ಬೆಂಗಳೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಹೊತ್ತಿರುವ ನಗರದ ಖಾಸಗಿ ಕಾಲೇಜಿನ ವಿಭಾಗವೊಂದರ ಮುಖ್ಯಸ್ಥ (ಎಚ್ಒಡಿ) ಸಂಜೀವ್ ಕುಮಾರ್ ಮಂಡಲ್ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ತಿಲಕ್ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಸಂಜೀವ್ ಕುಮಾರ್ ಮಂಡಲ್ ಅವರನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಉಪನ್ಯಾಸಕರ ಮಾತಿಗೂ ಮಣಿಯದೇ ವಿದ್ಯಾರ್ಥಿಗಳು ಕಾಲೇಜಿಗೆ ಮುತ್ತಿಗೆ ಹಾಕಿದರು.
19 ವರ್ಷದ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಸಂಜೀವ್ ಕುಮಾರ್ ಮಂಡಲ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 75 ಅಡಿ ಎಫ್ಐಆರ್ ದಾಖಲಾಗಿತ್ತು. ವಿಚಾರಣೆಗೆ ಬಂದಾಗ ಆರೋಪಿಯನ್ನು ಬಂಧಿಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
‘ಕಾಲೇಜಿನಲ್ಲಿ ಮೂರನೇ ವರ್ಷದ ಬಿಸಿಎ ವಿದ್ಯಾರ್ಥಿನಿಯಾಗಿದ್ದು, ಸೆ.25ರಂದು ಸಂಜೀವ್ ಕುಮಾರ್ ಮಂಡಲ್ ಅವರು ಮನೆಯಲ್ಲಿ ಪತ್ನಿ ಹಾಗೂ ಮಕ್ಕಳು ಇರುವುದಾಗಿ ಹೇಳಿ ಊಟಕ್ಕೆ ಕರೆದುಕೊಂಡು ಹೋಗಿದ್ದರು. ಜಯನಗರದ 9ನೇ ಕಾಲೊನಿಯ ಕಾರ್ಪೊರೇಷನ್ ಕಾಲೊನಿಯಲ್ಲಿ ಅವರ ಮನೆ ಇದೆ. ಮನೆಗೆ ಹೋದ ಬಳಿಕ ಮನೆಯಲ್ಲಿ ಯಾರೂ ಇಲ್ಲ ಎಂಬುದಾಗಿ ತಿಳಿಸಿದ್ದರು. ಮೊದಲು ಸಹಜವಾಗಿಯೇ ಇದ್ದರು. ಕುಡಿಯಲು, ತಿನ್ನಲು ಏನಾದರೂ ಬೇಕಾ ಎಂದು ಕೇಳಿದ್ದರು. ಆಗ ನಾನು ಗಾಬರಿಯಿಂದ ಬೇಡವೆಂದು ಹೇಳಿದ್ದೆ’ ಎಂದು ವಿದ್ಯಾರ್ಥಿನಿ ದೂರು ನೀಡಿದ್ದರು.
‘ಸಂಜೀವ್ ಕುಮಾರ್ ಮಂಡಲ್ ಅವರ ಮನೆಯ ಸೋಫಾದಲ್ಲಿ ಕುಳಿತಿದ್ದೆ. ಆಗ ಅವರು ನನ್ನ ಹತ್ತಿರ ಬಂದು, ಪಕ್ಕದಲ್ಲಿ ಕುಳಿತು ಹಾಜರಾತಿ ಕಡಿಮೆಯಿದೆ ಎಂದು ಹೇಳಿ ಭುಜದ ಮೇಲೆ ಕೈಹಾಕಿ ಅನುಚಿತವಾಗಿ ವರ್ತಿಸಿದ್ದರು. ಅದಕ್ಕೆ ವಿರೋಧಿಸಿದಾಗ, ನಿನ್ನ ಹಾಜರಾತಿ ಕಡಿಮೆಯಿದ್ದು, ಹೆಚ್ಚು ಮಾಡುತ್ತೇನೆ. ಅಂಕಗಳನ್ನೂ ಹೆಚ್ಚಿಸುತ್ತೇನೆ ಎಂದು ಹೇಳಿ ಕೂದಲು ಸವರುತ್ತಾ ಲೈಂಗಿಕ ದೌರ್ಜನ್ಯ ಎಸಗಿದ್ದರು. ಅಷ್ಟರಲ್ಲಿ ಸ್ನೇಹಿತರು ಕರೆ ಮಾಡಿದ್ದರಿಂದ ಆಗ ತುರ್ತು ಕೆಲಸ ಇರುವುದಾಗಿ ಹೇಳಿ ಅಲ್ಲಿಂದ ಬಂದಿದ್ದೆ’ ಎಂದು ವಿದ್ಯಾರ್ಥಿನಿ ದೂರಿನಲ್ಲಿ ಉಲ್ಲೇಖಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.