ADVERTISEMENT

ಗಾರ್ಮೆಂಟ್ಸ್‌ ಕಾರ್ಮಿಕರ ಪ್ರತಿಭಟನೆ, ಪಿ.ಎಫ್‌. ಕಂತು ಪಾವತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2022, 20:45 IST
Last Updated 19 ಫೆಬ್ರುವರಿ 2022, 20:45 IST
ಆಕ್ಟೀವ್ ನೀಟ್ ಗಾರ್ಮೆಂಟ್ಸ್‌ ಎದುರು ಮಹಿಳಾ ಕಾರ್ಮಿಕರು ಪ್ರತಿಭಟನೆ ನಡೆಸಿದರು
ಆಕ್ಟೀವ್ ನೀಟ್ ಗಾರ್ಮೆಂಟ್ಸ್‌ ಎದುರು ಮಹಿಳಾ ಕಾರ್ಮಿಕರು ಪ್ರತಿಭಟನೆ ನಡೆಸಿದರು   

ಪೀಣ್ಯ ದಾಸರಹಳ್ಳಿ: ಆಕ್ಟೀವ್ ನೀಟ್ ಗಾರ್ಮೆಂಟ್ಸ್‌ ಕಾರ್ಮಿಕರ ಸಂಬಳದಲ್ಲಿ ಆಡಳಿತ ಮಂಡಳಿಯು ಕಡಿತ ಮಾಡಿರುವ ಭವಿಷ್ಯ ನಿಧಿಯ ಹಣವನ್ನು ಪೂರ್ಣ ಪ್ರಮಾಣದಲ್ಲಿ ಮರಳಿಸುವಂತೆ ಒತ್ತಾಯಿಸಿ ನೂರಾರು ಮಹಿಳಾ ಕಾರ್ಮಿಕರು ಗಾರ್ಮೆಂಟ್ಸ್ ಎದುರು ಪ್ರತಿಭಟನೆ ನಡೆಸಿದರು.

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಗೋಕುಲದಾಸ್ ಕಂಪನಿಯ ಅಂಗ ಸಂಸ್ಥೆಯಾದ ಆಕ್ಟೀವ್ ನೀಟ್ ಕಂಪನಿ ಏಳೆಂಟು ವರ್ಷಗಳಿಂದ ಕಾರ್ಮಿಕರ ವೇತನದಲ್ಲಿ ಭವಿಷ್ಯ ನಿಧಿ ಕಂತುಗಳ ಹಣವನ್ನು ಕಡಿತ ಮಾಡಿಕೊಂಡಿತ್ತು. ಆದರೆ ಅದನ್ನು ಭವಿಷ್ಯ ನಿಧಿ ಖಾತೆಗೆ ಜಮೆ ಮಾಡಿಲ್ಲ ಎಂದು ನೌಕರರು ದೂರಿದರು. ಕಚೇರಿಯಲ್ಲಿ ಈ ಬಗ್ಗೆ ವಿಚಾರಿಸಿದಾಗ, ‘ಆಡಳಿತ ಮಂಡಳಿಯವರು ಇಂದು ನಾಳೆ ಎನ್ನುತ್ತಾ ಕಾಲಹರಣ ಮಾಡಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಈಗಾಗಲೇ ನಮ್ಮನ್ನೆಲ್ಲಾ ಕೆಲಸದಿಂದ ತೆಗೆದುಹಾಕಿದ್ದಾರೆ. ನಮ್ಮ ಸಂಬಳದಿಂದ ಕಡಿತಗೊಳಿಸಿರುವ ಭವಿಷ್ಯನಿಧಿಯ ಪೂರ್ತಿ ಹಣವನ್ನು ಮರಳಿಸಬೇಕು’ ಎಂದು ಕಾರ್ಮಿಕರರು ಒತ್ತಾಯಿಸಿದರು.

ADVERTISEMENT

'ಒಂಬತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನನಗೆ ಬರಬೇಕಾದ ಬಾಕಿ ಹಣ ಬಂದಿಲ್ಲ. ಈ ನಡುವೆ ನಮ್ಮಣ್ಣತೀರಿಕೊಂಡರು. ಬಾಕಿ ಹಣಕ್ಕಾಗಿ ಕಣ್ಣೀರು ಹಾಕಿದರೂ ಇವರು ಕೊಟ್ಟಿಲ್ಲ' ಎಂದು ಕಾರ್ಮಿಕ ಮಹಿಳೆ ಸಾಕಮ್ಮ ಎಂ.ಜಿ ಆಕ್ರೋಶ ವ್ಯಕ್ತಪಡಿಸಿದರು.

'ನಾವು ಕೆಲಸ ಮಾಡುತ್ತಿದ್ದ ಕಾರ್ಖಾನೆಯ ಇಲ್ಲಿನ ಕಚೇರಿ ಮುಚ್ಚಿ ಎರಡು ವರ್ಷಗಳೇ ಕಳೆದಿವೆ. ಅದನ್ನು ತೆಲಂಗಾಣಕ್ಕೆ ಸ್ಥಳಾಂತರಿಸಿದ್ದಾರೆ. ಇನ್ನೊಂದು ವಾರಕ್ಕೆ ಈ ಕಾರ್ಖಾನೆಯನ್ನೂ ಮುಚ್ಚುತ್ತಾರೆ. ನಾಲ್ಕು ವರ್ಷಗಳಿಂದ ನಮಗೆ ಸಂದಾಯ ಆಗಬೇಕಾದ ಸಂಬಳ ಮತ್ತು ಪಿ.ಎಫ್ ಕಂತುಗಳ ಹಣವನ್ನು ಇನ್ನೂ ಕೊಟ್ಟಿಲ್ಲ' ಎಂದು ಸುನಿತಾ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.