
ಯಲಹಂಕ: ‘ಧರ್ಮ ಸಂರಕ್ಷಣೆ ಮತ್ತು ಸಾಮಾಜಿಕ ಪ್ರಗತಿಗಾಗಿ ರಾಜ್ಯದ 22 ದಲಿತ ಹಾಗೂ ಹಿಂದುಳಿದ ಮಠಗಳಿಗೆ ಒಂದೇ ಕಡೆ ಭೂಮಿ ನೀಡಿರುವುದು ರಾಜ್ಯದಲ್ಲೇ ಪ್ರಥಮ. ಇದಕ್ಕೆ ಸಹಕರಿಸಿರುವ ಶಾಸಕ ವಿಶ್ವನಾಥ್ ಅವರಿಗೆ ದೇವರು ಅಧಿಕಾರ ಪ್ರಾಪ್ತಿಯ ಸೌಭಾಗ್ಯ ನೀಡಲಿ’ ಎಂದು ಚಿತ್ರದುರ್ಗದ ಮಾದರ ಚನ್ನಯ್ಯ ಗುರುಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ ಹಾರೈಸಿದರು.
ಕ್ಷೇತ್ರದ ದಾಸನಪುರ ಹೋಬಳಿಯ ರಾವುತ್ತನಹಳ್ಳಿ ಗ್ರಾಮದಲ್ಲಿ ಹಿಂದುಳಿದ ಹಾಗೂ ದಲಿತ ಸಮುದಾಯಗಳ 22 ಮಠಗಳಿಗೆ ಭೂಮಿ ನೀಡಿರುವ ಕಾರಣಕ್ಕೆ ಮಠಾಧೀಶರು ಎಸ್.ಆರ್.ವಿಶ್ವನಾಥ್ ಅವರ ನಿವಾಸಕ್ಕೆ ಸೋಮವಾರ ಭೇಟಿನೀಡಿ, ಅವರ ಕುಟುಂಬ ವರ್ಗದವರನ್ನು ಆಶೀರ್ವದಿಸಿದರು.
‘ಹಿಂದುಳಿದ ಹಾಗೂ ದಲಿತ ಸಮುದಾಯಗಳ 22 ಮಠಾಧೀಶರಿಗೆ ಯಲಹಂಕ ಕ್ಷೇತ್ರದಲ್ಲಿ ಒಂದೇ ಕಡೆಯಲ್ಲಿ ಜಾಗ ನೀಡಿರುವುದು ಸಂತೋಷ ತಂದಿದೆ. ಮಠಮಾನ್ಯಗಳ ಸೇವೆಯಿಂದ ರಾಜ್ಯದಲ್ಲಿ ಶೈಕ್ಷಣಿಕ, ಸಾಮಾಜಿಕ ಹಾಗೂ ದಾಸೋಹದಂತಹ ಕಾರ್ಯಕ್ರಮಗಳು ನಡೆಯುತ್ತಿವೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದ ಬೆಳವಣಿಗೆಯಲ್ಲಿ ಮಠಗಳ ಪಾತ್ರ ಪ್ರಸಂಶಾರ್ಹ’ ಎಂದು ವಿಶ್ವನಾಥ್ ಹೇಳಿದರು.
ಭೋವಿ ಗುರುಪೀಠದ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ, ಹಿಂದುಳಿದ–ದಲಿತ ಮಠಾಧಿಪತಿಗಳ ಒಕ್ಕೂಟಕ್ಕೆ ಭೂದಾನ ಮಾಡಿದೆ. ಈ ಕಾರ್ಯಕ್ಕೆ ಪ್ರೇರಣೆಯಾಗಿ ನಿಂತು, ಕ್ಷೇತ್ರದ ಮುಖಂಡರೊಂದಿಗೆ ಚರ್ಚಿಸಿ, ವಿವಾದರಹಿತ ಭೂಮಿಯನ್ನು ಹುಡುಕಿ ಮಠಗಳಿಗೆ ನೀಡುವಲ್ಲಿ ಶ್ರಮಿಸಿದ ಶಾಸಕರ ಕಾಳಜಿ ಶ್ಲಾಘನೀಯ’ ಎಂದು ಹೇಳಿದರು.
ಸಿಂಗನಾಯಕನಹಳ್ಳಿ ಆರ್.ಎಸ್.ಎಸ್.ಎನ್ ಬ್ಯಾಂಕಿನ ಅಧ್ಯಕ್ಷೆ ವಾಣಿಶ್ರೀ ವಿಶ್ವನಾಥ್, ವಿಶ್ವವಾಣಿ ಫೌಂಡೇಶನ್ ನಿರ್ದೇಶಕ ಅಲೋಕ್ ವಿಶ್ವನಾಥ್, ಪಲ್ಲವಿ ಅಲೋಕ್ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ವಿವಿಧ ಸಮುದಾಯಗಳ ನಾಯಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.