
ಬೆಂಗಳೂರು: ‘ಶಿಕ್ಷಣಕ್ಕೆ ಅವಕಾಶ ದೊರೆತ ಬಳಿಕ ದೇಶದಲ್ಲಿ ವಿದ್ಯಾರ್ಥಿನಿಯರ ದಾಖಲಾತಿಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಆದರೂ ಇನ್ನಷ್ಟು ಹೆಚ್ಚಳಕ್ಕೆ ಒತ್ತು ನೀಡಬೇಕು‘ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಎಸ್.ಅಹಲ್ಯಾ ಶರ್ಮ ತಿಳಿಸಿದರು.
ಭಾರತೀಯ ವಿದ್ವತ್ ಪರಿಷತ್, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ರಾಷ್ಟ್ರ ಸೇವಿಕಾ ಸಮಿತಿ ಸಂಸ್ಥೆ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಭಾರತಿ’ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ದೇಶದಲ್ಲಿ ವಿದ್ಯಾರ್ಥಿನಿಯರ ದಾಖಲಾತಿ ಪ್ರಮಾಣ ಶೇ 28.5ರಷ್ಟಿದ್ದರೆ, ಕರ್ನಾಟಕದಲ್ಲಿ ಶೇ 34.81ರಷ್ಟಿದೆ. ಒಂದು ದಶಕದಲ್ಲಿ ದಾಖಲಾತಿಯಲ್ಲಿ ಹೆಚ್ಚಳವಾಗಿರುವುದನ್ನು ಅಂಕಿ ಸಂಖ್ಯೆಗಳೇ ಹೇಳುತ್ತವೆ. ಮಹಿಳೆಯರಂತೂ ಶಿಕ್ಷಣದ ಮೂಲಕವೇ ಬದಲಾವಣೆಗೆ ಕಾರಣರಾಗಿದ್ದಾರೆ ಎಂದು ಹೇಳಿದರು.
‘ದಾಖಲಾತಿ ಹೆಚ್ಚಿಸಲು ಸರ್ಕಾರದಿಂದ ಪ್ರಯತ್ನಗಳು ನಡೆದರೂ, ಗ್ರಾಮೀಣ, ಆದಿವಾಸಿ ಹಾಗೂ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಶಿಕ್ಷಣದ ಗುಣಮಟ್ಟ, ಉದ್ಯೋಗಕ್ಕೆ ಸೇರಲು ಹಲವು ಅಡೆತಡೆ ಎದುರಿಸುತ್ತಿದ್ದಾರೆ. ಮಹಿಳಾ ಶಿಕ್ಷಣಕ್ಕೆ, ವಿಶೇಷವಾಗಿ ಉನ್ನತ ಶಿಕ್ಷಣ, ಕೌಶಲ ಅಭಿವೃದ್ಧಿ ಅಧ್ಯಯನಕ್ಕೆ ಸಮಗ್ರ ದೃಷ್ಟಿಕೋನವುಳ್ಳ ಚರ್ಚೆಯಾಗಬೇಕಿದೆ’ ಎಂದು ತಿಳಿಸಿದರು.
ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ, ವಿಶ್ವವಿದ್ಯಾಲಯ ಕುಲಸಚಿವ ಗಿರೀಶ್ ಚಂದ್ರ, ಡೀನ್ ವಿ.ಶಿವಾನಿ, ವಿಭು ಅಕಾಡೆಮಿ ಸಂಸ್ಥಾಪಕಿ ವಿ.ಬಿ.ಆರತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.