ADVERTISEMENT

ಜೆ.ಪಿ.ನಗರ: ಮರಗಳಿಗೆ ಬಂಧಮುಕ್ತಿ

ಗಿಡಗಳಿಗೆ ತೊಡಿಸಿದ್ದ ಬೇಡಿ ಬಿಡಿಸಿದ ಅಗ್ಲಿ ಇಂಡಿಯನ್‌ ಸ್ವಯಂಸೇವಕ ಗುಂಪು

ಮನೋಹರ್ ಎಂ.
Published 8 ಜುಲೈ 2019, 20:20 IST
Last Updated 8 ಜುಲೈ 2019, 20:20 IST
ಬೇಲಿ ತೆರವುಗೊಳಿಸಿದ ಬಳಿಕ ಮರಕ್ಕೆ ಕೀಟನಿರೋಧಕ ಲೇಪನ ಮಾಡಿದ ಸ್ವಯಂಸೇವಕರು
ಬೇಲಿ ತೆರವುಗೊಳಿಸಿದ ಬಳಿಕ ಮರಕ್ಕೆ ಕೀಟನಿರೋಧಕ ಲೇಪನ ಮಾಡಿದ ಸ್ವಯಂಸೇವಕರು   

ಬೆಂಗಳೂರು: ರಸ್ತೆ ಬದಿ ನೆಟ್ಟ ಗಿಡಗಳಿಗೆ ಅಳವಡಿಸಿರುವ ಕಬ್ಬಿಣದ ರಕ್ಷಾ ಕವಚಗಳನ್ನು, ಅವು ಮರವಾಗಿ ಬೆಳೆದ ಬಳಿಕವೂ ಪಾಲಿಕೆ ತೆರವುಗೊಳಿಸುತ್ತಿಲ್ಲ. ಈ ರಕ್ಷಾ ಕವಚಗಳೇ ಮರಗಳ ಸಹಜ ಬೆಳವಣಿಗೆಗೆ ಅಡ್ಡಿಪಡಿಸುತ್ತಿವೆ. ಸಸ್ಯಗಳ ಪಾಲಿಕೆ ಬೇಡಿಯಂತೆ ವರ್ತಿಸುವ ಇಂತಹ ಕಬ್ಬಿಣದ ಕವಚಗಳನ್ನು ‘ಅಗ್ಲಿ ಇಂಡಿಯನ್‌’ ಸ್ವಯಂಸೇವಾ ಸಂಘಟನೆ ತೆರವುಗೊಳಿಸುತ್ತಿದೆ.

ಮರಗಳನ್ನು ‘ಬಂಧಮುಕ್ತ’ಗೊಳಿಸುವ ಈ ಕಾರ್ಯಕ್ಕೆಪಾಲಿಕೆ ಅಧಿಕಾರಿಗಳೂ ಕೈಜೋಡಿಸಿದ್ದಾರೆ.

ಜೆ.ಪಿ.ನಗರದ ಆರ್‌.ವಿ.ಡೆಂಟಲ್‌ ಕಾಲೇಜು ಎದುರಿನ ರಸ್ತೆ ಪಕ್ಕದಲ್ಲಿ ಬೆಳೆಸಿರುವ ಮರಗಳು ರಕ್ಷಾ ಕವಚದೊಳಗೆ ಸಿಲುಕಿ ಓರೆಕೋರೆಯಾಗಿ ಬೆಳೆದಿದ್ದವು. ಇವುಗಳನ್ನು ಗಮನಿಸಿದ ಅಗ್ಲಿ ಇಂಡಿಯನ್‌ ಸ್ವಯಂಸೇವಕರ ಗುಂಪು ಒಟ್ಟು ಎಂಟು ಮರಗಳ ಬೇಲಿಗಳನ್ನು ತೆರವುಗೊಳಿಸಿದೆ.

ADVERTISEMENT

‘ಈ ಮರಗಳು 8 ರಿಂದ 15 ವರ್ಷಗಳಷ್ಟು ಹಳೆಯವು. ಅವುಗಳ ಕಾಂಡಗಳು ರಕ್ಷಾ ಕವಚವನ್ನು ಸೀಳಿಕೊಂಡು ಬೆಳೆದಿದ್ದವು.ಓರೆಕೋರೆಯಾಗಿ ಬೆಳೆದ ಆ ಮರಗಳು ಅಂದ ಕಳೆದುಕೊಂಡಿದ್ದವು’ ಎಂದು ಸಂಘಟನೆಯ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಘಟನೆಯ ಸ್ವಯಂಸೇವಕರು ಅಷ್ಟಕ್ಕೇ ಸುಮ್ಮನಾಗಿಲ್ಲ. ಈ ಸಮಸ್ಯೆಯನ್ನು ಪಾಲಿಕೆಯ ಅರಣ್ಯ ವಿಭಾಗದ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಇದಕ್ಕೆ ಸ್ಪಂದಿಸಿದ ಪಾಲಿಕೆ ಅಧಿಕಾರಿಗಳು, ಸಂಘಟನೆಯ ಜೊತೆ ಕೈಜೋಡಿಸಿ ನಗರದ ಇತರ ಕಡೆಗಳಲ್ಲೂ ಮರಗಳಿಗೆ ಕಂಟಕ ಉಂಟು ಮಾಡುತ್ತಿರುವ ರಕ್ಷಣಾ ಬೇಲಿಗಳ ತೆರವು ಕಾರ್ಯಕ್ಕೆ ಮುಂದಾಗಿದೆ.

‘ರಕ್ಷಾ ಕವಚವನ್ನು ತೆರವುಗೊಳಿಸಬೇಕಾದ ಅಗತ್ಯದ ಬಗ್ಗೆ ಪಾಲಿಕೆಯ ಅರಣ್ಯ ವಿಭಾಗದ ಗಮನಕ್ಕೆ ತಂದಿದ್ದೆವು. ಬೇಲಿ ತೆರವು ಮಾಡಲು ಅನುಮತಿ ನೀಡುವುದರ ಜೊತೆಗೆ ಈ ಕಾರ್ಯದಲ್ಲಿ ತಾವೂ ಭಾಗಿಯಾಗುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮರಗಳಿಗೆ ಅಪಾಯ ಉಂಟುಮಾಡುತ್ತಿರುವ ರಕ್ಷಾ ಕವಚಗಳನ್ನು ತೆರವು ಮಾಡಲು ಪೌರಕಾರ್ಮಿಕರ ನೆರವು ಪಡೆಯುವಂತೆಯೂ ಹೇಳಿದ್ದಾರೆ’ ಎಂದು ಸ್ವಯಂಸೇವಕರೊಬ್ಬರು ತಿಳಿಸಿದರು.

‘ಸ್ಥಳೀಯರು ಹಾಗೂ ಪಾದಚಾರಿಗಳು ತಾವು ಬಳಸಿದ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನುಬೇಲಿಯ ಒಳಗೆ ಹಾಕಿದ್ದಾರೆ. ಇದನ್ನು ತೆರವುಗೊಳಿಸಲಾಗಿದೆ. ಮರಗಳಿಗೆ ಯಾವುದೇ ಕೀಟಬಾಧೆ ತಗುಲದಂತೆ ತಡೆಯಲು ಕೀಶನಾಶಕವನ್ನು ಕಾಂಡದ ಭಾಗಕ್ಕೆ ಲೇಪಿಸಿದ್ದೇವೆ. ಪ್ರಾಯೋಗಿಕವಾಗಿ 8 ಮರಗಳ ಬೇಲಿ ತೆರವು ಮಾಡಿದ್ದೇವೆ. ನಗರದಲ್ಲಿ ಇಂತಹ ಮರಗಳು
ಸಾಕಷ್ಟಿವೆ. ಅವುಗಳನ್ನು ಹಂತಹಂತವಾಗಿ ತೆರವು ಮಾಡಲಿದ್ದೇವೆ. ಎಲ್ಲ ಮರಗಳನ್ನು ಬಂಧಮುಕ್ತ ಮಾಡುವುದು ನಮ್ಮ ಗುರಿ’ ಎಂದು ಸಂಸ್ಥೆಯ ಸದಸ್ಯರು ಮಾಹಿತಿ ನೀಡಿದರು.

‘ಕಾಂಡದ ಸದೃಢ ಬೆಳವಣಿಗೆಗೆ ಬೇಲಿಯೇ ಅಡ್ಡಿ’
‘ನಗರದಲ್ಲಿ ಗಾಳಿ ಮಳೆಗೆ ಮರಗಳು ನೆಲಕ್ಕುರುಳುವುದಕ್ಕೆ ಮುಖ್ಯ ಕಾರಣ ಅವುಗಳ ಬುಡ ಮತ್ತು ಕಾಂಡ ಬಲಿಷ್ಠವಾಗಿಲ್ಲದೇ ಇರುವುದು. ಮರದ ಕಾಂಡದ ಭಾಗ ಬಲಿಷ್ಠವಾಗಿದ್ದರೆ, ಎಂತಹ ಜೋರು ಮಳೆ, ಗಾಳಿಗೂ ಬಾಗುವುದಿಲ್ಲ. ಕಾಂಡದ ಸಹಜ ಬೆಳವಣಿಗೆಗೆ ಬೇಲಿಗಳು ಅಡ್ಡಿಯಾಗಿರುವ ಕಾರಣ ಮರವೇ ದುರ್ಬಲಗೊಳ್ಳುವ ಸಾಧ್ಯತೆ ಹೆಚ್ಚು’ ಎಂದು ಅಗ್ಲಿ ಇಂಡಿಯನ್ಸ್‌ ಬಳಗದ ಸದಸ್ಯರೊಬ್ಬರು ಮಾಹಿತಿ ನೀಡಿದರು.

‘ಕಬ್ಬಿಣದ ರಕ್ಷಾ ಕವಚಗಳು 4 ಅಡಿಗಳಷ್ಟು ಎತ್ತರವಿರುತ್ತವೆ. ಈ ಭಾಗದಲ್ಲೇ ಮರದ ಕಾಂಡ ಸದೃಢವಾಗಿ ಬೆಳೆಯ ಬೇಕಿರುತ್ತದೆ. ಕಾಂಡ ಭಾಗದ ಬೆಳವಣಿಗೆಗೆ ಅಡ್ಡಿಯಾದ ಕಾರಣ ಜೋರು ಗಾಳಿ ಬೀಸಿದ ತಕ್ಷಣ ಮರಗಳು ಧರೆಗೆ ಉರುಳುತ್ತವೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.