ಬೆಂಗಳೂರು: ನಗರದ ಉತ್ತರ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಪ್ರತಿಷ್ಠಿತ ಡಾ.ಕೆ.ಶಿವರಾಮ ಕಾರಂತ (ಎಸ್.ಕೆ) ಬಡಾವಣೆಯ 30 ಸಾವಿರ ನಿವೇಶನಗಳ ಹಂಚಿಕೆಗೂ ಮುನ್ನವೇ ಎರಡನೇ ಹಂತಕ್ಕೆ ಸರ್ವೆ ಕಾರ್ಯ ಶುರುವಾಗಿದೆ.
ಮೊದಲ ಹಂತದಲ್ಲಿ ಸುಮಾರು 3,546 ಎಕರೆ ಪ್ರದೇಶದಲ್ಲಿ 30 ಸಾವಿರ ನಿವೇಶನ ನಿರ್ಮಾಣ ಕಾರ್ಯ ಸಾಗಿದ್ದು, ಬಾಕಿ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಮೂರು ತಿಂಗಳು ಗಡುವು ಸಹ ನೀಡಲಾಗಿದೆ.
‘ಈ ಪ್ರಕರಣವು ನ್ಯಾಯಾಲಯದಲ್ಲಿ ಇನ್ನೂ ಇತ್ಯರ್ಥವಾಗಿಲ್ಲ. ನ್ಯಾಯಾಲಯ ಆದೇಶ ನೀಡಿದ ಕೂಡಲೇ ನಿವೇಶನಗಳ ಹಂಚಿಕೆಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಇದರಲ್ಲಿ ಸುಮಾರು 10-12 ಸಾವಿರ ನಿವೇಶನಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುತ್ತದೆ’ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮೂಲಗಳು ತಿಳಿಸಿವೆ.
ಕಾರಂತ ಬಡಾವಣೆ ವಿಸ್ತರಣೆಗೆ ಯಲಹಂಕ ಹಾಗೂ ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ ಒಟ್ಟು 18 ಗ್ರಾಮಗಳನ್ನು ಗುರುತಿಸಲಾಗಿದ್ದು, ಅಂದಾಜು ಮೂರು ಸಾವಿರ ಎಕರೆ ಜಮೀನು ಅಗತ್ಯವಿದೆ. ಹಾಗಾಗಿ ಈ ಗ್ರಾಮಗಳಲ್ಲಿ ಜಮೀನು ಗುರುತಿಸುವುದು, ಖಾತೆದಾರರು ಹಾಗೂ ವಿಸ್ತೀರ್ಣದ ವಿವರ, ಜಮೀನಿನ ನಕ್ಷೆ, ಚಕ್ಕುಬಂದಿ ಮತ್ತು ಇತರೆ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಡ್ರೋನ್ ಸರ್ವೆಯೂ ನಡೆಯುತ್ತಿದೆ.
ಯೋಜನೆಗೆ ಬೇಕಾಗಿರುವ ಜಮೀನು ಗುರುತಿಸುವ ಸಲುವಾಗಿ ಬಿಡಿಎ ಆಯುಕ್ತ ಎನ್.ಜಯರಾಮ್ ಅವರು ಭೂಸ್ವಾಧೀನಾಧಿಕಾರಿ ಜಿ.ಕೆ.ಕೃಪಾಲಿನಿ, ವಿಶೇಷ ಭೂಸ್ವಾಧೀನಾಧಿಕಾರಿಗಳಾದ ನಿಖಿತ ಚಿನ್ನಸ್ವಾಮಿ, ಪಿ.ಎಂ.ನಂದಿನಿ, ಬಿ.ಆರ್.ಹರೀಶ್ ನಾಯ್ಕ್ ಅವರ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಿದ್ದಾರೆ. ಪ್ರಾಥಮಿಕ ಮಾಹಿತಿ ಸಂಗ್ರಹಿಸಿ, ಹತ್ತು ದಿನದಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಈ ತಂಡವು ಎಂಜಿನಿಯರ್ಗಳು, ಅಧಿಕಾರಿಗಳು ಮತ್ತು ಭೂ ಮಾಪಕರೊಂದಿಗೆ ಸಮನ್ವಯ ಸಾಧಿಸಿ, ಉದ್ದೇಶಿತ ಯೋಜನೆಗೆ ಬೇಕಾಗಿರುವ ಜಮೀನನ್ನು ಗುರುತಿಸಿದೆ. ಅಲ್ಲದೇ ಈ ಭಾಗದಲ್ಲಿ ಬಡಾವಣೆ ವಿಸ್ತರಣೆ ಕಾರ್ಯಸಾಧುವೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಿ, ವರದಿ ಸಹ ನೀಡಲಿದೆ.
‘ಸರ್ವೆ ಕಾರ್ಯ ಬಹುತೇಕ ಮುಕ್ತಾಯಗೊಂಡಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಸ್ತರಣೆಗೆ ಗುರುತಿಸಿರುವ ಗ್ರಾಮಗಳು ಉದ್ದೇಶಿತ ಪೆರಿಫೆರಲ್ ವರ್ತುಲ ರಸ್ತೆಗೆ (ಪಿಆರ್ಆರ್) ಸಮೀಪದ ಪ್ರದೇಶಗಳಲ್ಲಿವೆ. ಅವುಗಳಲ್ಲಿ ಸೋಲದೇವನಹಳ್ಳಿ, ಚಿಕ್ಕಬಾಣಾವರ, ಜೆ. ಬಿ. ಕಾವಲ್, ಮಾವಳ್ಳಿಪುರ ಸಹ ಸೇರಿವೆ.
‘ಸರ್ವೆ ಕಾರ್ಯ ಮತ್ತು ಯೋಜನೆಗೆ ಸಂಬಂಧಿಸಿದಂತೆ ಸಿದ್ಧತೆ ಪೂರ್ಣವಾಗಿದೆ. ಶೀಘ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಯೋಜಿಸಲಾಗಿದೆ. ಅನುಮೋದನೆ ದೊರೆತ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಬಿಡಿಎ ಆಯುಕ್ತ ಎನ್.ಜಯರಾಮ್ ತಿಳಿಸಿದರು.
‘ಶಿವರಾಮ ಕಾರಂತ ಬಡಾವಣೆಗೆ ರೈತರಿಂದ ಬಲವಂತವಾಗಿ ಜಮೀನು ಪಡೆದುಕೊಂಡು ಈವರೆಗೂ ಬಿಡಿಎ ಪರಿಹಾರ ನೀಡಿಲ್ಲ. ಫಸಲು ನಾಶ ಮಾಡಿ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ. ಜಮೀನು ನೀಡಿದ ರೈತರಿಗೆ ಶೇಕಡ 40ರಷ್ಟು ಪರಿಹಾರ ನೀಡಬೇಕೆಂದು ತೀರ್ಮಾನವಾಗಿತ್ತು. ಆದರೆ ಇದುವರೆಗೂ ನೀಡಿಲ್ಲ. ಕೆಲವರು ಪರಿಹಾರ ಕೋರಿ ನ್ಯಾಯಾಲಯಕ್ಕೆ ಹೋಗಿದ್ದಾರೆ. ಹಾಗಾಗಿ ಬಡಾವಣೆ ವಿಸ್ತರಣೆಗೆ ವಿರೋಧ ಇದೆ’ ಎಂದು ರೈತ ಮುಖಂಡ ಮಾವಳ್ಳಿಪುರ ಶ್ರೀನಿವಾಸ್ ಹೇಳಿದರು.
‘ನ್ಯಾಯಯುತ ಪರಿಹಾರ ನೀಡಿ ಜಮೀನು ಸ್ವಾಧೀನಪಡಿಸಿಕೊಳ್ಳಬಹುದು. ಅಂಜನಾಪುರ, ಕೆಂಪೇಗೌಡ ಬಡಾವಣೆ, ಅರ್ಕಾವತಿ ಬಡಾವಣೆಗಾಗಿ ಜಮೀನು ಕಳೆದುಕೊಂಡವರು ಈಗಲೂ ಪರಿಹಾರಕ್ಕಾಗಿ ಬಿಡಿಎ ಕಚೇರಿಗೆ ಅಲೆದಾಡುತ್ತಿದ್ದಾರೆ. ಬಡಾವಣೆ ವಿಸ್ತರಣೆಗೆ ಗುರುತಿಸಿರುವ ಗ್ರಾಮಗಳಲ್ಲಿನ ಜಮೀನುಗಳಲ್ಲಿ ಶೇಕಡ 60ರಷ್ಟು ಈಗಾಗಲೇ ಅಭಿವೃದ್ದಿ ಆಗಿವೆ ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.