ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದ (ಕೆಐಎ) ಆವರಣ ಮತ್ತು ಸುತ್ತ–ಮುತ್ತಲಿನ 100 ಎಕರೆ ಪ್ರದೇಶ ಹಸಿರ ಸಿರಿಯಿಂದ ಕಂಗೊಳಿಸುತ್ತಿದೆ. ಇದಕ್ಕೆ ಕಾರಣ ಸ್ಮಾರ್ಟ್ ಸ್ವಯಂಚಾಲಿತ ನೀರಾವರಿ ವ್ಯವಸ್ಥೆ. ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ದೇಶದ ಮೊದಲ ವಿಮಾನ ನಿಲ್ದಾಣ ಕೆಐಎ.
ಹವಾಮಾನ ಮತ್ತು ತಂತ್ರಜ್ಞಾನ ಆಧಾರದಿಂದ ಈ ವ್ಯವಸ್ಥೆ ಕೆಲಸ ಮಾಡುತ್ತದೆ. ಮೊಬೈಲ್ ಫೋನ್ ಮೂಲಕ ದೂರದಿಂದಲೇ ಈ ವ್ಯವಸ್ಥೆ ನಿರ್ವಹಿಸಬಹುದು. ಇದರಿಂದ ಶೇ 30ರಷ್ಟು ನೀರನ್ನು ಉಳಿಸಬಹುದಾಗಿದೆ ಎಂದು ಬಿಐಎಎಲ್ ಹೇಳಿದೆ.
ಬಾಷ್ಪೀಕರಣ, ಮಣ್ಣಿನಲ್ಲಿ ಆರ್ದ್ರತೆಯ ಮಟ್ಟ ಮತ್ತು ಹವಾಮಾನ ಸ್ಥಿತಿ ಆಧರಿಸಿ ನೀರಾವರಿ ವ್ಯವಸ್ಥೆ ಅಳವಡಿಸಲಾಗಿದೆ. ಅಂದರೆ,ಪ್ರತಿ ಗಿಡಕ್ಕೆ ಅಗತ್ಯವಾಗಿರುವಷ್ಟು ಮಾತ್ರ ನೀರನ್ನು ಹನಿ ನೀರಾವರಿ ಮೂಲಕ ಪೂರೈಸಲಾಗುತ್ತದೆ.ನೀರು ಆವಿಯಾಗಿ ವ್ಯರ್ಥವಾಗುವ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಇದರಿಂದ ಮಾನವನ ಶ್ರಮ ಉಳಿಯುತ್ತದೆಯಲ್ಲದೆ, ಅತಿಯಾದ ನೀರುಣಿಸುವಿಕೆಯಿಂದ ಭೂಮಿ ಹಾಳಾಗುವುದನ್ನು ತಡೆಯಬಹುದು.
ಮಣ್ಣಿನ ತೇವಾಂಶ, ನೀರಿನ ಹರಿವು ಮತ್ತು ಮಳೆಯ ಪ್ರಮಾಣ ಅಳೆಯುವ ಸೆನ್ಸರ್ಗಳನ್ನು ಅಳವಡಿಸಲಾಗಿದೆ. ಇವುಗಳಿಂದತಾಪಮಾನ, ಗಾಳಿಯ ವೇಗ, ಸೂರ್ಯನ ಕಿರಣ, ಗಾಳಿಯ ದಿಕ್ಕು, ಸಾಪೇಕ್ಷಿತ ತೇವಾಂಶ ಮತ್ತು ಮಳೆ ಕುರಿತು ನಿಖರವಾದ ವಿವರಗಳು ಲಭಿಸುತ್ತವೆ. ಇದರಿಂದ ಈ ವ್ಯವಸ್ಥೆ ನಿರ್ವಹಣೆ ಸಾಧ್ಯವಾಗುತ್ತದೆ.
ಲಾಕ್ಡೌನ್ನಂತಹ ಸಂದರ್ಭದಲ್ಲಿ ಈ ವಿಸ್ತಾರವಾದ ತೋಟದ ಪ್ರದೇಶವನ್ನು ಕಾರ್ಯಕ್ಷಮತೆಯೊಂದಿಗೆ ನಿರ್ವಹಿಸಲು ಈ ತಂತ್ರಜ್ಞಾನದಿಂದ ಸಾಧ್ಯವಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.