ADVERTISEMENT

ಕೆ.ಆರ್‌.ಪುರ: ಹ್ಯಾಟ್ರಿಕ್ ಜಯ ಸಾಧಿಸಿ ‘ಅರ್ಹ’ ಎನಿಸಿಕೊಂಡ ಭೈರತಿ ಬಸವರಾಜು

ಉಪಚುನಾವಣೆ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 10:00 IST
Last Updated 9 ಡಿಸೆಂಬರ್ 2019, 10:00 IST
   

ಬೆಂಗಳೂರು:ಬಿಬಿಎಂಪಿಯ ಪೂರ್ವದ ಹೆಬ್ಬಾಗಿಲಿನಂತಿರುವ ಕೆ.ಆರ್‌.ಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕಬಿಜೆಪಿ ಅಭ್ಯರ್ಥಿ ಬಿ.ಎ.ಬಸವರಾಜು (ಬೈರತಿ ಬಸವರಾಜು) ಹ್ಯಾಟ್ರಿಕ್ ಜಯದ ಸಾಧನೆ ಮಾಡಿದರು.

ಈ ಚುನಾವಣೆಯುಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಿನ ನೇರ ಹಣಾಹಣಿಗೆ ಸಾಕ್ಷಿಯಾಯಿತು. ಬಸವರಾಜು ತಮ್ಮ ಸಮೀಪದ ಸ್ಪರ್ಧಿ ಕಾಂಗ್ರೆಸ್‌ ಅಭ್ಯರ್ಥಿಎಂ.ನಾರಾಯಣ ಸ್ವಾಮಿ ವಿರುದ್ಧ62,646ಮತಗಳ ಅಂತರದಿಂದ ಜಯ ಗಳಿಸಿದರು.

2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಸವರಾಜು1,35,404 ಮತ ಪಡೆದುಕೊಂಡಿದ್ದರು. ಆ ಮೂಲಕ ಆಗ ಬಿಜೆಪಿಯಿಂದ ಸ್ಪರ್ಧಿಸಿದ್ದ ಎನ್‌.ಎಸ್‌.ನಂದೀಶ್ ರೆಡ್ಡಿ ವಿರುದ್ಧ 32,729 ಮತಗಳ ಅಂತರದಿಂದ ಜಯಗಳಿಸಿದ್ದರು.

ಬಿಜೆಪಿಯಿಂದ ಬಸವರಾಜು ಅವರಿಗೆ ಟಿಕೆಟ್‌ ನೀಡಿದಾಗ ನಂದೀಶ್‌ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದ ಪಕ್ಷಕ್ಕೆ ಹಿನ್ನಡೆಯಾಗದಂತೆ, ನಂದೀಶ್‌ ರೆಡ್ಡಿ ಅವರನ್ನುಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆ ಮೂಲಕ ಇಬ್ಬರೂ ಒಂದಾಗಿ ಚುನಾವಣೆಗೆ ಹೋಗುವಂತೆ ಬಿಜೆಪಿ ನೋಡಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.