ADVERTISEMENT

ಹಲ್ಲೆ, ದಾಂಧಲೆ ನಡೆಸಿದರೆ ಮೂರು ವರ್ಷ ಜೈಲು, 50 ಸಾವಿರ ದಂಡ?

ರಾಜ್ಯ ಸರ್ಕಾರದಿಂದ ಸುಗ್ರೀವಾಜ್ಞೆ ಸಿದ್ಧ; ರಾಜ್ಯಪಾಲರ ಅಂಕಿತ ಬಾಕಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 14:25 IST
Last Updated 21 ಏಪ್ರಿಲ್ 2020, 14:25 IST
ಪಾದರಾಯನಪುರದ ಮುಖ್ಯರಸ್ತೆಗಳಲ್ಲಿ ಪೊಲೀಸರು ಸೋಮವಾರ ಪಥಸಂಚಲನ ನಡೆಸಿದರು ಪ್ರಜಾವಾಣಿ ಚಿತ್ರ/ರಂಜು ಪಿ.
ಪಾದರಾಯನಪುರದ ಮುಖ್ಯರಸ್ತೆಗಳಲ್ಲಿ ಪೊಲೀಸರು ಸೋಮವಾರ ಪಥಸಂಚಲನ ನಡೆಸಿದರು ಪ್ರಜಾವಾಣಿ ಚಿತ್ರ/ರಂಜು ಪಿ.   

ಬೆಂಗಳೂರು: ಕೋವಿಡ್-19 ವಿರುದ್ಧದ ಹೋರಾಟದಲ್ಲಿ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ಕೊಡುವ ಉದ್ದೇಶದಿಂದ ಜಾರಿಗೆ ತರಲು ನಿರ್ಧರಿಸಿರುವ ಸುಗ್ರೀವಾಜ್ಞೆ ಸಿದ್ದವಾಗಿದ್ದು, ರಾಜ್ಯಪಾಲರ ಅಂಕಿತಕ್ಕಾಗಿ ಬುಧವಾರ ಸಲ್ಲಿಕೆ ಆಗಲಿದೆ.

ಈ ಸುಗ್ರೀವಾಜ್ಞೆಯಲ್ಲಿ, ಆಶಾ ಕಾರ್ಯಕರ್ತರು, ವೈದ್ಯರು, ಅಧಿಕಾರಿಗಳ ಮೇಲೆ ಹಲ್ಲೆ, ಉದ್ದೇಶ ಪೂರ್ವಕವಾಗಿ ಸೋಂಕು ಹಬ್ಬಿಸುವುದು ಸೇರಿದಂತೆ ನಿಯಮ ಉಲ್ಲಂಘಿಸುವ ಎಲ್ಲ ಪ್ರಕರಣಗಳನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗಿದ್ದು, ಅಂಥವರಿಗೆ 3 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಅಲ್ಲದೆ, ಸರ್ಕಾರಿ, ಖಾಸಗಿ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದರೆ, ಅದಕ್ಕೆ ಕಾರಣರಾದವರ ಆಸ್ತಿಪಾಸ್ತಿ ಮುಟ್ಟುಗೋಲು ಹಾಕುವ ಅವಕಾಶವನ್ನು ಕಾನೂನು ಬದ್ಧ ಸಂಸ್ಥೆಗಳಿಗೆ ಸುಗ್ರೀವಾಜ್ಞೆ ಮೂಲಕ ನೀಡಲಾಗಿದೆ. ಉಳಿದಂತೆ, ಕೇರಳದಲ್ಲಿ ಈಗಾಗಲೇ ಜಾರಿಗೆ ತರಲಾಗಿರುವ ಇದೇ ರೀತಿಯ ಕಾಯ್ದೆಯಲ್ಲಿರುವ ಎಲ್ಲ ಅಂಶಗಳು ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ ಸುಗ್ರೀವಾಜ್ಞೆಯಲ್ಲಿಯೂ ಇದೆ ಎಂದೂ ಮೂಲಗಳು ಹೇಳಿವೆ.

ADVERTISEMENT

ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆಯಡಿ ಈ ಅಂಶಗಳನ್ನು ಸೇರಿಸಿ ಕರ್ನಾಟಕ ರಾಜ್ಯ ಸಾಂಕ್ರಾಮಿಕ ರೋಗಗಳ ಕಾಯ್ದೆ ಹೆಸರಿನಲ್ಲಿ ಹೊಸ ಸುಗ್ರೀವಾಜ್ಞೆ ಸಿದ್ಧಪಡಿಸಲಾಗಿದೆ. ಪಾದರಾಯನಪುರದಲ್ಲಿ ನಡೆದ ರೀತಿಯ ಘಟನೆ ಮರುಕಳಿಸದಂತೆ ತಡೆಯಲು, ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.