ADVERTISEMENT

ಹಸಿರು ಮಾರ್ಗ: ಎರಡು ದಿನ ತಾಸಿಗೂ ಮೊದಲು ಸಂಚಾರ ಸ್ಥಗಿತ

ಹಸಿರು ಮಾರ್ಗದಲ್ಲಿ ಶನಿವಾರ–ಭಾನುವಾರ ಭಾಗಶಃ ರೈಲು ಸಂಚಾರ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 19:14 IST
Last Updated 17 ಸೆಪ್ಟೆಂಬರ್ 2020, 19:14 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: 'ನಮ್ಮ ಮೆಟ್ರೊ' ಹಸಿರು ಮಾರ್ಗದ ಆರ್.ವಿ. ರಸ್ತೆ ನಿಲ್ದಾಣದಿಂದ ಯಲಚೇನಹಳ್ಳಿ‌ ನಿಲ್ದಾಣದವರೆಗೆ ಇದೇ ಶನಿವಾರ ಮತ್ತು ಭಾನುವಾರದಂದು ಒಂದು ತಾಸು ಮೊದಲೇ ರೈಲು ಸಂಚಾರ ಸ್ಥಗಿತಗೊಳ್ಳಲಿದೆ.

ಎರಡನೇ ಹಂತದಲ್ಲಿನ ಯಲಚೇನಹಳ್ಳಿ- ಅಂಜನಾಪುರ ವಿಸ್ತರಿಸಿದ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆಗೆ ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ
ಎಂದು ಬೆಂಗಳೂರು ಮೆಟ್ರೊ ರೈಲು ಅಭಿವೃದ್ಧಿ ನಿಗಮ ಹೇಳಿದೆ. ಈ ನಿಲ್ದಾಣಗಳ ನಡುವೆ ಶನಿವಾರ- ಭಾನುವಾರ ರಾತ್ರಿ 8 ಗಂಟೆಗೆ ರೈಲು ಸಂಚಾರ ಸ್ಥಗಿತಗೊಳ್ಳಲಿದೆ.

ವಿಸ್ತರಿತ ಮಾರ್ಗದಲ್ಲಿ ಸಿಸ್ಟಂ ಮತ್ತು ರೈಲುಗಳ ಪರೀಕ್ಷೆಯನ್ನು ಈ ಅವಧಿಯಲ್ಲಿ ನಡೆಸಲಾಗುತ್ತದೆ.

ADVERTISEMENT

ನೇರಳೆ ಮಾರ್ಗದಲ್ಲಿನ ಪ್ರಯಾಣಿಕರು ಯಲಚೇನಹಳ್ಳಿ ನಿಲ್ದಾಣದ ಕಡೆಗೆ, ಮೆಜೆಸ್ಟಿಕ್‌ನಲ್ಲಿ ಹಸಿರು ಮಾರ್ಗದಲ್ಲಿ ರೈಲು ಬದಲಾಯಿಸಿ ಪ್ರಯಾಣಿಸಲು, ಬೈಯಪ್ಪನಹಳ್ಳಿ ನಿಲ್ದಾಣದಿಂದ ಸಂಜೆ 6.55ಕ್ಕೆ ಮತ್ತು ಮೈಸೂರು ರಸ್ತೆ ನಿಲ್ದಾಣದಿಂದ ಸಂಜೆ 7ಕ್ಕೆ ಹೊರಡುವ ರೈಲುಗಳಲ್ಲಿ ಪ್ರಯಾಣಿಸಬೇಕು. ನಂತರ ಪ್ರಯಾಣಿಸಿದರೆ, ಆರ್.ವಿ. ರಸ್ತೆ ನಿಲ್ದಾಣದವರೆಗೆ ಮಾತ್ರ ತಲುಪಬಹುದಾಗಿದೆ ಎಂದು ನಿಗಮ ಪ್ರಕಟಣೆಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.