್ನೂ 26 ಕೆರೆಗಳಲ್ಲಿ ಸರ್ಕಾರಿ ಒತ್ತುವರಿ ಇದೆ. ಇನ್ನುಳಿದ 78 ಕೆರೆಗಳಲ್ಲಿನ ಒತ್ತುವರಿ ತೆರವುಗೊಳಿಸಲು ವಲಯಗಳ ಕಾರ್ಯಪಾಲಕ ಎಂಜಿನಿಯರ್‌ಗೆ ಜವಾಬ್ದಾರಿ ನೀಡಲಾಗಿದೆ. ಅವರು ಕೂಡಲೇ ನೋಟಿಸ್‌ ಜಾರಿ ಮಾಡಿ, ಕಾರ್ಯಾಚರಣೆ ನಡೆಸಬೇಕು ಎಂದು ಆದೇಶಿಸಿದರು.

ಅರಣ್ಯ, ಪರಿಸರ ಹಾಗೂ ಹವಾಮಾನ ವೈಪರೀತ್ಯ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ಸತೀಶ್, ದಿಗ್ವಿಜಯ್ ಬೋಡ್ಕೆ, ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್‌ ವಿಜಯ್ ಕುಮಾರ್ ಹರಿದಾಸ್ ಉಪಸ್ಥಿತರಿದ್ದರು.

ದಂಡ ಯಾರಿಗೆ?
‘ಯುವ ಸಂಕಲ್ಪ’ ಕುರಿತ ಕಾರ್ಯಕ್ರಮದ ಫ್ಲೆಕ್ಸ್‌/ ಬ್ಯಾನರ್‌ ಅಳವಡಿಸಿದ್ದ ಯುವ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ ಗೌಡ, ಉಪಾಧ್ಯಕ್ಷ ಬಾಲಾ ಪ್ರದೀಪ್‌, ಬೆಂಗಳೂರು ಕೇಂದ್ರ ಯುವ ಕಾಂಗ್ರೆಸ್‌ ಅಧ್ಯಕ್ಷ ಆರ್‌. ರಂಜಿತ್‌ಕುಮಾರ್‌, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಚೈತ್ರಾ ವಿ. ಗಿರೀಶ್‌, ಕೇಂದ್ರ ಯುವ ಕಾಂಗ್ರೆಸ್‌ ಮಾಜಿ ಪ್ರಧಾನ ಕಾರ್ಯದರ್ಶಿ ದರ್ಶನ್‌ ಸುಧಾಕರ್‌, ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದರ್ಶನ್‌ ದಿವಾಕರ್‌, ಐಎನ್‌ಟಿಯುಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಂದಲಗರ್ಕಿ ಮುನೀಂದ್ರ ಅವರಿಗೆ ನೋಟಿಸ್‌ ನೀಡಿ, ತಲಾ ₹1 ಲಕ್ಷ ದಂಡ ವಿಧಿಸಲಾಗಿದೆ. ಜೊತೆಗೆ, ₹5 ಸಾವಿರವನ್ನು ಫ್ಲೆಕ್ಸ್ ತೆರವಿನ ಶುಲ್ಕವಾಗಿ ಪಾವತಿಸಲು ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.