ADVERTISEMENT

ಕರ್ನಾಟಕ ರಾಜ್ಯೋತ್ಸವ: ಬೆಂಗಳೂರಿನಲ್ಲಿ ದಟ್ಟಣೆಯಲ್ಲಿ ಸಿಲುಕಿ ಸವಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2023, 15:30 IST
Last Updated 1 ನವೆಂಬರ್ 2023, 15:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ನಗರದಲ್ಲಿ ಬುಧವಾರ ವಿಪರೀತ ದಟ್ಟಣೆಯಲ್ಲಿ ಸಿಲುಕಿ ವಾಹನ ಸವಾರರು ಹಾಗೂ ಸಾರ್ವಜನಿಕರು ಹೈರಾಣಾದರು.

ವಿವಿಧ ಬಡಾವಣೆ ಹಾಗೂ ಮೈದಾನಗಳಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಏಕಕಾಲದಲ್ಲಿ ಸಂಘ– ಸಂಸ್ಥೆಗಳು ರಾಜ್ಯೋತ್ಸವದ ಮೆರವಣಿಗೆ ಆಯೋಜಿಸಿದ್ದವು. ರಜೆಯಿದ್ದ ಕಾರಣಕ್ಕೆ ಜನರು ತಮ್ಮ ಖಾಸಗಿ ವಾಹನಗಳಲ್ಲಿ ನಗರಕ್ಕೆ ಬಂದಿದ್ದರು. ಇದರಿಂದ ಪ್ರಮುಖ ರಸ್ತೆಗಳಲ್ಲಿ ದಟ್ಟಣೆ ಕಂಡುಬಂತು.

ADVERTISEMENT

ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ರಾಜ್ಯೋತ್ಸವ ಸಮಾರಂಭವನ್ನು ಬೆಳಿಗ್ಗೆಯೇ ಆಯೋಜಿಸಿತ್ತು. ಅಲ್ಲಿಗೆ ಶಾಲಾ ವಾಹನಗಳು ಮಕ್ಕಳನ್ನು ಕರೆತಂದಿದ್ದವು. ಇದರಿಂದ ಕ್ರೀಡಾಂಗಣದ ಸುತ್ತಮುತ್ತಲೂ ಮಧ್ಯಾಹ್ನದವರೆಗೂ ದಟ್ಟಣೆ ಇತ್ತು.

ರಿಚ್ಮಂಡ್ ವೃತ್ತ, ಕಾರ್ಪೊರೇಷನ್ ವೃತ್ತ, ರೆಸಿಡೆನ್ಸಿ ರಸ್ತೆ, ಮೆಜೆಸ್ಟಿಕ್, ಕೆ.ಆರ್.ವೃತ್ತ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ದಟ್ಟಣೆ ಕಂಡುಬಂತು. ವಾಹನಗಳು ಸಾಲುಗಟ್ಟಿ ನಿಂತಿದ್ದವು. ದಟ್ಟಣೆಯಲ್ಲಿ ಸಿಲುಕಿ ಜನರು ಸುಸ್ತಾದರು.

ಇನ್ನು ರಜೆಯ ಕಾರಣಕ್ಕೆ ಕೆಲವರು ಒಂದು ದಿನ ಪ್ರವಾಸಕ್ಕೆ ನಗರದಿಂದ ಹೊರ ಜಿಲ್ಲೆಗಳಿಗೆ ತೆರಳಿದರು. ಮೈಸೂರು ರಸ್ತೆ, ತುಮಕೂರು ರಸ್ತೆ, ಬನ್ನೇರುಘಟ್ಟ ಮಾರ್ಗದಲ್ಲಿ ಸಮಸ್ಯೆ ಕಂಡುಬಂತು.

ಚಿಕ್ಕಪೇಟೆಯಲ್ಲಿ ಖರೀದಿಗೆ ಅಪಾರ ಸಂಖ್ಯೆಯಲ್ಲಿ ಗ್ರಾಹಕರು ಬಂದಿದ್ದರು. ಹೆಬ್ಬಾಳ, ನಾಗಾವರ, ಹೆಣ್ಣೂರು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.