ಬೆಂಗಳೂರು: ‘ಜನತಾ ಕರ್ಫ್ಯೂ’ ಬಗ್ಗೆ ಚಿತ್ರ ನಟ ರಜನಿಕಾಂತ್ ಮಾಡಿದ್ದ ಟ್ವೀಟ್ ಅನ್ನು ಟ್ವಿಟರ್ ಸಂಸ್ಥೆಯು ಅಳಿಸಿಹಾಕಿದೆ. ರಜನಿ ಹೇಳಿಕೆಯು ತಪ್ಪು ಸಂದೇಶವನ್ನು ನೀಡುತ್ತಿದೆ ಎಂದು ಅನೇಕರು ಆಕ್ಷೇಪ ಎತ್ತಿದ ಕಾರಣಕ್ಕೆ ಸಂಸ್ಥೆ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಟ್ವಿಟರ್ನಲ್ಲಿ ವಿಡಿಯೊ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದ ರಜನಿಕಾಂತ್, ‘ಭಾರತದಲ್ಲಿ ಕೊರೊನಾ ವೈರಸ್ ಎರಡನೇ ಹಂತದಲ್ಲಿದೆ. ಇದು ಜನರ ಮೂಲಕವೇ ಪ್ರಸಾರವಾಗುವುದರಿಂದ ಜನರು ಮನೆಯಲ್ಲೇ ಇದ್ದು ಅದು ಮೂರನೇ ಹಂತದ ಪ್ರಸರಣವನ್ನು ತಲುಪುವುದನ್ನು ತಡೆಯಬೇಕು. 12ರಿಂದ 14 ಗಂಟೆಗಳ ಕಾಲ ಎಲ್ಲರೂ ಮನೆಯಲ್ಲೇ ಉಳಿದರೆ ವೈರಸ್ನ ಪ್ರಸರಣ ಕೊಂಡಿ ಕಳಚುತ್ತದೆ’ ಎಂದು ಹೇಳಿದ್ದರು.
‘ಕರ್ಫ್ಯೂ ಆಚರಣೆಯ ಮೂಲಕ ವೈರಸ್ನ ಮೂರನೇ ಹಂತದ ಪ್ರಸರಣವನ್ನು ತಡೆಯುವ ಪ್ರಯತ್ನವನ್ನು ಇಟಲಿ ಸರ್ಕಾರ ಮಾಡಿತ್ತು.
ಆದರೆ ಜನರು ಸಹಕಾರ ನೀಡದ ಕಾರಣ ಅಲ್ಲಿ ಸಾವಿರಾರು ಜನರು ಪ್ರಾಣ ತೆತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಜನತಾ ಕರ್ಫ್ಯೂಗೆ ಬೆಂಬಲ ನೀಡಿ, ಮನೆಯೊಳಗೇ ಉಳಿಯಬೇಕು ಎಂದು ಮನವಿ ಮಾಡುತ್ತೇನೆ’ ಎಂಬ ವಿಡಿಯೊ ಹಾಕಿದ್ದರು.
ಈ ಪೋಸ್ಟ್ಗೆ ಅನೇಕರು ಟೀಕೆ ವ್ಯಕ್ತಪಡಿಸಿದ್ದರು. ಮನೆಯಲ್ಲೇ ಉಳಿಯುವುದರಿಂದ ಈ ಸಾಂಕ್ರಾಮಿಕವು ಮೂರನೇ ಹಂತದ ಪ್ರಸರಣ ಕಾಣುವುದನ್ನು ತಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇದಾದ ಬಳಿಕ ಟ್ವೀಟ್ಅನ್ನು ಅಳಿಸಿ ಹಾಕಲಾಗಿದೆ. ಆ ಜಾಗದಲ್ಲಿ, ‘ಟ್ವಿಟರ್ನ ನಿಯಮಗಳನ್ನು ಈ ಟ್ವೀಟ್ ಉಲ್ಲಂಘಿಸುವುದರಿಂದ ಈ ಟ್ವೀಟ್ ಲಭ್ಯವಾಗುವುದಿಲ್ಲ’ ಎಂಬ ಸಂದೇಶ ಹಾಕಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.