ADVERTISEMENT

Karnataka Elections 2023: ಮತಬೇಟೆಗಾಗಿ ಫ್ಲೆಕ್ಸ್, ಬ್ಯಾನರ್ ಪೈಪೋಟಿ

ಸಂತೋಷ ಜಿಗಳಿಕೊಪ್ಪ
Published 20 ಫೆಬ್ರುವರಿ 2023, 22:30 IST
Last Updated 20 ಫೆಬ್ರುವರಿ 2023, 22:30 IST
ದೀಪಾಂಜಲಿ ನಗರದ ಮೆಟ್ರೊ ನಿಲ್ದಾಣದಲ್ಲಿ ಪಿಲ್ಲರ್‌ಗಳಿಗೆ ಅನಧಿಕೃತವಾಗಿ ಬ್ಯಾನರ್ ಹಾಗೂ ಫ್ಲೆಕ್ಸ್‌ ಅಳವಡಿಸಿರುವುದು    – ಪ್ರಜಾವಾಣಿ ಚಿತ್ರಗಳು/ ಪ್ರಶಾಂತ್ ಎಚ್‌.ಜಿ
ದೀಪಾಂಜಲಿ ನಗರದ ಮೆಟ್ರೊ ನಿಲ್ದಾಣದಲ್ಲಿ ಪಿಲ್ಲರ್‌ಗಳಿಗೆ ಅನಧಿಕೃತವಾಗಿ ಬ್ಯಾನರ್ ಹಾಗೂ ಫ್ಲೆಕ್ಸ್‌ ಅಳವಡಿಸಿರುವುದು – ಪ್ರಜಾವಾಣಿ ಚಿತ್ರಗಳು/ ಪ್ರಶಾಂತ್ ಎಚ್‌.ಜಿ   

ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ ಬೇಟೆಗಾಗಿ ರಾಜಕಾರಣಿಗಳು ಹಾಗೂ ಮುಖಂಡರು ನಾನಾ ಕಸರತ್ತು ಆರಂಭಿಸಿದ್ದಾರೆ. ಹೈಕೋರ್ಟ್ ಆದೇಶ ಉಲ್ಲಂಘಿಸಿ ನಗರದ ಹಲವು ಪ್ರದೇಶಗಳಲ್ಲಿ ಫ್ಲೆಕ್ಸ್– ಬ್ಯಾನರ್ ಅಳವಡಿಸುತ್ತಿದ್ದು, ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಜರಾಜೇಶ್ವರಿ ನಗರ, ನಾಯಂಡನಹಳ್ಳಿ, ವಿಜಯನಗರ, ರಾಜಾಜಿನಗರ, ಮಲ್ಲೇಶ್ವರ, ಯಶವಂತಪುರ, ಪೀಣ್ಯ, ಚಿಕ್ಕಪೇಟೆ, ಶ್ರೀರಾಮಪುರ, ಓಕಳಿಪುರ, ಗಾಂಧಿ ನಗರ, ಬಸವನಗುಡಿ, ಬನಶಂಕರಿ, ಜಯನಗರ, ಕೆಂಗೇರಿ, ರೇಸ್‌ಕೋರ್ಸ್ ರಸ್ತೆ, ಅರಮನೆ ರಸ್ತೆ... ಹೀಗೆ ಹಲವು ಪ್ರದೇಶಗಳ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಅಳವಡಿ ಸಲಾಗಿದೆ.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಹಾಲಿ ಶಾಸಕರು, ಟಿಕೆಟ್ ಆಕಾಂಕ್ಷಿಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಬೆಂಬಲಿಗರ ಫೋಟೊಗಳು ಬ್ಯಾನರ್ ಹಾಗೂ ಫ್ಲೆಕ್ಸ್‌ ಗಳಲ್ಲಿವೆ. ಹಬ್ಬ, ವಿಶೇಷ ದಿನಗಳ ಶುಭಾಶಯ ಹಾಗೂ ಕಾಮಗಾರಿ ಪ್ರಗತಿ ಬರಹಗಳನ್ನು ಮುದ್ರಿಸಲಾಗಿದೆ.

ADVERTISEMENT

ರಾಜಕೀಯ ಪಕ್ಷಗಳ ರಾಷ್ಟ್ರೀಯ ನಾಯಕರು ನಗರಕ್ಕೆ ಬರುವ ಸಂದರ್ಭದಲ್ಲೂ ಸ್ವಾಗತ ಕೋರುವ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಎಲ್ಲೆಂದರಲ್ಲಿ ಅಳವಡಿಸಲಾಗುತ್ತಿದೆ. ಈ ವರ್ತನೆಯಿಂದ ಸಾರ್ವಜನಿಕ ಸ್ಥಳಗಳು ವಿರೂಪಗೊಳ್ಳುತ್ತಿರುವುದಾಗಿ
ಸಾರ್ವಜನಿಕರು ದೂರುತ್ತಿದ್ದಾರೆ.

ಕಣ್ಮುಚ್ಚಿ ಕುಳಿತ ಬಿಬಿಎಂಪಿ ಅಧಿ ಕಾರಿಗಳು: ‘ಬಿಬಿಎಂಪಿ ವ್ಯಾಪ್ತಿ ಯಲ್ಲಿ ಅನಧಿಕೃತ ಜಾಹೀರಾತು ಅಳ ವಡಿಕೆಯಾಗದಂತೆ ತಡೆಯಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.

ಆದೇಶ ಉಲ್ಲಂಘಿಸಿ ಜಾಹೀರಾತು ಫಲಕ, ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸುತ್ತಿದ್ದರೂ ಬಿಬಿಎಂಪಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ರಾಜಕಾರಣಿಗಳಿಗೆ ಹೆದರಿ, ಕ್ರಮ ಜರುಗಿಸಲು ಬಿಬಿಎಂಪಿ ಅಧಿಕಾರಿಗಳು ಹಿಂದೇಟು ಹಾಕುತ್ತಿ ದ್ದಾರೆ.

‘ವಿಜಯನಗರ, ಗೋವಿಂದ ರಾಜನಗರಗಳಲ್ಲಿ ಪೈಪೋಟಿಗೆ ಬಿದ್ದವರಂತೆ ರಾಜಕಾರಣಿಗಳು ಫ್ಲೆಕ್ಸ್ ಹಾಗೂ ಬ್ಯಾನರ್‌ ಕಟ್ಟಿದ್ದಾರೆ. ಮರಗಳು, ಕಟ್ಟಡಗಳು, ರಸ್ತೆ ಪಕ್ಕದ ಗೋಡೆ ಗಳು, ಮೆಟ್ರೊ ಪಿಲ್ಲರ್‌ಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲೆಲ್ಲ ಫ್ಲೆಕ್ಸ್–ಬ್ಯಾನರ್‌ಗಳಿವೆ. ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಸ್ಥಳೀಯ ನಿವಾಸಿಯೊಬ್ಬರು ದೂರಿದರು.

‘ಸ್ಥಳೀಯ ಶಾಸಕರು, ಅವರ ಬೆಂಬಲಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ಅಳವಡಿಸಿದ್ದಾರೆ. ಅವುಗಳನ್ನು ತೆರವು ಮಾಡಲು ಅಧಿಕಾರಿಗಳು ಭಯಪಡುತ್ತಿದ್ದಾರೆ. ಸಾಮಾನ್ಯ ಜನರು ಯಾರಾದರೂ ಫ್ಲೆಕ್ಸ್–ಬ್ಯಾನರ್ ಅಳವಡಿಸಿದರೆ ಮಾತ್ರ ತ್ವರಿತ ಕ್ರಮ ಜರುಗಿಸುತ್ತಾರೆ’ ಎಂದು ಅವರು ಹೇಳಿದರು.

‘ಹೈಕೋರ್ಟ್ ಆದೇಶ ಜಾರಿಗೊಳಿಸು ವಲ್ಲಿ ಬಿಬಿಎಂಪಿ ಅಧಿಕಾರಿಗಳು ವಿಫಲ ರಾಗಿದ್ದಾರೆ. ನ್ಯಾಯಾಲಯವೇ ಮಧ್ಯ ಪ್ರವೇಶಿಸಿ, ಸಾರ್ವಜನಿಕ ಸ್ಥಳಗಳನ್ನು ರಕ್ಷಿಸಬೇಕು. ಚುನಾವಣೆ ಆಯೋಗವೂ ಈ ಬಗ್ಗೆ ಗಮನಹರಿಸಬೇಕು’ ಎಂದು ಸಾರ್ವಜನಿಕರು ಕೋರಿದ್ದಾರೆ.

ಪೊಲೀಸರೂ ಮೌನ: ಸಾರ್ವಜನಿಕ ಸ್ಥಳಗಳಲ್ಲಿ ಜಾಹೀರಾತು ಫಲಕ, ಫ್ಲೆಕ್ಸ್ ಹಾಗೂ ಬ್ಯಾನರ್ ಅಳವಡಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಾರ್ವಜನಿಕ ಸ್ಥಳಗಳ ವಿರೂಪ ತಡೆ ಕಾಯ್ದೆಯಲ್ಲಿ ಅವಕಾಶವಿದೆ. ಆದರೆ, ರಾಜಕಾರಣಿಗಳ ಪ್ಲೆಕ್ಸ್–ಬ್ಯಾನರ್ ವಿಚಾರದಲ್ಲಿ ಪೊಲೀಸರೂ ಮೌನವಾಗಿದ್ದಾರೆ.

ಬಸವೇಶ್ವರನಗರ ‍ಪೊಲೀಸ್ ಠಾಣೆ ಕಟ್ಟಡದ ಗೋಡೆಗೆ ಬ್ಯಾನರ್ ಕಟ್ಟಿದ್ದ ಕ್ಕಾಗಿ ಸರ್ವೋದಯ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆಡಳಿತ ಮಂಡಳಿ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಎಫ್‌ಐಆರ್ ದಾಖಲಿಸಿಕೊಂಡಿದ್ದರು.

‘ಓ ಮೈ ಲವ್’ ಸಿನಿಮಾ ಜಾಹೀರಾತು ಹಾಕಿದ್ದ ಆರೋಪದಡಿ ನಿರ್ದೇಶಕ ಸ್ಮೈಲ್ ಸೀನು ಹಾಗೂ ಇತರರ ವಿರುದ್ಧವೂ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿತ್ತು. ಆದರೆ, ರಾಜಕಾರಣಿಗಳು ಹಾಗೂ ಅವರ ಬೆಂಬಲಿಗರ ಮೇಲೆ ಪ್ರಕರಣ ದಾಖಲಿಸಿ ಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ.

ಬಾಪೂಜಿ ನಗರದಲ್ಲಿ ಅಳವಡಿಸಿರುವ ಫ್ಲೆಕ್ಸ್‌ಗಳು



‘ಮುಖ್ಯಮಂತ್ರಿ, ಸಚಿವರ ಫೋಟೊ’

‘ವಿಜಯನಗರ, ರಾಜಾಜಿನಗರ, ದೀಪಾಂಜಲಿನಗರ, ರಾಜರಾಜೇಶ್ವರಿನಗರಗಳಲ್ಲಿ ಅಳವಡಿಸಿರುವ ಫ್ಲೆಕ್ಸ್‌ಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಲವು ಸಚಿವರ ಫೋಟೊಗಳಿವೆ. ಹೈಕೋರ್ಟ್ ಆದೇಶ ಜಾರಿಗೊಳಿಸಬೇಕಾದ ಆಡಳಿತ ಪಕ್ಷದವರೇ ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್ ಅಳವಡಿಸುತ್ತಿದ್ದಾರೆ. ಇದು ಯಾವ ನ್ಯಾಯ’ ಎಂದು ಸಾರ್ವಜನಿಕರು ಪ್ರಶ್ನಿಸಿದರು.

‘ಬಿಜೆಪಿಯವರು ತಮ್ಮ ಸರ್ಕಾರದ ಸಾಧನೆ ಪೋಸ್ಟರ್‌ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ್ದಾರೆ. ಸರ್ಕಾರದ ವಿರುದ್ಧ ಕಾಂಗ್ರೆಸ್‌ನವರೂ ಪೋಸ್ಟರ್‌ ಹಾಕಿದ್ದಾರೆ. ಎರಡೂ ಪಕ್ಷದಿಂದಲೂ ಸಾರ್ವಜನಿಕ ಸ್ಥಳಕ್ಕೆ ಧಕ್ಕೆ ಆಗುತ್ತಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.