ADVERTISEMENT

ಸಂಚಾರ ನಿಯಮ ಉಲ್ಲಂಘನೆ: ಬಿಎಂಟಿಸಿ, ಕೆಎಸ್‌ಆರ್‌ಟಿಸಿಯಿಂದ ₹1.40 ಕೋಟಿ ದಂಡ ಬಾಕಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 18:30 IST
Last Updated 28 ಜನವರಿ 2023, 18:30 IST
   

ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಪಾವತಿಸಬೇಕಿರುವ ₹1.40 ಕೋಟಿಗೂ ಹೆಚ್ಚು ದಂಡದ ಮೊತ್ತವನ್ನು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಾಕಿ ಉಳಿಸಿಕೊಂಡಿವೆ. ಈ ಮೊತ್ತ ಪಾವತಿಸುವಂತೆ ಎರಡು ಸಂಸ್ಥೆಗಳಿಗೆ ಸಂಚಾರ ಪೊಲೀಸರು ಪತ್ರ ಬರೆದಿದ್ದಾರೆ.

ಸಂಚಾರ ವಿಭಾಗದ ವಿಶೇಷ ಕಮಿಷನರ್‌ ಡಾ.ಎಂ.ಎ.ಸಲೀಂ ಅವರು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಬಸ್ ಚಾಲಕರು ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅದರಲ್ಲೂ ಬಿಎಂಟಿಸಿ ಚಾಲಕರು ಎಲ್ಲೆಂದಲ್ಲಿ ಬಸ್‌ಗಳನ್ನು ನಿಲ್ಲಿಸುವುದು ದಟ್ಟಣೆಗೆ ಕಾರಣವಾಗುತ್ತಿದೆ. ದಂಡ ವಿಧಿಸುತ್ತಿದ್ದರೂ ಈ ಪ್ರವೃತ್ತಿ ಕಡಿಮೆಯಾಗಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

ಬಿಎಂಟಿಸಿ ಒಂದರಿಂದಲೇ ₹1.30 ಕೋಟಿಗೂ ಹೆಚ್ಚು ದಂಡ ಬರಬೇಕಿದೆ. ಚಾಲಕರಿಗೆ ಎಚ್ಚರಿಕೆ ನೀಡಿ ದಟ್ಟಣೆ ಕಡಿಮೆ ಮಾಡಲು ಸಹಕರಿಸಬೇಕು ಎಂದು ಸಲಹೆ ನೀಡಿದ್ದಾರೆ.

‘ಸಂಚಾರ ಪೊಲೀಸರಿಂದ ಪತ್ರ ಬಂದಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಚಾಲಕರ ಸಂಬಳದಿಂದ ಕಡಿತ ಮಾಡಿ ದಂಡ ಪಾವತಿಸುವುದು ಮೊದಲಿನಿಂದ ನಡೆದಿದೆ. ಸಂಚಾರ ಪೊಲೀಸರಿಗೆ ಬಾಕಿ ಮೊತ್ತ ಪಾವತಿಸಲಾಗುವುದು’ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.

‘ಅಡ್ಡಾದಿಡ್ಡಿ ಬಸ್‌ ಚಾಲನೆ ಸಂಬಂಧ ಮೂರು ವರ್ಷದ ಅವಧಿಯಲ್ಲಿ ಬಿಎಂಟಿಸಿಗೆ 26 ಸಾವಿರ ನೋಟಿಸ್‌ ನೀಡಲಾಗಿತ್ತು. ಅದರ ದಂಡದ ಮೊತ್ತ ಪಾವತಿಸುವಂತೆ ಸೂಚಿಸಿ ಬಿಎಂಟಿಸಿಗೆ ಪತ್ರ ಬರೆಯಲಾಗಿದೆ’ ಎಂದು ಬೆಂಗಳೂರು ನಗರ ಸಂಚಾರ ವಿಭಾಗದ ವಿಶೇಷ ಕಮಿಷನರ್‌ ಡಾ.ಎಂ.ಎ.ಸಲೀಂ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.