
ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಎರಡನೇ ದಿನವಾದ ಶುಕ್ರವಾರ ವಿಶಿಷ್ಟ, ವಿಭಿನ್ನ ಕೊಂಬುಗಳ ಜಾನುವಾರುಗಳನ್ನು ನೋಡಲು ಜನರು ಮುಗಿಬಿದ್ದರು.
ಆಸಿಲ್ ಕೋಳಿ, ಬ್ಯಾಟರಿ ಚಾಲಿತ ಸೌದೆ ಒಲೆ, ಮನೆಯಲ್ಲೇ ಇಟ್ಟುಕೊಳ್ಳಬಹುದಾದ ಸಣ್ಣ ಗಿರಣಿಗಳು, ಔಷಧ ಸಿಂಪಡಿಸಬಲ್ಲ ಡ್ರೋನ್ಗಳು ಒಂದೆಡೆ ಗಮನ ಸೆಳೆದರೆ, ಇನ್ನೊಂದೆಡೆ ಮೊಗದಗಲ ಅರಳಿ ನಿಂತ ಸೂರ್ಯಕಾಂತಿ ಹೂವುಗಳೊಂದಿಗೆ ಫೋಟೊ ತೆಗೆದುಕೊಳ್ಳುವುದರಲ್ಲಿ ಯುವಜನರು ನಿರತರಾಗಿದ್ದರು.
ಬೆಳಿಗ್ಗೆಯಿಂದಲೇ ತಂಡೋಪತಂಡವಾಗಿ ಬಂದವರು ವೇದಿಕೆ ಕಡೆಗೆ ತಲೆ ಹಾಕುತ್ತಿರಲಿಲ್ಲ. ಪ್ರದರ್ಶನಗಳತ್ತ ತೆರಳಿ ಕುತೂಹಲದಿಂದ ನೋಡಿ, ವಿವರ ಪಡೆಯುತ್ತಿದ್ದರು.
ನಾಟಿಕೋಳಿಯಂತೆ ಮನೆಯ ಹಿತ್ತಿಲಲ್ಲಿ ಸಾಕಬಹುದಾದ ಅಸಿಲ್ ಕ್ರಾಸ್ (ಅಸಲಿ ಕೋಳಿ ಕ್ರಾಸ್) ಕೋಳಿಗಳನ್ನು ನೋಡಿ ಆಕರ್ಷಿತರಾಗುತ್ತಿದ್ದ ಅನೇಕರು ಪಕ್ಕದಲ್ಲೇ ಮಾರುತ್ತಿದ್ದ ಅವುಗಳ ಮರಿಗಳನ್ನು ಖರೀದಿಸಿ ಒಯ್ದರು. ಮಾಂಸಕ್ಕೂ, ಮೊಟ್ಟೆಗೂ ಬಳಸಬಹುದಾದ ಕೋಳಿಗಳು ಇವಾಗಿದ್ದು, ನಾಟಿಕೋಳಿಗಿಂತ ಎರಡು ಪಟ್ಟು ದೊಡ್ಡದಾಗಿ ಬೆಳೆಯುತ್ತವೆ ಎಂದು ಮಾರಾಟಗಾರರು ಮಾಹಿತಿ ನೀಡಿದರು.
ಕಳಿಂಗ ಬ್ರೌನ್, ಗಿರಿರಾಜ ಕೋಳಿಗಳು, ಮಾಂಸತಳಿ ಬಾತುಕೋಳಿ, ಮೊಟ್ಟೆತಳಿ ಬಾತುಕೋಳಿಗಳ ಬಗ್ಗೆಯೂ ಜನರಿಗೆ ಕುತೂಹಲ ಉಂಟಾಗಿತ್ತು.
ಬ್ಯಾಟರಿ ಚಾಲಿತ ಸೌದೆ ಒಲೆ: ಬ್ಯಾಟರಿ ಇದ್ದ ಮೇಲೆ ಸೌದೆ ಯಾಕೆ ಎಂದು ಪ್ರಶ್ನೆ ಕೇಳುತ್ತಲೇ ಅನೇಕರು ಸೌದೆ ಒಲೆಯನ್ನು ಕುತೂಹಲದಿಂದ ನೋಡಿದರು. ಸೌದೆಯ ನಾಲ್ಕು ಸಣ್ಣ ತುಂಡುಗಳಿದ್ದರೆ ಒಂದು ಮನೆಗೆ ಒಂದು ಹೊತ್ತಿನ ಆಹಾರವನ್ನು ತಯಾರಿಸಲು ಸಾಧ್ಯ. ಬೆಂಕಿ ನಂದದಂತೆ ನಿಧಾನವಾಗಿ ಗಾಳಿಯನ್ನು ಬ್ಯಾಟರಿ ವ್ಯವಸ್ಥೆ ಮೂಲಕ ಮಾಡಲಾಗಿದೆ. ಹೊಗೆಯೂ ಹೆಚ್ಚಿಲ್ಲದ, ಸೌದೆಯೂ ಹೆಚ್ಚು ಬೇಕಾಗಿಲ್ಲದ, ಹಳ್ಳಿ ಮನೆಗಳಿಗೆ ಹೊಂದಿಕೆಯಾಗುವ ಈ ಒಲೆಯು ಜನರನ್ನು ಸೆಳೆದಿತ್ತು.
ಬೀಜೋತ್ಪಾದನೆಗೆ ಪ್ರಸಿದ್ಧವಾದ ನಾಟಿ ಸುವರ್ಣ ಟಗರು ತನ್ನ ಬೆಲೆಯಿಂದಲೇ ಗೈರತ್ತು ಪಡೆದಿತ್ತು. ಟಗರು ಬೇಕಿದ್ದರೆ ಅದು ಎಷ್ಟು ಕೆ.ಜಿ. ಇದೆ ಎಂಬುದರ ಮೇಲೆ ಬೆಲೆ ನಿರ್ಧರಿಸಲಾಗಿತ್ತು. ನಾಟಿ ಹಸುವಿನಷ್ಟು ದೊಡ್ಡದಾಗಿದ್ದ ಈ ಟಗರುಗಳು 80ರಿಂದ 85 ಕೆ.ಜಿ. ತೂಕದವರೆಗೆ ಇದ್ದವು. ಕೆ.ಜಿ.ಗೆ ₹3000 ದರ ನಿಗದಿ ಮಾಡಲಾಗಿದ್ದು, 80 ಕೆ.ಜಿ.ಯ ಟಗರಿಗೆ ₹2.40 ಲಕ್ಷ ಬೆಲೆ ನಿಗದಿ ಮಾಡಲಾಗಿತ್ತು.
ಶ್ರೀಕೃಷ್ಣ ಗೋಶಾಲಾ ಮತ್ತು ಬೇರೆ ಬೇರೆ ಗೋಶಾಲೆಯವರ ಪ್ರದರ್ಶನದಲ್ಲಿದ್ದ ವಿವಿಧ ನಮೂನೆಯ ಕೊಂಬುಗಳಿದ್ದ ಹಳ್ಳಿಕಾರ್, ಓಂಗಲ್, ಬದ್ರಿ, ಅಧಿಕ ಹಾಲು ಕೊಡುವ ಎಮ್ಮೆ, ಕೊಂಬು ಇಲ್ಲದ ರಾಠಿ ಮುಂತಾದ ತಳಿಗಳು ತಮ್ಮ ವೈಶಿಷ್ಟ್ಯದ ಕಾರಣಕ್ಕೆ ಗಮನ ಸೆಳೆದವು. ಗಾಣದ ಎತ್ತು, ಉದ್ದ ಕಿವಿಯ ಆಡುಗಳನ್ನು ನೋಡುವುದಕ್ಕೂ ಪ್ರೇಕ್ಷಕರ ಸಂಖ್ಯೆ ಹೆಚ್ಚಿತ್ತು.
ಕತ್ತಿ, ಚಾಕುಗೆ ಬೇಡಿಕೆ: ಮನೆಯಲ್ಲಿ ಬಳಸಬಹುದಾದ ಕತ್ತಿ, ಚಾಕುಗಳು ವೈವಿಧ್ಯಮಯವಾಗಿದ್ದರಿಂದ ಜನರು ಖರೀದಿಸಲು ಮುಗಿಬಿದ್ದಿದ್ದರು. ಜೇಬಿನಲ್ಲಿ ಇಟ್ಟುಕೊಂಡು ಹೋಗಬಲ್ಲ ಸಣ್ಣ ಚಾಕು, ಕತ್ತಿಗಳಿಂದ ಹಿಡಿದು ಗಿಡಗಳನ್ನೆಲ್ಲ ಸಲೀಸಾಗಿ ಸವುರಬಲ್ಲ ದೊಡ್ಡ ಕತ್ತಿಗಳೂ ಇದ್ದವು.
ತಾಟುಗಳು: ತಾಟುಗಳಲ್ಲಿ ಬೆಳೆದಿದ್ದ ಆಲಂಕಾರಿಕ ಸೂರ್ಯಕಾಂತಿ, ಚೆಂಡು ಹೂವುಗಳ ಮುಂದೆ ನಿಂತು ಫೋಟೊ ತೆಗೆಯುವವರ ದಂಡೇ ನೆರದಿತ್ತು. ಮಿಶ್ರತಳಿಯ ಕರ್ಬುಜಾ, ಯುರೋಪಿಯನ್ ಸೌತೆಕಾಯಿ, ಬೀನ್ಸ್ ಆಕರ್ಷಕವಾಗಿದ್ದವು.
ಆಹಾರ ಮೇಳದಲ್ಲಿ ದಾವಣಗೆರೆ ಬೆಣ್ಣೆದೋಸೆ, ಪಡ್ಡು, ಮಂಡಕ್ಕಿ ಮಿರ್ಚಿ, ತುಮಕೂರು ತಟ್ಟೆ ಇಡ್ಲಿ, ಮಂಗಳೂರು ಮೀನು, ಉತ್ತರ ಕರ್ನಾಟಕದ ರೊಟ್ಟಿ, ಎಣಗಾಯಿ ಪಲ್ಯ, ಹುಬ್ಬಳ್ಳಿಯ ಗಿರ್ಮಿಟ್ ಮಿರ್ಚಿ, ಮೇಲುಕೋಟೆ ಪುಳಿಯೋಗರೆ, ಬೆಂಗಳೂರು ಬಾಡೂಟ, ದಮ್ ಬಿರಿಯಾನಿ, ಗೌಡ್ರಮನೆ ಹಳ್ಳಿಯೂಟ.. ಹೀಗೆ ತರಹೇವಾರಿ ತಿನಿಸುಗಳ ಮಳಿಗೆಗಳಲ್ಲಿ ಭಾರಿ ಪ್ರಮಾಣದಲ್ಲಿ ಗ್ರಾಹಕರು ಕಂಡು ಬಂದರು.
ಕೃಷಿಗೆ ಔಷಧ ಸಿಂಪಡಿಸಲು ಬಳಸುವ ಡ್ರೋನ್
ಮಕ್ಕಳು ಸೂರ್ಯ ಕಾಂತಿ ಹೂವುಗಳನ್ನು ನೋಡಿ ಸಂಭ್ರಮಿಸಿದರು
ಕೋಳಿಗಳ ಬಗ್ಗೆ ಜನರು ಮಾಹಿತಿ ಪಡೆದರು.
ತನ್ನ ಕೊಂಬು ಮೂಲಕವೇ ಜನರನ್ನು ಆಕರ್ಷಿಸಿದ ಜಫರಾಬಾದಿ ತಳಿ.
ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳದ ಮಳಿಗೆಯೊಂದಕ್ಕೆ ಶುಕ್ರವಾರ ಕೆ.ಎಚ್. ಮುನಿಯಪ್ಪ, ಎಂ.ಸಿ.ಸುಧಾಕರ್, ದಿನೇಶ್ ಗುಂಡೂರಾವ್. ಎಸ್.ಈ. ಸುಧೀಂದ್ರ ಭೇಟಿ ನೀಡಿದರು
11.85 ಲಕ್ಷ ಜನರು ಭೇಟಿ
ಉದ್ಘಾಟನೆಯ ದಿನ 8.5 ಲಕ್ಷ ರೈತರು ವಿದ್ಯಾರ್ಥಿಗಳು ಕೃಷಿ ಆಸಕ್ತರು ಭಾಗವಹಿಸಿದ್ದರೆ ಎರಡನೇ ದಿನ 11.85 ಲಕ್ಷ ಜನರು ಭೇಟಿ ನೀಡಿದರು. ₹1.08 ಕೋಟಿ ವಹಿವಾಟು ನಡೆದಿದೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಧ್ಯಾಹ್ನ ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 13840 ಮಂದಿ ಊಟ ಮಾಡಿದರು. ಪ್ರಾಯೋಜಕರು ಮೊಟ್ಟೆ ಒದಗಿಸಿದ್ದು ಹಲವರಿಗೆ ಮೊಟ್ಟೆ ಸಿಗದೇ ಇರುವುದು ಅಸಮಾಧಾನಕ್ಕೆ ಕಾರಣವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.