ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಳವಡಿಸಿಕೊಂಡಿರುವ ಅತ್ಯಾಧುನಿಕ 'ರೋಬೋಟಿಕ್ ತಂತ್ರಜ್ಞಾನ'ದಿಂದಾಗಿ ರಸ್ತೆ ಅಗೆತ ಪ್ರಮಾಣ ಕಡಿಮೆಯಾಗಿದೆ.
ಪೈಪ್ಲೈನ್ ನಿರ್ವಹಣೆಗೆ ತಿಂಗಳ ಹಿಂದೆ ಪ್ರಾಯೋಗಿಕವಾಗಿ ಆರಂಭಿಸಿರುವ ರೋಬೋಟ್ ಬಳಕೆಯಿಂದ ನೆಲದಾಳದ ಸಮಸ್ಯೆಗಳನ್ನು ನಿಖರವಾಗಿ ಗುರುತಿಸಿ ಪರಿಹಾರ ನೀಡಲಾಗಿದೆ ಎಂದು ಜಲಮಂಡಳಿ ತಿಳಿಸಿದೆ.
ತಂತ್ರಜ್ಞಾನ ಅಳವಡಿಕೆಯಾದ ನಂತರ 75 ದೂರುಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ 67 ಸ್ಥಳಗಳಲ್ಲಿ ಈಗಾಗಲೇ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. 38 ಸ್ಥಳಗಳಲ್ಲಿ ರಸ್ತೆ ಅಗೆತವನ್ನು ತಪ್ಪಿಸಲಾಗಿದೆ. ಇದರಿಂದ ಮಂಡಳಿಗೆ ಹಣ ಉಳಿತಾಯವಾಗಿದ್ದು, ನಾಗರಿಕರಿಗೆ ಉಂಟಾಗುತ್ತಿದ್ದ ಅನಾನುಕೂಲ ತಪ್ಪಿಸಲಾಗಿದೆ. ಉಳಿದಿರುವ 11 ಮನವಿ ಪತ್ರಗಳು ಪರಿಶೀಲನೆ ಹಂತದಲ್ಲಿವೆ.
‘ರೋಬೋಟ್ನಿಂದ ಒಳಚರಂಡಿ ಕೊಳವೆಯೊಳಗಿನ ಅಡ್ಡಿ, ದೋಷ ಮತ್ತು ಆಂತರಿಕ ಹಾನಿಯ 93ಕ್ಕೂ ಹೆಚ್ಚು ದೋಷಗಳನ್ನು ಪತ್ತೆ ಹಚ್ಚಲಾಗಿದೆ. ಪ್ರಾಯೋಗಿಕ ಭಾಗವಾಗಿ ಅಗೆತ ಅನಿವಾರ್ಯವಾಗಿತ್ತು. ಆದರೆ, ತಂತ್ರಜ್ಞಾನದಿಂದ ಸಮಸ್ಯೆಯ ನಿಖರ ಸ್ಥಳ ಮತ್ತು ಸ್ವರೂಪ ತಿಳಿಯುವುದು ಸುಲಭವಾಗಿದೆ’ ಎಂದು ಮಂಡಳಿ ಅಧ್ಯಕ್ಷ ಡಾ.ರಾಮಪ್ರಸಾತ್ ಮನೋಹರ್ ತಿಳಿಸಿದ್ದಾರೆ
‘ಸಾಂಪ್ರದಾಯಿಕವಾಗಿ ರಸ್ತೆ ಅಗೆಯುವುದರಿಂದ ಉಂಟಾಗುತ್ತಿದ್ದ ರಸ್ತೆತಡೆ, ಸಂಚಾರ ದಟ್ಟಣೆ, ದೂಳು, ಶಬ್ದ ಮಾಲಿನ್ಯ ಹಾಗೂ ಓಡಾಟಕ್ಕೆ ಆಗುತ್ತಿದ್ದ ತೊಂದರೆಯನ್ನು ಈ ತಂತ್ರಜ್ಞಾನ ನಿವಾರಿಸಿದೆ. ಮುಂಬರುವ ದಿನಗಳಲ್ಲಿ ನಗರದ ಇತರೆ ವಲಯಗಳಿಗೂ ತಪಾಸಣೆಯನ್ನು ವಿಸ್ತರಿಸಲು ಮಂಡಳಿ ಯೋಜಿಸಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.