ADVERTISEMENT

ಖಾಸಗಿ ಸಾರಿಗೆ ಬಂದ್: ಪ್ರತಿಭಟನಾಕಾರರ ಮೇಲೆ 13 ಎಫ್‌ಐಆರ್‌, 12 ಜನ ಬಂಧನ

ಕ್ಯಾಬ್‌ ಚಾಲಕರ ಮೇಲೆ ಮೊಟ್ಟೆ ಎಸೆತ, ರ್‍ಯಾಪಿಡೊ ಚಾಲಕನಿಗೆ ಹಲ್ಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಸೆಪ್ಟೆಂಬರ್ 2023, 15:48 IST
Last Updated 11 ಸೆಪ್ಟೆಂಬರ್ 2023, 15:48 IST
<div class="paragraphs"><p>ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಸೋಮವಾರ ನಡೆಸಿದ ಮುಷ್ಕರ ಹಿನ್ನಲೆಯಲ್ಲಿ ಕಲಾಸಿಪಾಳ್ಯಯಾದ ಖಾಸಗಿ ಬಸ್ ನಿಲ್ದಾಣದಲ್ಲಿ ಬಸುಗಳು ಸಾಲಾಗಿ ನಿಂತಿರುವುದು. </p></div>

ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಸೋಮವಾರ ನಡೆಸಿದ ಮುಷ್ಕರ ಹಿನ್ನಲೆಯಲ್ಲಿ ಕಲಾಸಿಪಾಳ್ಯಯಾದ ಖಾಸಗಿ ಬಸ್ ನಿಲ್ದಾಣದಲ್ಲಿ ಬಸುಗಳು ಸಾಲಾಗಿ ನಿಂತಿರುವುದು.

   

ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್

ಬೆಂಗಳೂರು: ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು ಸೋಮವಾರ ನಡೆಸಿದ ಬಂದ್ ವೇಳೆ ಪ್ರತಿಭಟನಕಾರರು ಕೆಲವರ ಮೇಲೆ ಹಲ್ಲೆ ನಡೆಸಿದ್ದು ವಿವಿಧ ವಿಭಾಗದ ವ್ಯಾಪ್ತಿಯಲ್ಲಿ 13 ಎಫ್‌ಐಆರ್‌ಗಳು ದಾಖಲಾಗಿವೆ.

ADVERTISEMENT

ರಸ್ತೆಗೆ ವಾಹನ ಇಳಿಸಿದ ಕ್ಯಾಬ್‌ ಚಾಲಕರು ಹಾಗೂ ರ್‍ಯಾಪಿಡೊ ಸವಾರರ ಮೇಲೆ ಮೊಟ್ಟೆ ಎಸೆತ, ಹಲ್ಲೆ, ಚಕ್ರಗಳ ಗಾಳಿ ತೆಗೆದ ಆರೋಪದ ಮೇಲೆ ಒಟ್ಟು 12 ಮಂದಿ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದ್ದಾರೆ.

ಕೇಂದ್ರ ವಿಭಾಗದಲ್ಲಿ 1 ಪ್ರಕರಣ ದಾಖಲಾಗಿದ್ದು ಮೂವರನ್ನು ಬಂಧಿಸಲಾಗಿದೆ. ಪಶ್ಚಿಮ ವಿಭಾಗದಲ್ಲಿ 7 ಪ್ರಕರಣಗಳು ದಾಖಲಾಗಿವೆ. ಉತ್ತರ ವಿಭಾಗದಲ್ಲಿ 2 ಪ್ರಕರಣ ದಾಖಲಾಗಿದ್ದು, 6 ಮಂದಿಯನ್ನು ಬಂಧಿಸಲಾಗಿದೆ. ಆಗ್ನೇಯ ವಿಭಾಗದಲ್ಲಿ ಒಂದು ಎಫ್‌ಐಆರ್ ದಾಖಲಾಗಿದೆ.

ಈಶಾನ್ಯ ವಿಭಾಗದಲ್ಲಿ 2 ಎಫ್‌ಐಆರ್‌ ದಾಖಲಾಗಿದ್ದು, ಮೂವರು ಚಾಲಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಳಿದವರ ಬಂಧನಕ್ಕೆ ದೃಶ್ಯಾವಳಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ರ್‍ಯಾಲಿ: ಪ್ರತಿಭಟನಾ ರ್‍ಯಾಲಿಯಿಂದ ನಗರದ ಹಲವು ಕಡೆ ದಟ್ಟಣೆ ಎದುರಾಗಿತ್ತು. ಸಾರ್ವಜನಿಕರು ಪರದಾಡಿದರು.

ಮೆಜೆಸ್ಟಿಕ್‌ ಸೇರಿದಂತೆ ಹಲವು ಕಡೆಯಿಂದ ಫ್ರೀಡಂ ಪಾರ್ಕ್‌ಗೆ ಬೃಹತ್‌ ಪ್ರತಿಭಟನಾ ರ್‍ಯಾಲಿಯಲ್ಲಿ ಆಟೊ, ಖಾಸಗಿ ಬಸ್‌ ಹಾಗೂ ಕ್ಯಾಬ್‌ ಚಾಲಕರು ಬಂದರು.

ವಾಹನಗಳಿಗೆ ಪರ್ಯಾಯ ಮಾರ್ಗದಲ್ಲಿ ತೆರಳುವಂತೆ ಸಂಚಾರ ಪೊಲೀಸರು ಸೂಚಿಸಿದ್ದರು. ಆ ಮಾರ್ಗದಲ್ಲಿ ವಾಹನ ದಟ್ಟಣೆಯಿಂದ ಚಾಲಕರು ಪರದಾಡಿದರು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಖೋಡೆ ವೃತ್ತದಿಂದ ಬಂದ ವಾಹನಗಳು, ಆರ್‌.ಆರ್.ಜಂಕ್ಷನ್, ಕೃಷ್ಣ ಪ್ಲೋರ್ ವೃತ್ತದ ಮೂಲಕ ಮಲ್ಲೇಶ್ವರದತ್ತ ತೆರಳಿದವು. ಗೂಡ್‌ಶೆಡ್‌ ರಸ್ತೆ ಕಡೆಯಿಂದ ಬಂದ ವಾಹನಗಳು, ಜಿ.ಟಿ.ರಸ್ತೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ, ಓಕಳಿಪುರ ಮೂಲಕ ಸುಜಾತಾ ವೃತ್ತದ ಮೂಲಕ ತೆರಳಿದವು. ಮಾರ್ಗದಲ್ಲಿ ವಾಹನಗಳ ಸಾಲುಗಟ್ಟಿ ನಿಂತಿದ್ದವು.

ಇನ್ನು ಗೊರಗುಂಟೆಪಾಳ್ಯ, ಜಾಲಹಳ್ಳಿ, ದಾಸರಹಳ್ಳಿ ಜಂಕ್ಷನ್‌ನಲ್ಲಿ ಒಕ್ಕೂಟದ ಪದಾಧಿಕಾರಿಗಳು ರಸ್ತೆಗೆ ಇಳಿದ ಕ್ಯಾಬ್‌, ಆಟೊಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಈ ವೃತ್ತಗಳಲ್ಲಿ ವಾಹನ ದಟ್ಟಣೆ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.