ADVERTISEMENT

83 ಬಾರಿ ನಿಯಮ ಉಲ್ಲಂಘನೆ: ₹ 19,300 ದಂಡ ಕಟ್ಟಿದ ದ್ವಿಚಕ್ರ ವಾಹನ ಸವಾರ

ತಪಾಸಣೆ ವೇಳೆ ಸಿಕ್ಕಿಬಿದ್ದ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 21:38 IST
Last Updated 14 ಮಾರ್ಚ್ 2020, 21:38 IST
ದ್ವಿಚಕ್ರ ವಾಹನ ಸವಾರ ವಿಶ್ವನಾಥ್ ಅವರಿಗೆ ದಂಡದ ರಶೀದಿ ನೀಡಿದ ಹಲಸೂರು ಸಂಚಾರ ಠಾಣೆ ಪೊಲೀಸರು
ದ್ವಿಚಕ್ರ ವಾಹನ ಸವಾರ ವಿಶ್ವನಾಥ್ ಅವರಿಗೆ ದಂಡದ ರಶೀದಿ ನೀಡಿದ ಹಲಸೂರು ಸಂಚಾರ ಠಾಣೆ ಪೊಲೀಸರು   

ಬೆಂಗಳೂರು: 83 ಬಾರಿ ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದ ದ್ವಿಚಕ್ರ ವಾಹನ ಸವಾರ ವಿಶ್ವನಾಥ್ ಎಂಬುವರು ಹಲಸೂರು ಸಂಚಾರ ಠಾಣೆ ಪೊಲೀಸರ ಕೈಗೆ ಶುಕ್ರವಾರ ಸಿಕ್ಕಿಬಿದ್ದಿದ್ದು, ಹಳೇ ಪ್ರಕರಣಗಳಿಗೆ ₹ 19,300 ದಂಡ ಕಟ್ಟಿದ್ದಾರೆ.

ದೊಮ್ಮಲೂರು ನಿವಾಸಿಯಾದ ವಿಶ್ವನಾಥ್‌, ಶುಕ್ರವಾರ ಠಾಣೆ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದರು. ವಾಹನಗಳ ತಪಾಸಣೆ ಕರ್ತವ್ಯದಲ್ಲಿದ್ದ ಎಎಸ್‌ಐ ಬಿಜು ಮ್ಯಾಥ್ಯೂ ಹಾಗೂ ಸಿಬ್ಬಂದಿ, ವಿಶ್ವನಾಥ್ ವಾಹನ ತಡೆದು ಪರಿಶೀಲಿಸಿದ್ದರು.

ವಾಹನದ ಸಂಖ್ಯೆಯನ್ನು ಉಪಕರಣದಲ್ಲಿ ನಮೂದಿಸಿ ನೋಡಿದಾಗ, 83 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದು ಪತ್ತೆಯಾಗಿತ್ತು. ಬಳಿಕ ವಾಹನ ಜಪ್ತಿ ಮಾಡಿದ್ದರು. ದಂಡದ ಮೊತ್ತವನ್ನು ಪಾವತಿಸಿ ದ್ವಿಚಕ್ರ ವಾಹನವನ್ನು ವಿಶ್ವನಾಥ್ ಬಿಡಿಸಿಕೊಂಡು ಹೋಗಿದ್ದಾರೆ.

ADVERTISEMENT

‘ಅನುಮಾನದ ಮೇರೆಗೆ ವಿಶ್ವನಾಥ್ ಅವರ ದ್ವಿಚಕ್ರ ವಾಹನವನ್ನು ತಡೆಯಲಾಗಿತ್ತು. ಅವಾಗಲೇ ಅವರ ನಿಯಮ ಉಲ್ಲಂಘನೆ ಪ್ರಕರಣಗಳು ಪತ್ತೆಯಾದವು. ಹಲವು ತಿಂಗಳಿನಿಂದ ರಾಜಾರೋಷವಾಗಿ ವಿಶ್ವನಾಥ್ ನಿಯಮ ಉಲ್ಲಂಘಿಸಿದ್ದಾರೆ. ‌ಕೆಲವೆಡೆ ತಪಾಸಣಾ ನಿರತ ಪೊಲೀಸರ ಕಣ್ತಪ್ಪಿಸಿಕೊಂಡೂ ಓಡಾಡಿದ್ದಾರೆ’ ಎಂದು ಹಲಸೂರು ಸಂಚಾರ ಠಾಣೆ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.