ADVERTISEMENT

ಸಂಶೋಧನೆ ಜವಾಬ್ದಾರಿಯುತ ಬೌದ್ಧಿಕಯಾನ: ರಹಮತ್ ತರೀಕೆರೆ ಅಭಿಮತ

ಕನ್ನಡ ಸಂಶೋಧನ ಅಕಾಡೆಮಿ ಹಮ್ಮಿಕೊಂಡಿದ್ದ ವಿಚಾರಸಂಕಿರಣದಲ್ಲಿ ರಹಮತ್ ತರೀಕೆರೆ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 14:47 IST
Last Updated 8 ಫೆಬ್ರುವರಿ 2026, 14:47 IST
ಗಿಡಕ್ಕೆ ನೀರೆರೆಯುವ ಮೂಲಕ ರಹಮತ್ ತರೀಕೆರೆ ಅವರು ಕಾರ್ಯಕ್ರಮ ಉದ್ಘಾಟಿಸಿದರು. ನಾಗರಾಜ ತಲಘಟ್ಟಪುರ, ರಂಗನಾಥ ಕಂಟನಕುಂಟೆ, ಸರ್ಜಾಶಂಕರ್ ಹರಳಿಮಠ, ರವಿಕುಮಾರ ಪಿ.ಜಿ., ನಾಗೇಶ್ ಎನ್., ಕುಪ್ಪನಹಳ್ಳಿ ಎಂ. ಭೈರಪ್ಪ ಉಪಸ್ಥಿತರಿದ್ದರು
ಗಿಡಕ್ಕೆ ನೀರೆರೆಯುವ ಮೂಲಕ ರಹಮತ್ ತರೀಕೆರೆ ಅವರು ಕಾರ್ಯಕ್ರಮ ಉದ್ಘಾಟಿಸಿದರು. ನಾಗರಾಜ ತಲಘಟ್ಟಪುರ, ರಂಗನಾಥ ಕಂಟನಕುಂಟೆ, ಸರ್ಜಾಶಂಕರ್ ಹರಳಿಮಠ, ರವಿಕುಮಾರ ಪಿ.ಜಿ., ನಾಗೇಶ್ ಎನ್., ಕುಪ್ಪನಹಳ್ಳಿ ಎಂ. ಭೈರಪ್ಪ ಉಪಸ್ಥಿತರಿದ್ದರು   

ಬೆಂಗಳೂರು: ‘ಸಂಶೋಧನೆಯು ಸಾಮಾಜಿಕ ಜವಾಬ್ದಾರಿಯುಳ್ಳ ಬೌದ್ಧಿಕಯಾನವಾಗಿದೆ. ಆದ್ದರಿಂದ ಸಂಶೋಧನಾರ್ಥಿಗಳು ಮುಕ್ತ ಮನಸ್ಸಿನಿಂದ ಸಂಶೋಧನೆಗೆ ತೊಡಗಬೇಕು’ ಎಂದು ಸಾಹಿತಿ ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.

ಕನ್ನಡ ಸಂಶೋಧನ ಅಕಾಡೆಮಿಯು ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ‘ಸಮಕಾಲೀನ ಕನ್ನಡ ಸಂಶೋಧನೆಯ ಚಹರೆಗಳು ಮತ್ತು ಸಾಧ್ಯತೆಗಳು’ ಹಾಗೂ ‘ಬಾನು ಮುಷ್ತಾಕ್ ಅವರ ಕಥನ ಸಾಹಿತ್ಯದ ತಾತ್ವಿಕತೆ’ ವಿಷಯದ ಕುರಿತು ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರಸಂಕಿರಣ ಉದ್ಘಾಟಿಸಿ, ಮಾತನಾಡಿದರು.

‘ಎಲ್ಲಿ ಜ್ಞಾನವಿರುವುದೋ ಅಲ್ಲಿಗೆ ನಾವೇ ಹೋಗಿ ನಮ್ಮ ಬೌದ್ಧಿಕತೆಯನ್ನು ಹೆಚ್ಚಿಸಿಕೊಳ್ಳಬೇಕು. ನಿಜವಾದ ಸಂಶೋಧನೆ ಆರಂಭವಾಗುವುದೇ ಪಿಎಚ್.ಡಿ ನಂತರ. ಪಿಎಚ್.ಡಿ ಎಂಬುದು ತರಬೇತಿ ಮಾತ್ರವಾಗಿರುತ್ತದೆ. ಆದರೆ, ಅನೇಕರು ಪಿಎಚ್.ಡಿ ಪಡೆದ ನಂತರ ಸಂಶೋಧನೆಯಿಂದ ದೂರ ಸರಿಯುತ್ತಾರೆ. ಸಂಶೋಧನೆಯಲ್ಲಿ ವಿವರಗಳನ್ನು ಸುರಿಯುತ್ತಾ ಹೋಗುವುದನ್ನು ಬಿಟ್ಟು, ಅವುಗಳು ಏನನ್ನು ಧ್ವನಿಸುತ್ತಿವೆ ಎಂಬುದನ್ನು ಶೋಧಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಲೇಖಕಿ ಬಾನು ಮುಷ್ತಾಕ್ ಅವರ ಕಥನ ಸಾಹಿತ್ಯದ ಒಳನೋಟ ಕುರಿತ ಪ್ರಬಂಧ ಸಂಕಲನ ‘ಎದೆಯ ನುಡಿ’ ಹಾಗೂ ಸಂಶೋಧನಾ ಲೇಖನಗಳ ಸಂಚಿಕೆ ‘ಅರಿವು ಅಸ್ಮಿತೆ’ಯನ್ನು ವಿಮರ್ಶಕ ನಾಗರಾಜ ತಲಘಟ್ಟಪುರ ಜನಾರ್ಪಣೆ ಮಾಡಿದರು. ಲೇಖನ ಸ್ಪರ್ಧೆಯ ವಿಜೇತರಿಗೆ ಇದೇ ವೇಳೆ ‘ಅತ್ಯುತ್ತಮ ಸಂಶೋಧನ ಲೇಖನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಬಾನು ಮುಷ್ತಾಕ್ ಅವರ ಕಥನ ಸಾಹಿತ್ಯದ ತಾತ್ವಿಕತೆ ಕುರಿತು ವಿಮರ್ಶಕ ರಂಗನಾಥ ಕಂಟನಕುಂಟೆ ಮಾತನಾಡಿದರು. ವಿದ್ವಾಂಸ ಸರ್ಜಾಶಂಕರ್ ಹರಳಿಮಠ ಅವರು ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ಅಧ್ಯಕ್ಷ ರವಿಕುಮಾರ ಪಿ.ಜಿ, ಪ್ರಧಾನ ಕಾರ್ಯದರ್ಶಿ ನಾಗೇಶ್ ಎನ್, ನಿರ್ದೇಶಕ ಕುಪ್ಪನಹಳ್ಳಿ ಎಂ. ಭೈರಪ್ಪ, ವಿದ್ವಾಂಸ ಅಮರೇಂದ್ರ ಹೊಲ್ಲಂಬಳ್ಳಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.