ಎ.ಐ. ಚಿತ್ರ
ಬೆಂಗಳೂರು: ನವರಾತ್ರಿ ಉತ್ಸವ ಹಾಗೂ ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಣೆಯ ಹಿನ್ನೆಲೆಯಲ್ಲಿ ಊರಿನತ್ತ ಜನರು ಮುಖ ಮಾಡಿದ್ದು, ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿದೆ.
ಮೈಸೂರು–ಬೆಂಗಳೂರು ರಸ್ತೆಯ ಕೆಂಗೇರಿ ಬಳಿ ವಾಹನಗಳು ಸಾಲು ಗಟ್ಟಿ ನಿಂತಿದ್ದು, ಸವಾರರು ಪರದಾಡಿದರು. ಅದೇ ಪರಿಸ್ಥಿತಿ ಬಳ್ಳಾರಿ ರಸ್ತೆ ಹಾಗೂ ತುಮಕೂರು ರಸ್ತೆಯಲ್ಲಿಯೂ ಕಂಡು ಬಂತು.
ಸ್ವಂತ ವಾಹನ, ಕ್ಯಾಬ್ಗಳು ಹಾಗೂ ಸಾರ್ವಜನಿಕ ಸಾರಿಗೆಯಲ್ಲಿ ಜನರು ದೂರದ ಊರಿಗೆ ಪ್ರಯಾಣಿಸಿದರು. ವಾಹನ ದಟ್ಟಣೆ ಪರಿಹರಿಸಲು ಪೊಲೀಸರು ಹರಸಹಾಸ ಪಟ್ಟರು. ವಾಹನ ಚಾಲಕರು ಪರ್ಯಾಯ ರಸ್ತೆಗಳಲ್ಲಿ ತೆರಳಲು ಮುಂದಾದರು. ಆದರೆ ಆ ರಸ್ತೆಗಳಲ್ಲೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಎಲೆಕ್ಟ್ರಾನಿಕ್ ಸಿಟಿ, ಕೆ.ಆರ್.ಪುರ, ಹೆಬ್ಬಾಳ ರಸ್ತೆ, ಜಾಲಹಳ್ಳಿ ಕ್ರಾಸ್, ಎಂಟನೇ ಮೈಲಿ, ನಾಗಸಂದ್ರ, ನೆಲಮಂಗಲ, ಹೊರವರ್ತುಲ ರಸ್ತೆಯಲ್ಲೂ ವಿಪರೀತ ದಟ್ಟಣೆ ಕಂಡು ಬಂತು.
ಶುಕ್ರವಾರ ರಾತ್ರಿ ಸಾವಿರಾರು ಪ್ರಯಾಣಿಕರು ಬಂದ ಕಾರಣ ಮೆಜೆಸ್ಟಿಕ್ನಲ್ಲಿ ಬಸ್ಗಳ ಕೊರತೆ ಉಂಟಾಗಿ, ದೂರದ ಊರಿಗೆ ಹೋಗುವ ಪ್ರಯಾಣಿಕರು ಪರದಾಡಿದರು.
ದಸರಾ ಮಹೋತ್ಸವ ಮತ್ತು ಶಾಲಾ, ಕಾಲೇಜುಗಳಿಗೆ ರಜೆ ಇರುವುದರಿಂದ ಪ್ರವಾಸ ಹೋಗುವವರ ಸಂಖ್ಯೆ ಹೆಚ್ಚಾಗಿದ್ದು ಕೆಎಸ್ಆರ್ಟಿಸಿ ಹೆಚ್ಚುವರಿ ಬಸ್ಗಳನ್ನು ರಸ್ತೆಗಿಳಿಸಿದೆ. ಆದರೂ ಬಸ್ಗಳ ಕೊರತೆ ಎದುರಾಗಿತ್ತು.
ಬೆಂಗಳೂರಿನಿಂದ ರಾಜ್ಯದ ವಿವಿಧ ಪ್ರದೇಶಗಳಿಗೆ ಹಾಗೂ ಅ.2 ಮತ್ತು 5ರಂದು ವಿವಿಧ ಪ್ರದೇಶಗಳಿಂದ ಬೆಂಗಳೂರಿಗೆ ಈ ವಿಶೇಷ ಬಸ್ಗಳ ಸಂಚಾರ ಇರಲಿದೆ.
ಕರ್ನಾಟಕ ಸಾರಿಗೆ (ವೇಗದೂತ), ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್) ಇ.ವಿ ಪವರ್ ಪ್ಲಸ್, ಅಂಬಾರಿ ಕ್ಲಬ್ ಕ್ಲಾಸ್, ಅಂಬಾರಿ ಉತ್ಸವ್ ಹಾಗೂ ಪಲ್ಲಕ್ಕಿ ಸಾರಿಗೆ ಸೇವೆಗಳ ಜೊತೆಗೆ ಹೆಚ್ಚುವರಿ ಬಸ್ಗಳ ಸಂಚಾರ ಇರಲಿದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.