ADVERTISEMENT

ಕೌಟುಂಬಿಕ ದ್ವೇಷ: ಹೈಕೋರ್ಟ್‌ ಸ್ಫೋಟಿಸುವ ಬೆದರಿಕೆ!

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:48 IST
Last Updated 24 ಸೆಪ್ಟೆಂಬರ್ 2019, 19:48 IST
   

ಬೆಂಗಳೂರು: ಹೈಕೋರ್ಟ್ ಕಟ್ಟಡ ಸ್ಫೋಟಿಸುವುದಾಗಿ ವ್ಯಕ್ತಿಯೊಬ್ಬ ಬೆದರಿಕೆ ಪತ್ರ ಬರೆಯಲು, ಕೌಟುಂಬಿಕ ದ್ವೇಷ ಕಾರಣ ಎಂಬುದು ವಿಧಾನಸೌಧ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಬೆದರಿಕೆ ಪತ್ರ ಬರೆದ ವ್ಯಕ್ತಿ ಉತ್ತರಪ್ರದೇಶದ ರಾಜೇಂದ್ರ ಎಂಬುದು ಗೊತ್ತಾಗಿದೆ. ಆತ ತನ್ನ ಮಾವ, ಪಶ್ಚಿಮ ದೆಹಲಿಯ ನಿವಾಸಿ ಹದರ್ಶನ್ ಸಿಂಗ್ ನಾಗಪಾಲ್ ವಿರುದ್ಧ ಸೇಡು ತೀರಿಸಿಕೊಳ್ಳಲು ಬೆದರಿಕೆ ಪತ್ರ ಬರೆದಿದ್ದಾನೆ. ಕರ್ನಾಟಕ ಮಾತ್ರವಲ್ಲ, ದೆಹಲಿ, ಉತ್ತರ ಪ್ರದೇಶದ ಕೆಲವು ಸರ್ಕಾರಿ ಕಚೇರಿಗಳಿಗೂ ಇದೇ ರೀತಿಯ ಪತ್ರಗಳನ್ನು ಆರೋಪಿ ಬರೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಸದ್ಯ ಆರೋಪಿಯ ಬಂಧನಕ್ಕಾಗಿ ಸಬ್‍ ಇನ್‍ಸ್ಪೆಕ್ಟರ್ ನೇತೃತ್ವದ ತಂಡ ದೆಹಲಿ ಮತ್ತು ಉತ್ತರ ಪ್ರದೇಶಕ್ಕೆ ತೆರಳಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ವಾಸ್ತವ ಸಂಗತಿ ಬಹಿರಂಗವಾಗಲಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಹದರ್ಶನ್ ಸಿಂಗ್ ನಾಗಪಾಲ್, ಮನೆಯಲ್ಲೇ ಆಹಾರ ಪದಾರ್ಥ ತಯಾರು ಮಾಡಿ ಮಾರಾಟ ಮಾಡುವ ವ್ಯವಹಾರ ಮಾಡುತ್ತಿದ್ದು, ಕೆಲವು ವರ್ಷಗಳ ಹಿಂದೆ ಉತ್ತರಪ್ರದೇಶದ ರಾಜೇಂದ್ರನಿಗೆ‌ ಪುತ್ರಿಯನ್ನು ಕೊಟ್ಟು ಮದುವೆ ಮಾಡಿದ್ದರು. ವರದಕ್ಷಿಣಿ ತರುವಂತೆ ಪತ್ನಿಗೆ ರಾಜೇಂದ್ರ ಪೀಡಿಸುತಿದ್ದ. ಹೀಗಾಗಿ, ಆಕೆ ಗಂಡನಿಂದ ದೂರವಾಗಿ ತಂದೆಯ ಮನೆಯಲ್ಲಿ ವಾಸವಾಗಿದ್ದರು. ಈ ಸಂಬಂಧ ಹದರ್ಶನ್ ಸಿಂಗ್ ನಾಗಪಾಲ್ ಅಳಿಯ ರಾಜೇಂದ್ರನ ವಿರುದ್ಧ ವರದಕ್ಷಿಣಿ ಕಿರುಕುಳ ಆರೋಪದಡಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.