ADVERTISEMENT

ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಪಾಲನೆ ಕಡ್ಡಾಯ: ಗೌರವ್ ಗುಪ್ತಾ

ಹೋಟಲ್ ಉದ್ದಿಮೆದಾರರ ಜೊತೆ ಬಿಬಿಎಂಪಿ ಮುಖ್ಯ ಆಯುಕ್ತ ಸಭೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 22:03 IST
Last Updated 9 ಏಪ್ರಿಲ್ 2021, 22:03 IST
ಗೌರವ್ ಗುಪ್ತಾ
ಗೌರವ್ ಗುಪ್ತಾ    

ಬೆಂಗಳೂರು: ‘ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಸೋಂಕು ಹರಡುವಿಕೆ ನಿಯಂತ್ರಿಸಲು ಎಲ್ಲ ಹೋಟೆಲ್‌ಗಳಲ್ಲೂ ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಹೋಟೆಲ್‌ ಮಾಲೀಕರಲ್ಲಿ ಮನವಿ ಮಾಡಿದರು.

ಹೋಟೆಲ್‌ ಉದ್ಯಮಿಗಳ ಸಂಘದ ಪದಾಧಿಕಾರಿಗಳ ಜೊತೆ ಮುಖ್ಯ ಆಯುಕ್ತರು ಶುಕ್ರವಾರ ವರ್ಚುವಲ್‌ ಸಭೆ ನಡೆಸಿದರು.

‘ಕೋವಿಡ್ ಸೋಂಕು ವ್ಯಾಪಿಸುತ್ತಿರುವುದರಿಂದ ವ್ಯಾಪಾರ-ವಹಿವಾಟುಗಳ ಮೇಲೆ ತುಂಬಾ ದುಷ್ಪರಿಣಾಮ ಉಂಟಾಗಿರುವುದು ನಿಜ. ಕೋವಿಡ್ ಹರಡುವಿಕೆ ನಿಯಂತ್ರಣಕ್ಕೆ ಸರ್ಕಾರದ ರೂಪಿಸಿರುವ ಮಾರ್ಗಸೂಚಿ ಪಾಲಿಸದ ಹೋಟೆಲ್‌ಗಳಿಗೆ ಪಾಲಿಕೆ ಆರೋಗ್ಯಾಧಿಕಾರಿಗಳು, ಮಾರ್ಷಲ್‌ಗಳು ಭೇಟಿ ನೀಡಿ ದಂಡ ವಿಧಿಸುತ್ತಿದ್ದಾರೆ. ನಿಯಮ ಪಾಲಿಸದ ಉದ್ದಿಮೆಗಳನ್ನು ಮುಚ್ಚಿಸುತ್ತಿದ್ದಾರೆ. ಇಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುವ ಪರಿಸ್ಥಿತಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬಾರದು’ ಎಂದು ಮುಖ್ಯ ಆಯುಕ್ತರು ಹೇಳಿದರು.

ADVERTISEMENT

‘ನಗರದಲ್ಲಿ ಪ್ರತಿನಿತ್ಯ ಸುಮಾರ 6,000 ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಪಾಲಿಕೆಯು ನಗರದ ಜನರ ಜೊತೆ ಸೇರಿಕೊಂಡು ಲಸಿಕೆ ಅಭಿಯಾನ, ಕೋವಿಡ್‌ ಪರೀಕ್ಷೆ, ಸೊಂಕಿತರ ಪ್ರತ್ಯೇಕ ವಾಸ, ಮೊದಲಾದ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಎಲ್ಲರೂ ಸಹಕರಿಸಿದಾಗ ಮಾತ್ರ ಕೋವಿಡ್ ನಿಯಂತ್ರಣ ಸಾಧ್ಯ. ಸೋಂಕು ಹತೋಟಿಗೆ ಬಂದರೆ ಮಾತ್ರ ಮೊದಲಿನಂತೆ ವ್ಯಾಪಾರ-ವಹಿವಾಟು ನಡೆಸಲು ಸಾಧ್ಯ’ ಎಂದರು.

‘ಸಮಸ್ಯೆ ನಿವಾರಣೆ ದೃಷ್ಡಿಯಿಂದ ಪಾಲಿಕೆ ಮುಂಜಾಗ್ರತೆ ವಹಿಸುತ್ತಿದೆ. ಅದೇ ರೀತಿ ಹೋಟೆಲ್‌ ಉದ್ದಿಮೆಗಳೂ ಮುಂಜಾಗ್ರತಾ ಕ್ರಮ ವಹಿಸಬೇಕು. ಲೋಪದೋಷಗಳನ್ನು ತಿದ್ದಿಕೊಳ್ಳಬೇಕು. ಎಲ್ಲ ಸಿಬ್ಬಂದಿ ಕೋವಿಡ್ ಪರೀಕ್ಷೆ ಮಾಡಿಸಬೇಕು. ಅರ್ಹತೆ ಹೊಂದಿದ ಸಿಬ್ಬಂದಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚಿಸಬೇಕು. ಇದಕ್ಕೆ ಪಾಲಿಕೆಯ ಎಲ್ಲ ವಲಯದ ಜಂಟಿ ಆಯುಕ್ತರು ಹಾಗೂ ಆರೋಗ್ಯಾಧಿಕಾರಿಗಳು ಸಹಕರಿಸಲಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.