
ಬೆಂಗಳೂರು– ಎರ್ನಾಕುಳಂ ವಂದೇ ಭಾರತ್ ರೈಲಿಗೆ ಚಾಲನೆ
ಎರ್ನಾಕುಳಂ: ಬೆಂಗಳೂರು– ಎರ್ನಾಕುಳಂ ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ 9 ಗಂಟೆಗೆ ಉತ್ತರ ಪ್ರದೇಶದ ಬನಾರಸ್ನಿಂದ ವರ್ಚುವಲ್ ವೇದಿಕೆಯಲ್ಲಿ ಚಾಲನೆ ನೀಡಿದರು.
ಇದರ ಜೊತೆಗೆ ಬನಾರಸ್–ಖಜರಾಹೋ, ಲಖನೌ–ಸಹರಾನ್ಪುರ್ ಹಾಗೂ ಫೀರೋಜ್ಪುರ–ದೆಹಲಿ ವಂದೇ ಭಾರತ್ ರೈಲುಗಳಿಗೂ ಚಾಲನೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಈ ನಾಲ್ಕು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದರು.
ಬೆಂಗಳೂರು– ಎರ್ನಾಕುಳಂ ವಂದೇ ಭಾರತ್ ರೈಲು
ಕೇರಳ–ತಮಿಳುನಾಡು–ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಹಾಗೂ ಅರಾಮದಾಯಕ ಪ್ರಯಾಣಕ್ಕಾಗಿ ಬೆಂಗಳೂರು– ಎರ್ನಾಕುಳಂ ವಂದೇ ಭಾರತ್ ರೈಲಿಗೆ ಇಂದು ಎರ್ನಾಕುಳಂ ರೈಲು ನಿಲ್ದಾಣದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.
ಈ ರೈಲು ಚೆನ್ನೈನಲ್ಲಿರುವ ದಕ್ಷಿಣ ರೈಲ್ವೆ ವ್ಯಾಪ್ತಿಗೆ ಒಳಪಡುತ್ತದೆ. ನಾಳೆ ನವೆಂಬರ್ 9ರಿಂದ ದೈನದಂದಿನ ಸಂಚಾರವನ್ನು ಆರಂಭಿಸಲಿದೆ.
ಕೇರಳದ ಎರ್ನಾಕುಳಂ, ತ್ರಿಶೂರ್, ಪಾಲಕ್ಕಾಡ್ ಹಾಗೂ ತಮಿಳುನಾಡಿನ ಕೊಯಮತ್ತೂರು, ತಿರುಪ್ಪೂರು, ಈರೋಡ್, ಸೇಲಂ ಮತ್ತು ಕರ್ನಾಟಕದ ಕೆ.ಆರ್. ಪುರ, ಕೆಎಸ್ಆರ್ ಬೆಂಗಳೂರನ್ನು ಸಂಪರ್ಕಿಸಲಿದೆ.
ಬುಧವಾರ ಹೊರತುಪಡಿಸಿ ಪ್ರತಿದಿನ ಬೆಳಿಗ್ಗೆ 5.10 ಕ್ಕೆ ಕೆಎಸ್ಆರ್ ಬೆಂಗಳೂರಿನಿಂದ ಈ ರೈಲು ಹೊರಡಲಿದ್ದು ಅದೇ ದಿನ ಮಧ್ಯಾಹ್ನ 1.50ಕ್ಕೆ ಎರ್ನಾಕುಳಂ ತಲುಪಲಿದೆ.
ಬುಧವಾರ ಹೊರತುಪಡಿಸಿ ಪ್ರತಿದಿನ ಮಧ್ಯಾಹ್ನ 2.20 ಕ್ಕೆ ಎರ್ನಾಕುಳಂನಿಂದ ಈ ರೈಲು ಹೊರಡಲಿದ್ದು ಅದೇ ದಿನ ರಾತ್ರಿ 11ಕ್ಕೆ ಕೆಎಸ್ಆರ್ ಬೆಂಗಳೂರಿಗೆ ಬರಲಿದೆ.
583 ಕಿ.ಮೀ ದೂರದ ಪ್ರಯಾಣವನ್ನು 8 ಗಂಟೆ 40 ನಿಮಿಷದಲ್ಲಿ ವಂದೇ ಭಾರತ್ ರೈಲು ಕ್ರಮಿಸಲಿದೆ. ಕೇರಳದ ಆರ್ಥಿಕ ರಾಜಧಾನಿ ಎರ್ನಾಕುಳಂ–ಕೊಚ್ಚಿಗೆ ಪ್ರಮುಖ ಸಂಪರ್ಕ ಸೇತುವೆಯಾಗಲಿದೆ. ಕೇರಳ–ತಮಿಳುನಾಡು–ಕರ್ನಾಟಕದಲ್ಲಿ ಸಂಚರಿಸುವ ಈ ರೈಲು ಎಂಟು ಕೋಚ್ಗಳನ್ನು ಒಳಗೊಂಡಿರಲಿದೆ.
ಈ ಮಾರ್ಗದ ಹೊಸ ವಂದೇ ಭಾರತ್ ರೈಲು ಪ್ರಯಾಣಿಕರಿಗೆ ಬಹು ಬೇಡಿಕೆಯ ರೈಲಾಗಲಿದೆ ಎಂದು ದಕ್ಷಿಣ ರೈಲ್ವೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.