
ಬೆಂಗಳೂರು: ಇಸ್ಕಾನ್ ಬೆಂಗಳೂರು ವತಿಯಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 41ನೇ ವರ್ಷದ ಕೃಷ್ಣ–ಬಲರಾಮ ರಥಯಾತ್ರೆಯು ಶ್ರದ್ಧಾಭಕ್ತಿಯಿಂದ ನಡೆಯಿತು.
ರಾಜಾಜಿನಗರದ ಹರೇ ಕೃಷ್ಣ ಗಿರಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಡೆದ ಈ ರಥಯಾತ್ರೆಯಲ್ಲಿ ಸಾವಿರಾರು ಭಕ್ತರು ಭಕ್ತಿ ಭಾವದಿಂದ ಹೆಜ್ಜೆ ಹಾಕಿದರು.
ಆಶೀರ್ವಚನ ನೀಡಿದ ತಂಬಿಹಳ್ಳಿಯ ಮಾಧವತೀರ್ಥ ಮಠದ ಪೀಠಾಧಿಪತಿ ವಿದ್ಯಾವಲ್ಲಭ ಮಾಧವತೀರ್ಥ ಸ್ವಾಮೀಜಿ, ‘ಇಂತಹ ಉತ್ಸವಗಳು ಜನರಲ್ಲಿ ಭಕ್ತಿ, ಶಾಂತಿ ಮತ್ತು ಒಗ್ಗಟ್ಟನ್ನು ಬೆಳೆಸುತ್ತವೆ. ಇದು ಕೇವಲ ಬೆಂಗಳೂರಿನ ಬೆಟ್ಟವಾಗಿರದೆ, ಸಾಕ್ಷಾತ್ ಶ್ರೀಕೃಷ್ಣ ಅವತಾರ ಮಾಡಿದ ಮಥುರಾ, ಬೃಂದಾವನದಂತಹ ಪುಣ್ಯ ಕ್ಷೇತ್ರವಾಗಿದೆ’ ಎಂದು ಹೇಳಿದರು.
ಇಸ್ಕಾನ್ ಬೆಂಗಳೂರಿನ ಅಧ್ಯಕ್ಷ ಮಧು ಪಂಡಿತ್ ದಾಸ್, ‘ಶ್ರೀಲ ಪ್ರಭುಪಾದರು ಪ್ರಾರಂಭಿಸಿದ ಈ ರಥಯಾತ್ರೆಯಿಂದ ಭಕ್ತಿ, ಸೇವೆ ಮತ್ತು ಮಾನವೀಯ ಮೌಲ್ಯಗಳು ಸಮಾಜದಲ್ಲಿ ಇನ್ನಷ್ಟು ಬಲವಾಗುತ್ತವೆ’ ಎಂದರು.
26 ಅಡಿ ಎತ್ತರದ ರಥವು, ಭಕ್ತಿಗೀತೆಗಳು ಮತ್ತು ಕೀರ್ತನೆಗಳ ನಡುವೆ ರಾಜಾಜಿ ನಗರದ ಬೀದಿಗಳಲ್ಲಿ ಸಾಗಿತು. ಈ ವೇಳೆ ಸಾವಿರಾರು ಜನರಿಗೆ ಉಚಿತ ಪ್ರಸಾದ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.