
ಬಂಧನ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಆಭರಣ ಅಂಗಡಿಗೆ ನುಗ್ಗಿ, ಪಿಸ್ತೂಲ್ ತೋರಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ರಾಜಸ್ಥಾನದ ಐವರು ಆರೋಪಿಗಳನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಜೋಧ್ಪುರದ ಅಂಕಿತ್ನಾಥ್ (30), ಅನೂಪ್ ಸಿಂಗ್ (30), ರವಿ ದಾವ್ (28), ಅನೋಪ್ ರಾವ್(23) ಮತ್ತು ಅರುಣ್(31) ಬಂಧಿತರು. ಆರೋಪಿಗಳಿಂದ ₹2.5 ಲಕ್ಷ ಮೌಲ್ಯದ 9 ಗ್ರಾಂ ಚಿನ್ನಾಭರಣ, ಪಿಸ್ತೂಲ್, 2 ಗುಂಡುಗಳು, 3 ಮ್ಯಾಗ್ಜಿನ್, 4 ಮೊಬೈಲ್ಗಳು, ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಆರೋಪಿಗಳು ಜನವರಿ 27ರಂದು ದಾಸನಪುರ ಗ್ರಾಮದಲ್ಲಿರುವ ಆಭರಣ ಅಂಗಡಿಗೆ ನುಗ್ಗಿ ಪಿಸ್ತೂಲ್ ತೋರಿಸಿ ಚಿನ್ನದ ಕಿವಿಯೋಲೆ, ಮೂಗುತಿ, ₹50 ಸಾವಿರ ನಗದು ದೋಚಿ ಪರಾರಿಯಾಗಿದ್ದರು. ಕಾರ್ಯಾಚರಣೆ ನಡೆಸಿ, ಅಂಕಿತ್ನಾಥ್ ಮತ್ತು ಅನೂಪ್ ಸಿಂಗ್ರನ್ನು ನಗರದಲ್ಲಿ ಬಂಧಿಸಲಾಗಿತ್ತು. ನಂತರ ಇವರ ಮಾಹಿತಿ ಮೇರೆಗೆ ಇತರೆ ಮೂವರನ್ನು ರಾಜಸ್ಥಾನದಿಂದ ಬಂಧಿಸಿ ಕರೆತರಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಆರೋಪಿಗಳ ಪೈಕಿ ಅಂಕಿತ್ ನಾಥ್ ಮತ್ತು ಅನೂಪ್ ಸಿಂಗ್ ಐದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಸಮೋಸಾ ವ್ಯಾಪಾರ ಹಾಗೂ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಬಳಿಕ ದಾಸನಪುರ ಗ್ರಾಮದ ಆಭರಣ ಅಂಗಡಿಯ ಬಳಿ ಓಡಾಡಿ ಮಾಹಿತಿ ಪಡೆದು, ಇತರೆ ಆರೋಪಿಗಳನ್ನು ರಾಜಸ್ಥಾನದಿಂದ ನಗರಕ್ಕೆ ಕರೆಸಿಕೊಂಡು ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು. ಇನ್ಸ್ಪೆಕ್ಟರ್ ಮುರಳೀಧರ್ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.