ಬೆಂಗಳೂರು:ನಗರದ ಕೆ.ಆರ್. ಪುರ ವಲಯದಲ್ಲಿ ರೂಪಿಸಲಾಗಿರುವ ಕಾಡುಗೋಡಿ ವೃಕ್ಷೋದ್ಯಾನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಉದ್ಘಾಟಿಸಿದರು.
ಮಿನಿ ಲಾಲ್ ಬಾಗ್ನಂತಿರುವ ಈ ವೃಕ್ಷೋದ್ಯಾನವು 22 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಿದೆ. ಚಿಣ್ಣರ ಉದ್ಯಾನ, ವಾಯುವಿಹಾರ ನಡಿಗೆ ಪಥ, ದೈಹಿಕ ಕಸರತ್ತಿಗೆ ಮಿನಿ ಜಿಮ್ ವ್ಯವಸ್ಥೆಯೂ ಇದೆ. ಕುಡಿಯುವ ನೀರು, ಶೌಚಾಲಯ ಸೌಲಭ್ಯ ಒದಗಿಸಲಾಗಿದೆ.
ಬೆಂಗಳೂರಿನ ನಾಗರಿಕರು ವಿರಾಮದ ಸಮಯವನ್ನು ಹಸಿರು ವಾತಾವರಣದ ಮಧ್ಯೆ ಕಳೆಯಲು ಈ ವೃಕ್ಷೋದ್ಯಾನವು ಹೇಳಿ ಮಾಡಿಸಿದ ತಾಣದಂತಿದೆ. ಈ ಉದ್ಯಾನದಲ್ಲಿ ಕಾಣಸಿಗುವ ಪ್ರಾಣಿ ಪಕ್ಷಿಗಳು, ಕೀಟಗಳ ಬಗ್ಗೆ ಮಾಹಿತಿ ಫಲಕಗಳನ್ನು ಅಲ್ಲಲ್ಲಿ ಹಾಕಲಾಗಿದೆ. ಬಿಳಿ ಹುಬ್ಬಿನ ಪಿಕಳಾರ, ಬೆಳ್ಗಣ್ಣ, ಹರಟೆ ಮಲ್ಲ, ಅಡವಿ ಹರಟೆಮಲ್ಲ, ಗೊರವಂಕ, ಕಾಡು ಹೊರವಂಕ ಸೇರಿದಂತೆ ಅನೇಕ ಸ್ಥಳೀಯ ಪಕ್ಷಿಗಳು ವೃಕ್ಷೋದ್ಯಾನದ ಅಂದವನ್ನು ಹೆಚ್ಚಿಸಿವೆ. ಶ್ರೀಗಂಧ, ಬೀಟೆ, ಹೊನ್ನೆ ಸೇರಿದಂತೆ ಅನೇಕ ಮರ-ಗಿಡಗಳನ್ನು ನಡಿಗೆ ಪಥದ ಅಕ್ಕ ಪಕ್ಕ ನೆಡಲಾಗಿದೆ.
ಸುಮಧುರ ಇನ್ ಫ್ರಾಕಾನ್ ಪ್ರೈವೇಟ್ ಲಿಮಿಟೆಡ್, ಅಸೆಂಡಸ್ ಸರ್ವಿಸ್ ಇಂಡಿಯಾ ಲಿಮಿಟೆಡ್, ರೋಟರಿ ವೈಟ್ ಫೀಲ್ಡ್ ಸೆಂಟ್ರಲ್ ಟ್ರಸ್ಟ್ ನಂತಹ ಕಂಪನಿಗಳು ತಮ್ಮ ಸಾಮಾಜಿಕ ಹೊಣೆಗಾರಿಗೆ ನಿಧಿಯಿಂದ ಕಾಮಗಾರಿಗಳನ್ನು ಕೈಗೊಂಡು, ಅನೇಕ ಸೌಲಭ್ಯ ಕಲ್ಪಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.