ಯಲಹಂಕ: ‘ಭಾರತದಲ್ಲಿ ಸಾವಿರಾರು ಜಾತಿ-ಧರ್ಮ, ಆಚಾರ, ವಿಚಾರಗಳ ವೈವಿಧ್ಯವಿದ್ದರೂ, ಎಲ್ಲದಕ್ಕೂ ಹಿಂದೂ ಧರ್ಮವೇ ಮೂಲವಾಗಿದೆ’ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಅಭಿಪ್ರಾಯಪಟ್ಟರು.
ಮಡಿವಾಳ ಮಾಚಿದೇವ ಚಾರಿಟಬಲ್ ಟ್ರಸ್ಟ್ ಹಾಗೂ ಸಮುದಾಯದ ಕುಲಬಾಂಧವರ ವತಿಯಿಂದ ಸಿಂಗನಾಯಕನಹಳ್ಳಿಯಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಹಾಗೂ ಮಾಚಿದೇವರ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
'ಸಂತರು, ದಾಸರು, ಶರಣರು ಹಾಗೂ ಹೋರಾಟಗಾರರ ಶ್ರಮದಿಂದ ಇನ್ನೂ ನಮ್ಮ ದೇಶ ಉಳಿದುಕೊಂಡಿದೆ. ಜಾತಿಗಳ ಒಳಜಗಳದಲ್ಲಿ ಮುಳುಗಿ ಮೈಮರೆತರೆ, ಹಿಂದೂ ಧರ್ಮದ ಅಧಃಪತನವಾಗುತ್ತದೆ. ಧರ್ಮ ಮತ್ತು ದೇಶದ ಬಗ್ಗೆ ಜಾಗೃತಿ ಮೂಡಿಸಿಕೊಂಡು ಉಳಿಸಿ, ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ‘ ಎಂದರು.
ಅಥಣಿಯ ಬಸವ ರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ಶರಣ ಸಾಹಿತ್ಯದ ಉಳಿವು ಮತ್ತು ಸಂರಕ್ಷಣೆಗಾಗಿ ಮಡಿವಾಳ ಮಾಚಿದೇವರು ಮಾಡಿದ ತ್ಯಾಗ, ಹೋರಾಟ ಹಾಗೂ ಕೊಡುಗೆ ಸ್ಮರಣೀಯವಾದುದು‘ ಎಂದು ಬಣ್ಣಿಸಿದರು.
ಮಡಿವಾಳರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ನಂಜಪ್ಪ, ಮಾಚಿದೇವ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ತಿಮ್ಮಪ್ಪ, ಗೌರವಾಧ್ಯಕ್ಷ ಸಿದ್ದಗಂಗಪ್ಪ, ಉಪಾಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಕೆ.ಬಾಬು, ಬಿಜೆಪಿ ಮುಖಂಡರಾದ ಎಸ್.ಎನ್.ರಾಜಣ್ಣ, ರಾಮಮೂರ್ತಿ. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಮರಾವತಮ್ಮ, ಪುಷ್ಪಾ ಮಂಜುನಾಥ್, ಲಲಿತಾ ರಾಮು, ಮಾಜಿ ಅಧ್ಯಕ್ಷ ಟಿ.ಮುನಿರೆಡ್ಡಿ, ಮಾಜಿ ಉಪಾಧ್ಯಕ್ಷ ಪ್ರಶಾಂತ್ರೆಡ್ಡಿ, ಆರ್ಎಸ್ಎಸ್ಎನ್ ನಿರ್ದೇಶಕರಾದ ಮಂಜುನಾಥ.ಎಂ, ರಾಮಚಂದ್ರರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.