ಹಳದಿ ಮಾರ್ಗಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ
ಕೃಪೆ: ಯೂಟ್ಯೂಬ್
ಬೆಂಗಳೂರು: 'ನಮ್ಮ ಮೆಟ್ರೊ' ಹಳದಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನದ ಹಬ್ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಈ ಮಾರ್ಗವು ಬೊಮ್ಮಸಂದ್ರದಿಂದ ಆರ್.ವಿ. ರಸ್ತೆಗೆ ಸಂಪರ್ಕ ಕಲ್ಪಿಸಲಿದೆ.
ರಾಗಿಗುಡ್ಡ ನಿಲ್ದಾಣದಲ್ಲಿ ಈ ಮಾರ್ಗಕ್ಕೆ ಹಸಿರು ನಿಶಾನೆ ತೋರಿದ ಮೋದಿ. ಎಲೆಕ್ಟ್ರಾನಿಕ್ ಸಿಟಿ ವರೆಗೆ ಪ್ರಯಾಣ ನಡೆಸಿದರು. ಅವರೊಂದಿಗೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರೂ ಇದ್ದರು.
ಹಳದಿ ಮಾರ್ಗವು ಒಟ್ಟು 19.15 ಕಿ.ಮೀ. ಉದ್ದವಿದೆ. ಇದರೊಂದಿಗೆ, ನಗರದಲ್ಲಿ 76.95 ಕಿ.ಮೀ. ಇದ್ದ 'ನಮ್ಮ ಮೆಟ್ರೊ' ಜಾಲ 96 ಕಿ.ಮೀ.ಗೆ ವಿಸ್ತರಣೆಗೊಂಡಂತಾಗಿದೆ.
ಈ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿದ್ದು, ಮೂರು ರೈಲುಗಳು ನಿತ್ಯ ಸಂಚರಿಸಲಿವೆ.
ಬೆಳಿಗ್ಗೆ ಬೆಂಗಳೂರಿಗೆ ಬಂದ ಪ್ರಧಾನಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಬೆಳಗಾವಿ–ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಬಳಿಕ, ಪಂಜಾಬಿನ ಅಮೃತಸರದಿಂದ ಜಮ್ಮು ಕಾಶ್ಮೀರದ ಕಟ್ರಾ ಮತ್ತು ಮಹಾರಾಷ್ಟ್ರದ ಪುಣೆ–ಅಜ್ನಿ (ನಾಗ್ಪುರ) ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಸಂಚಾರವನ್ನೂ ವರ್ಚುವಲ್ ಆಗಿ ಉದ್ಘಾಟಿಸಿದರು.
ಹಳದಿ ಮಾರ್ಗದ ನಿಲ್ದಾಣಗಳು
ಬೊಮ್ಮಸಂದ್ರ
ಹೆಬ್ಬಗೋಡಿ
ಹುಸ್ಕೂರು ರಸ್ತೆ
ಇನ್ಫೊಸಿಸ್ ಫೌಂಡೇಷನ್ (ಕೋನಪ್ಪನ ಅಗ್ರಹಾರ)
ಎಲೆಕ್ಟ್ರಾನಿಕ್ ಸಿಟಿ
ಬೆರಟೇನ ಅಗ್ರಹಾರ
ಹೊಸ ರಸ್ತೆ
ಸಿಂಗಸಂದ್ರ
ಕೂಡ್ಲು ಗೇಟ್
ಹೊಂಗಸಂದ್ರ
ಬೊಮ್ಮನಹಳ್ಳಿ
ಸೆಂಟ್ರಲ್ ಸಿಲ್ಕ್ ಬೋರ್ಡ್
ಬಿಟಿಎಂ ಲೇಔಟ್
ಜಯದೇವ ಆಸ್ಪತ್ರೆ
ರಾಗಿಗುಡ್ಡ
ಆರ್.ವಿ. ರಸ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.