ADVERTISEMENT

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬಕ್ಕೆ ಖರೀದಿ ಭರಾಟೆ; ಹೂವು–ಹಣ್ಣಿನ ದರ ಭಾರಿ ಏರಿಕೆ

ಕನಕಾಂಬರ ಒಂದು ಕೆ.ಜಿಗೆ ₹3 ಸಾವಿರ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 16:24 IST
Last Updated 6 ಆಗಸ್ಟ್ 2025, 16:24 IST
<div class="paragraphs"><p>ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಬುಧವಾರ ಹೂವು ಹಾಗೂ ಹಣ್ಣು ಖರೀದಿಗಾಗಿ ಕೆ.ಆರ್. ಮಾರುಕಟ್ಟೆಗೆ ಬಂದಿದ್ದ ಜನಸಾಗರ&nbsp;&nbsp;</p></div>

ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಬುಧವಾರ ಹೂವು ಹಾಗೂ ಹಣ್ಣು ಖರೀದಿಗಾಗಿ ಕೆ.ಆರ್. ಮಾರುಕಟ್ಟೆಗೆ ಬಂದಿದ್ದ ಜನಸಾಗರ  

   

ಪ್ರಜಾವಾಣಿ ಚಿತ್ರ: ರಂಜು ಪಿ.

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬವನ್ನು ಶುಕ್ರವಾರ ಸಂಭ್ರಮ–ಸಡಗರದಿಂದ ಆಚರಿಸಲು ನಗರದ ಜನತೆ ಸಿದ್ಧತೆ ನಡೆಸಿದ್ದು, ಬುಧವಾರ ಬೆಳಿಗ್ಗೆಯಿಂದಲೇ ಹೂವು ಮತ್ತು ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದರು. ಬೆಲೆ ಏರಿಕೆ ಬಿಸಿಯ ನಡುವೆಯೂ ಖರೀದಿ ಭರಾಟೆ ಜೋರಾಗಿತ್ತು.

ADVERTISEMENT

ಹಬ್ಬದ ದಿನ ಮನೆಗಳಲ್ಲಿ ಲಕ್ಷ್ಮಿ ಮೂರ್ತಿಗಳನ್ನು ಕೂರಿಸಿ, ಪೂಜಿಸುವುದು ವಾಡಿಕೆ. ಈ ವೇಳೆ ಅಲಂಕಾರಕ್ಕಾಗಿ ತರಹೇವಾರಿ ಹೂವು ಮತ್ತು ಹಣ್ಣುಗಳನ್ನು ಬಳಸುತ್ತಾರೆ. ಹಾಗಾಗಿ, ಪ್ರತಿ ವರ್ಷದಂತೆ ಈ ಬಾರಿಯೂ ಹೂವು ಮತ್ತು ಹಣ್ಣಿನ ದರಗಳಲ್ಲಿ ಭಾರಿ ಏರಿಕೆಯಾಗಿದೆ.

ಹೂವಿನ ದರ ಗಗನಮುಖಿ: ‘ಈ ಬಾರಿ ಹೂವಿಗೆ ಬೇಡಿಕೆ ಹೆಚ್ಚಿದ್ದು, ದರವೂ ದುಬಾರಿಯಾಗಿದೆ. ಈ ಹಬ್ಬದಲ್ಲೇ ಹೂವಿನ ಬೆಳೆಗಾರರು ಮತ್ತು ವರ್ತಕರು ಲಾಭ ಕಾಣುತ್ತಾರೆ’ ಎಂದು ಕೆ.ಆರ್.ಮಾರುಕಟ್ಟೆಯ ಹೂವಿನ ವರ್ತಕರಾದ ಸಲ್ಮಾನ್ ಮತ್ತು ದೀಪಕ್‌ ಮಾಹಿತಿ ನೀಡಿದರು.

‘ಕನಕಾಂಬರದ ಗರಿಷ್ಠ ದರ ಕೆ.ಜಿ.ಗೆ ₹3 ಸಾವಿರ, ಮಲ್ಲಿಗೆ ಹೂವಿನ ದರ ಕೆ.ಜಿ.ಗೆ ₹1,400ರಿಂದ ₹1,600 ತಲುಪಿದೆ.  ಪ್ರತಿ ಕೆ.ಜಿ.ಗೆ ಸೇವಂತಿಗೆ ₹ 300, ಗುಲಾಬಿ ₹ 400, ಸುಗಂಧರಾಜ ₹350, ಚೆಂಡು ಹೂವು ₹80ರಂತೆ ಮಾರಾಟವಾಗುತ್ತಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ವರಮಹಾಲಕ್ಷ್ಮಿ ಹಬ್ಬ ಸಮೀಪಿಸಿದ ಬಳಿಕ ಹೂವುಗಳ ದರದಲ್ಲಿ ಭಾರಿ ಏರಿಕೆಯಾಗಿದೆ. ಗುರುವಾರ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಹೂವಿನ ದರವೂ ಹೆಚ್ಚಾಗಲಿದೆ’ ಎಂದು ತಿಳಿಸಿದರು.

ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಕೆ.ಆರ್. ಮಾರುಕಟ್ಟೆಯಲ್ಲಿ ಬುಧವಾರ ಹೂವು ಖರೀದಿಯಲ್ಲಿ ತೊಡಗಿದ್ದ ಜನ  

ವರಮಹಾಲಕ್ಷ್ಮಿ ಹಬ್ಬದಲ್ಲಿ ಹಣ್ಣುಗಳಿಗೆ ಬೇಡಿಕೆ ಜಾಸ್ತಿ. ಲಕ್ಷ್ಮಿ ಪೂಜೆ ಸಂದರ್ಭದಲ್ಲಿ ಮೂರ್ತಿಯ ಸುತ್ತ ಜೋಡಿಸಲು ಮತ್ತು ಅಲಂಕಾರಕ್ಕಾಗಿ ಹೆಚ್ಚಿನ ಪ್ರಮಾಣದ ಹಣ್ಣುಗಳನ್ನು ಖರೀದಿಸುತ್ತಾರೆ. ಬೇಡಿಕೆ ಹೆಚ್ಚಾದಂತೆ ಹಣ್ಣುಗಳ ದರದಲ್ಲೂ ಸ್ವಲ್ಪ ಏರಿಕೆಯಾಗಿದೆ. ತರಕಾರಿ ದರಗಳು ಸ್ಥಿರವಾಗಿವೆ. ಸೊಪ್ಪಿನ ಬೆಲೆಯೂ ಕಡಿಮೆಯಾಗಿದೆ.

‘ಬೆಂಗಳೂರು ಗ್ರಾಮಾಂತರ, ತುಮಕೂರು, ಕುಣಿಗಲ್, ಗೌರಿಬಿದನೂರು, ಶಿವಮೊಗ್ಗ, ಮೈಸೂರು ಮುಂತಾದ ಕಡೆಗಳಿಂದ ನಗರದ ಮಾರುಕಟ್ಟೆಗಳಿಗೆ ಹೂವು ಪೂರೈಕೆಯಾಗುತ್ತದೆ. ತಮಿಳುನಾಡಿನ ವಿವಿಧೆಡೆಗಳಿಂದಲೂ ಹೂವು ಪೂರೈಕೆಯಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಮಳೆ ಇಳಿಮುಖವಾಗಿರುವುದರಿಂದ ಹೂವುಗಳ ಆವಕ ಹೆಚ್ಚಿದೆ. ಜೊತೆಗೆ ತಾಜಾ ಹೂವಿನ ಪೂರೈಕೆ ಆಗುತ್ತಿದೆ’ ಎಂದು ಕೆ.ಆರ್. ಮಾರುಕಟ್ಟೆಯ ಹೂವಿನ ವ್ಯಾಪಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಬುಧವಾರ ಕೆ.ಆರ್. ಮಾರುಕಟ್ಟೆಯಲ್ಲಿ ಬಾಳೆ ಕಂಬ ಖರೀದಿಯಲ್ಲಿ ತೊಡಗಿದ್ದ ಮಹಿಳೆಯರು

ಕಿರು ಮಾರುಕಟ್ಟೆಗಳ ನಿರ್ಮಾಣ

ನಗರದ ವಿವಿಧ ಭಾಗಗಳಲ್ಲಿ ಹೂವು ಹಾಗೂ ಆಲಂಕಾರಿಕ ವಸ್ತುಗಳ ಮಾರಾಟದ ಭರಾಟೆಯೂ ಜೋರಾಗಿದೆ. ಪ್ರಮುಖ ರಸ್ತೆಗಳು ವೃತ್ತಗಳಲ್ಲಿ ಕಿರು ಮಾರುಕಟ್ಟೆಗಳು ದಿಢೀರ್‌ ತಲೆಎತ್ತಿವೆ. ಮಲ್ಲೇಶ್ವರ ಯಶವಂತಪುರ ಜಯನಗರ ಶಿವಾಜಿನಗರದ ಮಾರುಕಟ್ಟೆ ಪ್ರದೇಶಗಳಲ್ಲಿನ ರಸ್ತೆ ಇಕ್ಕೆಲಗಳಲ್ಲಿ ನಡೆದಾಡಲು ಕಷ್ಟವಾಗುವಷ್ಟು ಗ್ರಾಹಕರು ಜಮಾಯಿಸಿದ್ದರು. ಇದರಿಂದ ಸಂಚಾರ ದಟ್ಟಣೆಯುಂಟಾಗಿ ವಾಹನ ಸವಾರರು ಪರದಾಡಬೇಕಾಯಿತು. ಕೆ.ಆರ್. ಮಾರುಕಟ್ಟೆಗೆ ಸಂಪರ್ಕಿಸುವ ರಸ್ತೆಗಳಲ್ಲಿಸಂಚಾರ ದಟ್ಟಣೆ ತೀವ್ರವಾಗಿತ್ತು. ಮುಂಜಾನೆ 4ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಕೆ.ಆರ್. ಮಾರುಕಟ್ಟೆ ಅವೆನ್ಯೂ ರಸ್ತೆಯಲ್ಲಿ ಜನದಟ್ಟಣೆ ಹೆಚ್ಚಿತ್ತು.

ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಬುಧವಾರ ಕೆ.ಆರ್. ಮಾರುಕಟ್ಟೆಯಲ್ಲಿ ಹೂವು ಹಾಗೂ ಹಣ್ಣು ಖರೀದಿಗೆ ಬಂದಿದ್ದ ಜನಸಾಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.