ಅಮಾನತು
ಬೆಂಗಳೂರು: ಕೆಎಸ್ಆರ್ಟಿಸಿ ಸಿಬ್ಬಂದಿಯ ವರ್ಗಾವಣೆಗಾಗಿ ಮತ್ತು ವಜಾಗೊಂಡ ನೌಕರನ ಪುನರ್ ನೇಮಕಕ್ಕಾಗಿ ನಕಲಿ ದಾಖಲೆ ಸೃಷ್ಟಿಸಿದ ಕೆಎಸ್ಆರ್ಟಿಸಿ ಲೆಕ್ಕಪತ್ರ ವಿಭಾಗದ ಆಪರೇಟರ್ ರಿಚರ್ಡ್ ಜೆ. ಅವರನ್ನು ಅಮಾನತು ಮಾಡಲಾಗಿದೆ.
ಶಿವಮೊಗ್ಗ ಘಟಕದಲ್ಲಿ ಸಹಾಯಕ ಕುಶಲಕರ್ಮಿಯಾಗಿರುವ ನಾಗರಾಜಪ್ಪ ಅವರನ್ನು ಅವರ ಕೋರಿಕೆಯಂತೆ ದಾವಣಗೆರೆ ವಿಭಾಗಕ್ಕೆ ವರ್ಗಾವಣೆ ಮಾಡಿಸುವುದಾಗಿ ಭರವಸೆ ನೀಡಿ ರಿಚರ್ಡ್ ₹60 ಸಾವಿರ ಪಡೆದಿದ್ದರು. ವಜಾಗೊಂಡಿರುವ ಚಾಲಕ ನಾಗರಾಜ ಎನ್.ಎ. ಅವರನ್ನು ಪುನರ್ ನೇಮಕ ಮಾಡಲು ಮತ್ತು ಕುಂದಾಪುರ ಘಟಕದಲ್ಲಿ ಚಾಲಕರಾಗಿರುವ ಚಂದ್ರಹಾಸ ಎಸ್. ಆಚಾರಿ ಅವರನ್ನು ಶಿವಮೊಗ್ಗ ವಿಭಾಗಕ್ಕೆ ವರ್ಗಾವಣೆ ಮಾಡಲು ₹1.35 ಲಕ್ಷ ಪಡೆದಿದ್ದರು.
ನಕಲಿ ವರ್ಗಾವಣೆ ಮತ್ತು ಪುನರ್ ನೇಮಕಾತಿ ಆದೇಶಗಳನ್ನು ರಿಚರ್ಡ್ ಸೃಷ್ಟಿಸಿದ್ದರು. ಸಂಬಂಧಪಟ್ಟ ವಿಭಾಗಗಳ ಮುಖ್ಯಸ್ಥರಾದ ಮುಖ್ಯ ಯಾಂತ್ರಿಕ ಎಂಜಿನಿಯರ್, ಮುಖ್ಯ ಸಂಚಾರ ವ್ಯವಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಸಹಿಗಳನ್ನು ಸ್ಕ್ಯಾನ್ ಮಾಡಿ ಅವರೇ ತಯಾರಿಸಿದ್ದ ಆದೇಶಗಳಿಗೆ ಲಗತ್ತಿಸಿ ಮುದ್ರಿಸಿದ್ದರು. ಆನಂತರ ಈ ನಕಲಿ ಆದೇಶಗಳನ್ನು ಮೂವರಿಗೆ ಕಳುಹಿಸಿಕೊಟ್ಟಿದ್ದರು. ಇದು ಸಂಸ್ಥೆಯ ನೌಕರರ ನಡತೆ ಮತ್ತು ಶಿಸ್ತು ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂದು ತಿಳಿಸಿ ರಿಚರ್ಡ್ ಅವರನ್ನು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರೂ ಆಗಿರುವ ಶಿಸ್ತುಪಾಲನಾಧಿಕಾರಿ ಕೆ.ಎಂ. ಅಶ್ರಫ್ ಅಮಾನತು ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.