
ಬೆಂಗಳೂರು: ‘ನಮ್ಮ ಹಬ್ಬಗಳು ಕನ್ನಡ, ತೆಲುಗು ಸಂಸ್ಕೃತಿ ಹಾಗೂ ಸಂಪ್ರದಾಯಗಳ ಅಡಿಪಾಯ. ಭಿನ್ನ ಹೆಸರುಗಳಿಂದ ದೇಶದೆಲ್ಲೆಡೆ ಆಚರಿಸಲಾಗುವ ರೈತರ ಹಬ್ಬ ಸಂಕ್ರಾಂತಿಯನ್ನು ತೆಲುಗಿನಲ್ಲಿ ಪೆದ್ದಪಂಡಗ ಎನ್ನಲಾಗುತ್ತದೆ’ ಎಂದು ಮಾಜಿ ಸಚಿವೆ ಜಯಮಾಲಾ ಹೇಳಿದರು.
ತೆಲುಗು ವಿಜ್ಞಾನ ಸಮಿತಿಯು ಶ್ರೀಕೃಷ್ಣದೇವರಾಯ ಕಲಾ ಮಂದಿರದಲ್ಲಿ ಆಯೋಜಿಸಿದ್ದ 73ನೇ ಸಂಕ್ರಾಂತಿ ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಈ ಆಚರಣೆ ನಮ್ಮ ನೆಲಮೂಲ ಸಂಪ್ರದಾಯಗಳ ಸೋಪಾನ. ಶತಮಾನಗಳಿಂದ ಸಾಗಿ ಬಂದಿರುವ ರೈತರ ಹಬ್ಬ, ಜನಪದ ಸಂಸ್ಕೃತಿಯ ಪ್ರತಿಬಿಂಬ’ ಎಂದರು.
‘ಕನ್ನಡ ಮತ್ತು ತೆಲುಗು ಭಾಷೆಗಳೆರಡೂ ಮೂಲ ದ್ರಾವಿಡ ಭಾಷೆಯ ಕುಡಿಗಳು. ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ಪರಸ್ಪರ ಹೋಲಿಕೆಯಿದ್ದು, ಎರಡೂ ಭಾಷೆಗಳು ಒಂದೇ ನಾಣ್ಯದ ಎರಡು ಮುಖಗಳಂತಿವೆ’ ಎಂದು ಅಭಿಪ್ರಾಯಪಟ್ಟರು.
ತೆಲುಗು ವಿಜ್ಞಾನ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ರಾಜು ಮಾತನಾಡಿ, ‘ಏಕತೆಯೇ ನಮ್ಮ ಬಲ. ಸಂಕ್ರಾಂತಿಯು ಅವಿಭಕ್ತ ಕುಟುಂಬಗಳ ಉಳಿವಿಗೆ ಪೂರಕ. ಕನ್ನಡ ಮತ್ತು ತೆಲುಗು ಭಾಷೆಗಳ ಸಂಸ್ಕೃತಿಯ ಆಧಾರಸ್ತಂಭ’ ಎಂದು ತಿಳಿಸಿದರು.
ಇದೇ ವೇಳೆ ಲೇಖಕಿ ರೋಹಿಣಿ ಸತ್ಯ ಅವರಿಗೆ ಸಂಕ್ರಾಂತಿ ಸಾಹಿತ್ಯ ಪ್ರಶಸ್ತಿ ಮತ್ತು ಕಲಾವಿದೆ ಮಾಲತಿ ಸುಧೀರ್ ಅವರಿಗೆ ಸಂಕ್ರಾಂತಿ ಸಂಸ್ಕೃತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಲೇಖಕಿ ಭವಾನಿ ದೇವಿ ಮತ್ತಿತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.