ADVERTISEMENT

ಹಸಿರು ಕ್ಷೀಣ: ಬೆಂಗಳೂರು ನಗರದಲ್ಲಿ ಹೆಚ್ಚಿದ ತಾಪಮಾನ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 20:17 IST
Last Updated 11 ಮಾರ್ಚ್ 2023, 20:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬೇಸಿಗೆ ಆರಂಭಿಕ ದಿನಗಳಲ್ಲಿಯೇ ಬೆಂಗಳೂರಿನ ಜನರನ್ನು ಬಿಸಿಲು ಕಾಡುತ್ತಿದೆ. ವಾತಾವರಣದಲ್ಲಿ ಆಗಿರುವ ಬದಲಾವಣೆಯಿಂದ ರಾಜಧಾನಿಯಲ್ಲಿ ದಶಕದಿಂದ ಇತ್ತೀಚೆಗೆ ಬೇಸಿಗೆ ಅವಧಿಯಲ್ಲಿ ಹೆಚ್ಚಿನ ಉಷ್ಣಾಂಶ ದಾಖಲಾಗುತ್ತಿದೆ.

2011ರ ಏಪ್ರಿಲ್‌ನಲ್ಲಿ 34.4 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು. 2022ರ ಏಪ್ರಿಲ್‌ನಲ್ಲಿ 36.7 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. 2016ರ ಏಪ್ರಿಲ್‌ನಲ್ಲಿ ಅತ್ಯಧಿಕ 39.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು ಎಂದು ಇಲಾಖೆ ಅಂಕಿ–ಅಂಶಗಳು ಹೇಳುತ್ತವೆ.

30 ವರ್ಷಗಳ ಅಂಕಿಅಂಶಕ್ಕೆ ಹೋಲಿಸಿದಾಗ ಈ ವರ್ಷದ ಮಾರ್ಚ್‌ನಲ್ಲಿ 0.5 ಡಿಗ್ರಿಯಷ್ಟು ಉಷ್ಣಾಂಶ ಏರಿಕೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಯೋಜಿತವಲ್ಲದ ನಗರೀಕರಣ ಹಾಗೂ ಕ್ಷೀಣಿಸುತ್ತಿರುವ ಹಸಿರು ಹೊದಿಕೆಯ ಪರಿಣಾಮ ರಾಜಧಾನಿಯಲ್ಲಿ ತಾಪಮಾನ ಏರಿಕೆ ಕಾಣಿಸುತ್ತಿದೆ ಎಂದು ತಜ್ಞರು ಹೇಳುತ್ತಾರೆ.

ADVERTISEMENT

‘1970ರಲ್ಲಿ ಶೇ 68ರಷ್ಟು ಹಸಿರಿತ್ತು. ಈಗ ಅಂತಹ ಪರಿಸ್ಥಿತಿ ಇಲ್ಲ. ಹಸಿರು ಹೊದಿಕೆ ಕಡಿಮೆಯಾಗಿದೆ. ಅದೇ ಕಾರಣದಿಂದ ಬೇಸಿಗೆಯಲ್ಲಿ ತಾಪಮಾನ ಏರಿಕೆಯಾಗುತ್ತಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಹೇಳುತ್ತಾರೆ.

‘ವಾಹನಗಳ ಹೊಗೆ, ಮಾನವ ಚಟುವಟಿಕೆ ಹೆಚ್ಚಳ ಸೇರಿದಂತೆ ಅನೇಕ ಕಾರಣಕ್ಕೆ ವಾತಾವರಣವೂ ಬದಲಾಗಿದೆ’ ಎಂದು ಐಎಂಡಿ ವಿಜ್ಞಾನಿ ಪ್ರಸಾದ್‌ ಹೇಳುತ್ತಾರೆ.

ಜಲಮೂಲಗಳ ಕಣ್ಮರೆ ಹಾಗೂ ಕೆರೆಗಳ ಮಾಯ ಆಗಿರುವುದರಿಂದ ವಾತಾವರಣವೂ ಬದಲಾಗಿದೆ. ಹಿಂದೆ ಬೇಸಿಗೆ ಅವಧಿಯಲ್ಲೂ ಕೆರೆಗಳಲ್ಲಿ ನೀರು ಸಂಗ್ರಹ ಇರುತ್ತಿದ್ದರಿಂದ ವಾತಾವರಣದಲ್ಲಿ ತೇವಾಂಶ ಇರುತ್ತಿತ್ತು ಎಂದು ಪರಿಸರವಾದಿ ಡಾ.ಎ.ಎನ್‌.ಯಲ್ಲಪ್ಪ ರೆಡ್ಡಿ ಹೇಳುತ್ತಾರೆ.

‘ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬೇಸಿಗೆಯಲ್ಲಿ ಆಗಿರುವ ಅನುಭವವೇ ಈ ವರ್ಷವೂ ಆಗಬಹುದು. ಅದಕ್ಕಿಂತಲೂ ತಾಪಮಾನ ಏರಿಕೆ ಕಾಣಿಸಬಹುದು. ಬೆಂಗಳೂರಿನಲ್ಲಿ ಆಗಿರುವ ಹವಾಮಾನ ಬದಲಾವಣೆಯಿಂದ ಬೇಸಿಗೆಯಲ್ಲಿ ತೀವ್ರ ಬಿಸಿ, ಮಳೆಗಾಲದಲ್ಲಿ ವಿಪರೀತ ಚಳಿ ಕಾಣಿಸಿಕೊಳ್ಳಲಿದೆ’ ಎಂದು ಐಎಂಡಿ ತಜ್ಞರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.