ADVERTISEMENT

ತಾಯಿ ಮಡಿಲು ಸೇರಿದ ಕಂದ: ಮಗು ಅಪಹರಿಸಿದ್ದ ಆರೋಪಿ ಬಂಧನ

ವಾಣಿವಿಲಾಸ ಆಸ್ಪತ್ರೆಯಲ್ಲಿ ಮಗು ಅಪಹರಿಸಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2023, 7:27 IST
Last Updated 20 ಏಪ್ರಿಲ್ 2023, 7:27 IST
ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿ
ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿ   

ಬೆಂಗಳೂರು: ವಾಣಿವಿಲಾಸ ಆಸ್ಪತ್ರೆಯಲ್ಲಿ ತಾಯಿ ಪಕ್ಕದಲ್ಲಿ ಮಲಗಿದ್ದ ಎಂಟು ದಿನಗಳ ಹಸುಗೂಸು ಕಳವು ಪ್ರಕರಣವು ಸುಖಾಂತ್ಯ ಕಂಡಿದ್ದು ಹಸುಗೂಸು ತಾಯಿ ಮಡಿಲು ಸೇರಿದೆ. ಮಗು ಕಳವು ಮಾಡಿದ ಆರೋಪಿಯನ್ನು ವಿವಿ ಪುರ ಪೊಲೀಸರು ಬಂಧಿಸಿದ್ದಾರೆ.

ರಾಮನಗರದ ಜಿಲ್ಲೆ ಮಾಗಡಿ ತಾಲೂಕಿನ ಐಜೂರಿನ ಆರೋಪಿ ದಿವ್ಯಾರಶ್ಮಿ(29)ಯನ್ನು ಬಂಧಿಸಲಾಗಿದೆ.

ತುಮಕೂರು ಜಿಲ್ಲೆಯ ತಿಪಟೂರಿನ ಕಾರ್ಮಿಕ ಪ್ರಸನ್ನ ಹಾಗೂ ಸುಮಾ ದಂಪತಿಯ ಮಗುವನ್ನು ಏ.15ರಂದು ದಿವ್ಯಾರಶ್ಮಿ ಕಳವು ಮಾಡಿದ್ದರು. ದಿವ್ಯಾರಶ್ಮಿ ಪತಿ ಒಂದು ವರ್ಷದ ಹಿಂದೆ ಮೃತಪಟ್ಟಿದ್ದರು. ಆಕೆಗೂ ಗರ್ಭಪಾತವಾಗಿ ಮಗು ಮೃತಪಟ್ಟಿತ್ತು. ಮಗುವಿನ ಹಂಬಲದಲ್ಲಿದ್ದ ಆಕೆಯು ಯಾವುದಾದರೂ ಆಸ್ಪತ್ರೆಗೆ ತೆರಳಿ ಮಗು ಕಳವು ಮಾಡಲು ನಿರ್ಧರಿಸಿದ್ದರು. ವಾಣಿವಿಲಾಸ ಆಸ್ಪತ್ರೆಗೆ ಬಂದು ಮಗು ಕಳವು ಮಾಡಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ಹೇಗಿತ್ತು ಆರೋಪಿ ಸಂಚು?: ಆಸ್ಪತ್ರೆಗೆ ದಾಖಲಾಗಿದ್ದ ಸಂಬಂಧಿಕರ ಸೋಗಿನಲ್ಲಿ ಏಪ್ರಿಲ್‌ 14ರಂದು ರಾತ್ರಿ ಬಂದಿದ್ದ ಆರೋಪಿ, ಹೊರ ಹೋಗಿರಲಿಲ್ಲ. ಮರುದಿನ ರಾತ್ರಿ ವಾರ್ಡ್‌ವೊಂದರಲ್ಲಿ ಎಲ್ಲರೂ ನಿದ್ರಿಸುತ್ತಿದ್ದ ವೇಳೆ ಸುಮಾ ಪಕ್ಕದಲ್ಲಿದ್ದ ಮಗುವನ್ನು ತೆಗೆದುಕೊಂಡು ಬ್ಯಾಗ್‌ನಲ್ಲಿ ಇರಿಸಿಕೊಂಡು ಹೊರಹೋಗಿದ್ದರು. ಬಸ್ ಮೂಲಕ ಊರು ಸೇರಿದ್ದರು. ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಮಗುವನ್ನು ಬ್ಯಾಗ್‌ನಲ್ಲಿ ಕೊಂಡೊಯ್ಯತ್ತಿರುವುದು ಪತ್ತೆಯಾಗಿತ್ತು.

‘ಆರೋಪಿಯು ತನ್ನದೇ ಮಗುವೆಂದು ಹೇಳಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ಆಸ್ಪತ್ರೆಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಆರೋಪಿಯ ದೃಶ್ಯ ಸೆರೆಯಾಗಿತ್ತು. ಅದನ್ನು ಆಧರಿಸಿ ವಾಣಿವಿಲಾಸ, ವಿಕ್ಟೋರಿಯಾ ಆಸತ್ರೆಗಳ ಸುತ್ತಮುತ್ತ, ಕೆ.ಆರ್. ಮಾರುಕಟ್ಟೆ ಸೇರಿ ಸುಮಾರು 600ಕ್ಕೂ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಪರಿಶೀಲನೆ ನಡೆಸಲಾಗಿತ್ತು. ಜತೆಗೆ ಮೊಬೈಲ್‌ ಲೊಕೇಷನ್‌ ಆಧರಿಸಿ ಆರೋಪಿ ಪತ್ತೆ ಮಾಡಿ ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

‘ಮಗುವಿನ ಎಡ ಕೈಯಲ್ಲಿ ಮಚ್ಚೆಯಿತ್ತು. ಈ ಮಚ್ಚೆಯನ್ನು ತಾಯಿ ನೋಡಿ ಮಗುವನ್ನು ಪತ್ತೆ ಮಾಡಿದರು. ಪೋಷಕರ ಮಡಿಲಿಗೆ ಮಗವನ್ನು ಒಪ್ಪಿಸಲಾಯಿತು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.