ADVERTISEMENT

ಗಸ್ತು ಸಿಬ್ಬಂದಿಗೆ ಸಿಕ್ಕಿಬಿದ್ದ ದ್ವಿಚಕ್ರ ವಾಹನ ಕಳ್ಳತನ ಆರೋಪಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 18:44 IST
Last Updated 29 ನವೆಂಬರ್ 2022, 18:44 IST
   

ಬೆಂಗಳೂರು: ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ನಂದಿನಿ ಲೇಔಟ್‌ 2ನೇ ಅಡ್ಡರಸ್ತೆಯ ನಿವಾಸಿ ಜೆ.ಪಿ. ಬಾಲರಾಜ್ (21) ಹಾಗೂ ಪ್ರಥಮ್ (21) ಬಂಧಿತರು. ಇವರಿಂದ ₹ 1.50 ಲಕ್ಷ ಮೌಲ್ಯದ 4 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಬಾಲರಾಜ್, ಪಿ.ಜಿ.ಹಳ್ಳಿ ವೃತ್ತದಲ್ಲಿ ಇತ್ತೀಚೆಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ. ಅದೇ ಸ್ಥಳದಲ್ಲಿ ಗಸ್ತು ತಿರುಗುತ್ತಿದ್ದ ಸಿಬ್ಬಂದಿ, ಆರೋಪಿಯನ್ನು ತಡೆದು ನಿಲ್ಲಿಸಿ ಪರಿಶೀಲಿಸಿದ್ದರು. ವಾಹನದ ದಾಖಲೆ ಇಲ್ಲದಿದ್ದರಿಂದ, ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿಯು ಅಪರಾಧ ಹಿನ್ನೆಲೆಯುಳ್ಳವ ಎಂಬುದು ಗೊತ್ತಾಯಿತು’ ಎಂದು ತಿಳಿಸಿದರು.

ADVERTISEMENT

‘ಬಾಲರಾಜ್ ನೀಡಿದ್ದ ಮಾಹಿತಿಯಂತೆ ಇನ್ನೊಬ್ಬ ಆರೋಪಿ ಪ್ರಥಮ್‌ನನ್ನೂ ಬಂಧಿಸಲಾಯಿತು. ಇವರಿಬ್ಬರೂ ಸೇರಿ ಆರ್‌.ಟಿ.ನಗರ, ಕಾಮಾಕ್ಷಿಪಾಳ್ಯ ಹಾಗೂ ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ವಾಹನ ಕಳ್ಳತನ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.