ADVERTISEMENT

ವಾಹನ ಸಂಚಾರ ನಿಷೇಧ: ಪಾಲಿಕೆ ನಿರ್ಣಯ

ಕಬ್ಬನ್‌ ಉದ್ಯಾನ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 21:31 IST
Last Updated 1 ಜುಲೈ 2020, 21:31 IST
ಕಬ್ಬನ್ ಉದ್ಯಾನದಲ್ಲಿ ವಾಹನಗಳ ಸಂಚಾರ (ಸಾಂದರ್ಭಿಕ ಚಿತ್ರ)
ಕಬ್ಬನ್ ಉದ್ಯಾನದಲ್ಲಿ ವಾಹನಗಳ ಸಂಚಾರ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿ ವಾಹನಗಳ ನಿಲುಗಡೆ ಹಾಗೂ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸುವ ಕುರಿತು ತೋಟಗಾರಿಕೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್ ಅವರಿಗೆ ಕೌನ್ಸಿಲ್ ಸಭೆಯಲ್ಲಿ ಸೂಚಿಸಲಾಯಿತು.

ಉದ್ಯಾನದಲ್ಲಿ ವಾಹನ ಸಂಚಾರದಿಂದ ಹೆಚ್ಚುತ್ತಿರುವ ವಾಯುಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಪಾಲಿಕೆ ಈ ಕ್ರಮಕ್ಕೆ ಮುಂದಾಗಿದೆ. ಲಾಲ್‍ಬಾಗ್ ಉದ್ಯಾನದ ಮಾದರಿಯಲ್ಲಿ ಕಬ್ಬನ್ ಉದ್ಯಾನದಲ್ಲೂ ವಾಹನ ಸಂಚಾರ ಸಂಪೂರ್ಣವಾಗಿ ನಿಷೇಧಿಸಿ, ವಾಯುವಿಹಾರಿಗಳು, ಸೈಕಲ್ ಹಾಗೂ ವಿದ್ಯುತ್‍ಚಾಲಿತ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲು ಯೋಜಿಸಲಾಗಿದೆ.

ಉದ್ಯಾನದಲ್ಲಿ ರಸ್ತೆಯುದ್ದಕ್ಕೂ ವಾಹನಗಳನ್ನು ನಿಲ್ಲಿಸಲಾಗುತ್ತಿತ್ತು. ಇದರಿಂದ ಉದ್ಯಾನದಲ್ಲಿ ಆಗಾಗ ವಾಹನ ದಟ್ಟಣೆಯಾಗಿ ಸಂಚಾರಕ್ಕೂ ಅಡ್ಡಿಯಾಗಿತ್ತು. ಹೀಗಾಗಿ ಉದ್ಯಾನದಲ್ಲಿ ವಾಹನಗಳ ನಿಲುಗಡೆಗೂ ತಡೆ ನೀಡಲು ಪಾಲಿಕೆ ನಿರ್ಣಯಿಸಿದೆ.

ADVERTISEMENT

'ಭಾನುವಾರ, ಎರಡು ಮತ್ತು ನಾಲ್ಕನೇ ಶನಿವಾರ ಹಾಗೂ ಸರ್ಕಾರಿ ರಜೆ ದಿನಗಳಂದು ಉದ್ಯಾನದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಸಂಪೂರ್ಣವಾಗಿ ವಾಹನ ನಿಷೇಧಿಸುವ ಇಲಾಖೆಯ ಉದ್ದೇಶಕ್ಕೆ ಈಗ ಪಾಲಿಕೆಯೂ ಬೆಂಬಲ ನೀಡಿರುವುದು ಸಂತಸ ತಂದಿದೆ. ವಾಹನಗಳನ್ನು ನಿಷೇಧಿಸುವುದರಿಂದ ಉದ್ಯಾನದ ಹಸಿರು ಸಿರಿಯ ಸಂರಕ್ಷಣೆಯಾಗಲಿದೆ' ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ.ಜಗದೀಶ್ 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.