ಬೆಂಗಳೂರು: ಸಿನಿಮಾ ನಿರ್ಮಾಣಕ್ಕೆಂದು ಪಡೆದ ಸಾಲ ಹಿಂತಿರುಗಿಸದೇ ವಂಚಿಸಿದ ಆರೋಪದಡಿ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಅಮೃತಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಗರದ ತಲಕಾವೇರಿ ಲೇಔಟ್ ನಿವಾಸಿ ಎಚ್.ಜಿ. ಲಕ್ಷ್ಮೀ ಅವರ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
‘ನಟರಾದ ಶಿವರಾಜಕುಮಾರ್ ಹಾಗೂ ಗಣೇಶ್ ಅವರನ್ನು ಹಾಕಿಕೊಂಡು 'ಪ್ರೊಡಕ್ಷನ್ ನಂಬರ್ 06’ ಚಿತ್ರ ನಿರ್ಮಿಸುತ್ತಿರುವುದಾಗಿ ನಂಬಿಸಿ ₹92.50 ಲಕ್ಷ ಪಡೆದುಕೊಂಡಿದ್ದರು. ಈ ಪೈಕಿ ₹25 ಲಕ್ಷ ಮಾತ್ರ ಹಿಂದಿರುಗಿಸಿ, ಉಳಿದ ಮೊತ್ತವನ್ನು ವಾಪಸ್ ನೀಡದೆ ವಂಚಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘2023ರ ಅಕ್ಟೋಬರ್ನಲ್ಲಿ ಸೂರಪ್ಪ ಬಾಬು ಭೇಟಿಯಾಗಿ, ಚಿತ್ರ ನಿರ್ಮಾಣಕ್ಕೆ ಹಣಕಾಸು ನೆರವು ಕೋರಿದ್ದರು. ಹಂತ ಹಂತವಾಗಿ ಅವರಿಗೆ ಸಾಲದ ರೂಪದಲ್ಲಿ ಹಣ ನೀಡಿದ್ದೇನೆ. ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿತ್ತು. ನಂತರ ಪರಿಶೀಲಿಸಿದಾಗ ಶಿವರಾಜ್ ಕುಮಾರ್ ಮತ್ತು ಗಣೇಶ್ ಅವರ ಹಾಕಿಕೊಂಡು ಯಾವುದೇ ಚಿತ್ರ ನಿರ್ಮಿಸುತ್ತಿಲ್ಲ ಎಂಬುದು ಗೊತ್ತಾಯಿತು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.