ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿರುವ ಟಾಟಾ ಇನ್ಸ್ಟಿಟ್ಯೂಟ್ನ ಕಬ್ಬಿಣದ ಗೇಟ್ ಕಳಚಿ ಬಿದ್ದು ಭದ್ರತಾ ಸಿಬ್ಬಂದಿ ಮೃತಪಟ್ಟ ಘಟನೆಭಾನುವಾರ ಮಧ್ಯಾಹ್ನ ನಡೆದಿದೆ.
ಒಡಿಶಾದ ಗೌತಮ್ ಬಿಸ್ವಾಲ್ (24) ಮೃತ ವ್ಯಕ್ತಿ. ಘಟನೆಯಲ್ಲಿ ಬಿಹಾರದ ಅನಿಲ್ ಕುಮಾರ್ ಮತ್ತು ಒಡಿಶಾದ ವೈ. ನಾಯಕ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂರು ವರ್ಷಗಳ ಹಿಂದೆ ನಗರಕ್ಕೆಬಂದಿದ್ದ ಬಿಸ್ವಾಲ್, ಖಾಸಗಿ ಸೆಕ್ಯೂರಿಟಿಏಜೆನ್ಸಿ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಏಜೆನ್ಸಿ ಅವರನ್ನು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲಸಕ್ಕೆ ನಿಯೋಜಿಸಿತ್ತು.
ಆರಡಿ ಎತ್ತರ ಮತ್ತು 15 ಅಡಿ ಅಗಲದ 500 ಕೆ.ಜಿ. ತೂಕದ ಈ ಗೇಟ್ನ್ನು ನಾಲ್ಕು ತಿಂಗಳ ಹಿಂದೆ ಅಳವಡಿಸಲಾಗಿತ್ತು. ಭಾನುವಾರ ಬೆಳಿಗ್ಗೆ ಆರು ಗಂಟೆಗೆ ಕೆಲಸಕ್ಕೆ ಹಾಜರಾಗಿದ್ದ ಬಿಸ್ವಾಲ್, ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಲ್ಲಿಗೆ ಕಾರಿನಲ್ಲಿ ಬಂದಿದ್ದ ಸಂದರ್ಶಕರೊಬ್ಬರಿಗೆಗೇಟ್ ತೆಗೆಯುತ್ತಿದ್ದಂತೆ, ಅದು ಕಳಚಿ ಬಿದ್ದಿದೆ. ಇದನ್ನು ತಕ್ಷಣವೇ ಗಮನಿಸಿದ ಆಟೋ ಚಾಲಕರೊಬ್ಬರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಬಿಸ್ವಾಲ್ ಸ್ಥಳದಲ್ಲೇ ಮೃತಪಟ್ಟಿದ್ದರು.
‘ಅವಿವಾಹಿತರಾಗಿರುವ ಬಿಸ್ವಾಲ್ ಅವರ ಕುಟುಂಬ ಒಡಿಶಾದಲ್ಲಿದೆ. ಅವರಿಗೆ ಮಾಹಿತಿ ನೀಡಲಾಗಿದ್ದು, ಮೃತದೇಹ ಪಡೆಯಲು ನಗರಕ್ಕೆ ಬರುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದರು. ಕಳಪೆ ಕಾಮಗಾರಿಯೇ ಘಟನೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.