ಬೆಂಗಳೂರು: ರಾಜ್ಯ ಸರ್ಕಾರ ನೀಡುವ 2022–23 ಮತ್ತು 2023–24ನೇ ಸಾಲಿನ ‘ಜಾನಪದ ಶ್ರೀ ಪ್ರಶಸ್ತಿ’, ‘ಜಕಣಾಚಾರಿ ಪ್ರಶಸ್ತಿ’ ಹಾಗೂ ‘ವರ್ಣಶಿಲ್ಪ ವೆಂಕಟಪ್ಪ ಪ್ರಶಸ್ತಿ’ಗೆ ಎಂಟು ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ.
‘ವರ್ಣಶಿಲ್ಪ ವೆಂಕಟಪ್ಪ ಪ್ರಶಸ್ತಿ’ಗೆ ಮೈಸೂರಿನ ಜಿ.ಎಲ್.ಎನ್. ಸಿಂಹ ಮತ್ತು ಕಲಬುರಗಿಯ ಬಸವರಾಜ ಎಲ್. ಜಾನೆ, ‘ಜಕಣಾಚಾರಿ ಪ್ರಶಸ್ತಿ’ಗೆ ಕಲಬುರಗಿಯ ಮಹದೇವಪ್ಪ ಎಲ್. ಶಿಲ್ಪಿ ಮತ್ತು ಚಿಕ್ಕಮಗಳೂರಿನ ಎಸ್.ಪಿ. ಜಯಣ್ಣಾಚಾರ್, ‘ಜಾನಪದ ಶ್ರೀ ಪ್ರಶಸ್ತಿ’ಗೆ ದಕ್ಷಿಣ ಕನ್ನಡದ ಅರುವ ಕೊರಗಪ್ಪ ಶೆಟ್ಟಿ (ಯಕ್ಷಗಾನ), ಬೀದರ್ನ ಕಲ್ಲಪ್ಪ ಮಿರ್ಜಾಪುರ (ರಿವಾಯತ್ ಪದಗಳು), ಚಿಕ್ಕಮಗಳೂರಿನ ಜಿ.ಪಿ. ಜಗದೀಶ್ (ವೀರಗಾಸೆ) ಹಾಗೂ ಚಿತ್ರದುರ್ಗದ ಹಲಗೆ ದುರ್ಗಮ್ಮ (ಹಲಗೆ ವಾದನ–ಲಾವಣಿ ಪದಗಳು) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ಈ ಪ್ರಶಸ್ತಿಗಳು ತಲಾ ₹ 5 ಲಕ್ಷ ನಗದನ್ನು ಒಳಗೊಂಡಿವೆ. ಕಲಾವಿದ ವಿ.ಟಿ. ಕಾಳೆ ಅವರ ಅಧ್ಯಕ್ಷತೆಯ ಸಮಿತಿ ಈ ಆಯ್ಕೆ ಮಾಡಿದೆ. ‘ಜಕಣಾಚಾರಿ ಪ್ರಶಸ್ತಿ’ಯನ್ನು ಜ.1ರಂದು ನಡೆಯುವ ವಿಶ್ವಕರ್ಮ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಪ್ರದಾನ ಮಾಡಲಾಗುವುದು. ಉಳಿದ ಪ್ರಶಸ್ತಿಗಳನ್ನು ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ತಿಂಗಳಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.