ಬೆಂಗಳೂರು: ನಗರದ ಹಲವೆಡೆ ಶುಭಕೋರುವ ಫ್ಲೆಕ್ಸ್ಗಳು ರಾರಾಜಿಸುತ್ತಿವೆ. ಸಚಿವರು, ಶಾಸಕರು, ಸ್ಥಳೀಯ ಮುಖಂಡರ ಹೆಸರಿನಲ್ಲಿ ಎಲ್ಲ ಪಕ್ಷಗಳ ನಾಯಕರಿರುವ ಫ್ಲೆಕ್ಸ್ಗಳನ್ನು ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ.
ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇವಸ್ಥಾನದ ಸುತ್ತಮುತ್ತ ಕಾಂಗ್ರೆಸ್, ಬಿಜೆಪಿ ನಾಯಕರ ಕಟೌಟ್ ಹಾಗೂ ಬ್ಯಾನರ್ಗಳ ಹಾವಳಿ ಹೆಚ್ಚಾಗಿದ್ದು, ಹಲವೆಡೆ ರಸ್ತೆಯಲ್ಲೇ ಅಳವಡಿಸಿರುವುದರಿಂದ ಸಂಚಾರ ದಟ್ಟಣೆಗೂ ಕಾರಣವಾಗಿದೆ.
ಅರಮನೆ ಮೈದಾನದಲ್ಲಿ ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆದ ಸಂದರ್ಭದಲ್ಲಿ ಬಳ್ಳಾರಿ ರಸ್ತೆಯುದ್ದಕ್ಕೂ ಫ್ಲೆಕ್ಸ್, ಬ್ಯಾನರ್ಗಳನ್ನು ಅಳವಡಿಸಲಾಗಿತ್ತು. ಅದನ್ನು ಕಂಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಲ್ಲವನ್ನೂ ತೆರವುಗೊಳಿಸಿ, ದಂಡ ಹಾಕಿ, ಎಫ್ಐಆರ್ ದಾಖಲಿಸಲು ಸೂಚಿಸಿದ್ದರು. ಅದರಂತೆ 12 ಎಫ್ಐಆರ್ ದಾಖಲಿಸುವುದರ ಜೊತೆಗೆ ₹12 ಲಕ್ಷ ದಂಡವನ್ನೂ ಬಿಬಿಎಂಪಿ ಅಧಿಕಾರಿಗಳು ವಿಧಿಸಿದ್ದರು.
ಮೈಸೂರು ರಸ್ತೆ–ಬಿಎಚ್ಇಎಲ್ ಜಂಕ್ಷನ್ನಲ್ಲಿ ಶಾಸಕ ಎಂ. ಕೃಷ್ಣಪ್ಪ ಹಾಗೂ ಅವರ ಮಕ್ಕಳಿಬ್ಬರ ಬೃಹತ್ ಕಟೌಟ್ಗಳನ್ನು ಸಂಚಾರ ದಟ್ಟಣೆ ನಿರ್ವಹಣೆಗೆ ಅಳವಡಿಸಲಾಗಿರುವ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾಗಳಿಗೆ ಅಡ್ಡಲಾಗಿ ಹಾಕಲಾಗಿದೆ. ಈ ಜಂಕ್ಷನ್ ಅನ್ನು ಸುಮಾರು ₹20 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಚನ್ನಪಟ್ಟಣ ಗೊಂಬೆಗಳ ಪ್ರತಿಕೃತಿಗಳನ್ನೂ ಅಳವಡಿಸಲಾಗುತ್ತಿದೆ. ಆದರೆ, ಇಲ್ಲಿ ಜಂಕ್ಷನ್ನಲ್ಲಿ ಕಟೌಟ್ ಹಾಗೂ ಬ್ಯಾನರ್ಗಳೂ ಯಾವಾಗಲೂ ರಾರಾಜಿಸುತ್ತಿರುತ್ತವೆ. ಬಿಬಿಎಂಪಿಯವರು ತೆರವು ಮಾಡುವುದಿಲ್ಲ ಎಂಬುದು ಸ್ಥಳೀಯರ ಆರೋಪ.
‘ಗೋವಿಂದರಾಜನಗರ, ವಿಜಯನಗರ, ಮೈಸೂರು ರಸ್ತೆ, ಜಂಕ್ಷನ್, ಪ್ರದೇಶಗಳಲ್ಲಿ ಶುಭ ಕೋರಿ ಫ್ಲೆಕ್ಸ್ಗಳನ್ನು ಹಾಕಲಾಗಿದೆ. ನಾಗರಿಕರು ಈ ಬಗ್ಗೆ ದೂರು ನೀಡಿದ್ದರೂ, ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಲು ಮುಂದಾಗುತ್ತಿಲ್ಲ. ಸಚಿವರು ಹೇಳಿದಾಗ ಮಾತ್ರ ಒಂದೆರಡು ದಿನ ಫ್ಲೆಕ್ಸ್ ತೆರವು ಕಾರ್ಯಾಚರಣೆ ನಡೆಸುತ್ತಾರೆ. ಬಿಬಿಎಂಪಿ ಅಧಿಕಾರಿಗಳು ಈ ವಿಷಯದಲ್ಲಿ ಜನರ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ನಂತರ ಫ್ಲೆಕ್ಸ್ಗಳು ರಾರಾಜಿಸುತ್ತಲೇ ಇರುತ್ತವೆ’ ಎಂದು ವಿಜಯನಗರ ನಿವಾಸಿ ವಿಶ್ವನಾಥ ದೂರಿದರು.
‘ಸಚಿವರು ಹಾಗೂ ಶಾಸಕರ ಹೆಸರಿನಲ್ಲೇ ಹಲವು ಫ್ಲೆಕ್ಸ್ಗಳಿವೆ. ಅವುಗಳನ್ನು ತೆರವುಗೊಳಿಸಲು ಮುಂದಾದರೆ ಹಿರಿಯ ಅಧಿಕಾರಿಗಳಿಂದ ನಮಗೆ ಒತ್ತಡಹಾಕಿ, ತೆರವುಗೊಳಿಸದಂತೆ ತಡೆಯಲಾಗುತ್ತದೆ. ಕೆಲವು ಬಾರಿ ಅವರೇ ಕರೆ ಮಾಡಿ ಬೈಯ್ಯುತ್ತಾರೆ. ಇನ್ನು ಅವರಿಗೆ ದಂಡ ವಿಧಿಸುವುದು, ಕ್ರಮ ತೆಗೆಕೊಳ್ಳುವುದು ಕಷ್ಟಸಾಧ್ಯ. ಅವರ ಆಪ್ತರಿಗೆ ನೋಟಿಸ್ ಕೊಟ್ಟರೂ ಅದು ಪ್ರಯೋಜನಕ್ಕೆ ಬರುವುದಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಬಿಬಿಎಂಪಿಯ ಅಧಿಕಾರಿಗಳು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.