ADVERTISEMENT

ತೆಂಗಿನ ಕಾಯಿ ಕೀಳುವಾಗ ಹೃದಯಾಘಾತವಾಗಿ ಮರದಲ್ಲೇ ಸಾವು!

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 19:35 IST
Last Updated 6 ಫೆಬ್ರುವರಿ 2023, 19:35 IST
   

ಬೆಂಗಳೂರು: ತೆಂಗಿನ ಮರ ಏರಿ ಕಾಯಿ ಕೀಳುತ್ತಿದ್ದ ವೇಳೆ ಹೃದಯಾಘಾತವಾಗಿ ನಾರಾಯಣಪ್ಪ (60) ಎಂಬುವವರು ಮೃತಪಟ್ಟಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕ್ರೇನ್ ವಾಹನದ ಸಹಾಯದಿಂದ ಮೃತದೇಹವನ್ನು ಕೆಳಗಿಳಿಸಿದ್ದಾರೆ.

‘ಮೈಲಸಂದ್ರ ನಿವಾಸಿ ನಾರಾಯಣಪ್ಪ, ವಿಜಯಶ್ರೀ ಬಡಾವಣೆಯ ವೆಂಕಟರಮಣ ದೇವಸ್ಥಾನ ಸಮೀಪದಲ್ಲಿರುವ ತೆಂಗಿನ ಮರ ಏರಿದ್ದಾಗ ಮೃತಪಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಕೆಂಗೇರಿ ಪೊಲೀಸರು ಹೇಳಿದರು.

‘ನಾರಾಯಣಪ್ಪ ಅವರು ಸೋಮವಾರ ಬೆಳಿಗ್ಗೆ 7.30ರ ಸುಮಾರಿಗೆ ಸ್ಥಳಕ್ಕೆ ಬಂದಿದ್ದರು. ಸುಮಾರು 40 ಅಡಿ ಎತ್ತರದ ತೆಂಗಿನ ಮರ ಏರಿದ್ದರು. ಮರದ ಟೊಂಗೆ ಮೇಲೆ ಕುಳಿತು ಕಾಯಿ ಕೀಳುತ್ತಿದ್ದರು. ಕುಳಿತ ಸ್ಥಳದಲ್ಲೇ ಏಕಾಏಕಿ ಪ್ರಜ್ಞೆ ತಪ್ಪಿದ್ದರು. ಹಲವು ನಿಮಿಷವಾದರೂ ಕೆಳಗೆ ಇಳಿದಿರಲಿಲ್ಲ. ಮೊಬೈಲ್‌ಗೆ ಕರೆ ಮಾಡಿದರೂ ಪ್ರತಿಕ್ರಿಯಿಸಿರಲಿಲ್ಲ’ ಎಂದು ತಿಳಿಸಿದರು.

ADVERTISEMENT

‘ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಯಿತು. ತೆಂಗಿನ ಮರದಲ್ಲೇ ನಾರಾಯಣಪ್ಪ ಇದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಸಹಕಾರದಿಂದ ಕ್ರೇನ್ ಮೂಲಕ ಮೇಲಕ್ಕೆ ಹೋಗಿ ನೋಡಿದಾಗ, ನಾರಾಯಣಪ್ಪ ಮೃತಪಟ್ಟಿದ್ದು ಗೊತ್ತಾಯಿತು. ಬಳಿಕ ಮೃತದೇಹವನ್ನು ಕೆಳಗೆ ಇಳಿಸಲಾಯಿತು’ ಎಂದು ಹೇಳಿದರು.

‘ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಹೃದಯಾಘಾತದಿಂದ ನಾರಾಯಣಪ್ಪ ಮೃತಪಟ್ಟಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.