ADVERTISEMENT

ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 18:14 IST
Last Updated 16 ಮಾರ್ಚ್ 2021, 18:14 IST
ವಾಹನ ನಿಲುಗಡೆಯಾಗಿ ಬದಲಾಗಿರುವ ಅರವಿಂದ್ ಗಾರ್ಮೆಂಟ್ಸ್ ಬಳಿಯ ಪಾದಚಾರಿ ಮಾರ್ಗ
ವಾಹನ ನಿಲುಗಡೆಯಾಗಿ ಬದಲಾಗಿರುವ ಅರವಿಂದ್ ಗಾರ್ಮೆಂಟ್ಸ್ ಬಳಿಯ ಪಾದಚಾರಿ ಮಾರ್ಗ   

ಕೆಂಗೇರಿ: ಬೆಂಗಳೂರು-ಮೈಸೂರು ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪಾದಚಾರಿ ಮಾರ್ಗಗಳು ವಾಹನ ನಿಲುಗಡೆ ಹಾಗೂ ವ್ಯಾಪಾರದ ಸ್ಥಳಗಳಾಗಿ ಮಾರ್ಪಾಡುಗೊಂಡಿವೆ.

ಬಿಬಿಎಂಪಿ ವತಿಯಿಂದ ರಾಜರಾಜೇಶ್ವರಿನಗರದಿಂದ ಆರಂಭಗೊಂಡು ಕೆಂಗೇರಿವರೆಗೆ ಬಹುತೇಕ ಪಾದಾಚಾರಿ ಮಾರ್ಗಗಳನ್ನು ನವೀಕರಿಸಿಕೊಂಡು ಬರಲಾಗಿದೆ. ಇದನ್ನೇ ಅನುಕೂಲವಾಗಿ ಮಾಡಿಕೊಂಡಿರುವ ಕೆಲ ವ್ಯಾಪಾರಿಗಳು ಕಲ್ಲಂಗಡಿ ಹಣ್ಣು, ಎಳನೀರು ವ್ಯಾಪಾರವನ್ನು ದಿನವಿಡೀ ನೆಡೆಸಿಕೊಂಡು ಬರುತ್ತಿದ್ದಾರೆ. ಮತ್ತೆ ಕೆಲವೆಡೆ ತಳ್ಳುವ ಗಾಡಿಯಲ್ಲಿ ಹೊಟೇಲ್, ಕಬ್ಬಿನ ಜ್ಯೂಸ್ ಅಂಗಡಿಗಳನ್ನು ತೆರೆದು ಸುಗಮ ಸಂಚಾರಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಪಾದಚಾರಿಗಳು ದೂರುತ್ತಾರೆ.

ಅತ್ಯಂತ ವಾಹನ ಸಂಚಾರ ದಟ್ಟಣೆ ಇರುವ ಆರ್.ವಿ.ಕಾಲೇಜು ಸಮೀಪದ ಪಾದಚಾರಿ ಮಾರ್ಗ ಕೂಡ ಜ್ಯೂಸ್ ಅಂಗಡಿಯೊಂದರ ಸ್ವತ್ತಾಗಿ ಬದಲಾಗಿದೆ. ಮೈಸೂರು ರಸ್ತೆಯ ಜಯರಾಮ್ ದಾಸ್ ಬಸ್ ನಿಲುಗಡೆ ಬಳಿಯ ಪಾದಚಾರಿ ಮಾರ್ಗವೂ ಇದಕ್ಕೆ ಹೊರತಾಗಿಲ್ಲ.

ADVERTISEMENT

‘ಮೂರು ದೊಡ್ಡ ಗಾರ್ಮೆಂಟ್ ಕಂಪನಿಗಳು ಈ ರಸ್ತೆಯಲ್ಲಿದ್ದು, 5,000ಕ್ಕೂ ಹೆಚ್ಚು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗಾರ್ಮೆಂಟ್ಸ್ ಕೆಲಸ ಆರಂಭವಾಗುವ ಹಾಗೂ ಮುಗಿಯುವ ವೇಳೆಯಲ್ಲಿ ಸಂಚಾರ ದಟ್ಟಣೆ ಸಹಜವಾಗಿ ಹೆಚ್ಚಾಗಿರುತ್ತದೆ. ಇಂತಹ ವೇಳೆ ಈ ಮಾರ್ಗದಲ್ಲಿ ರಸ್ತೆ ಮೇಲೆ ನಡೆದುಕೊಂಡು ಹೋಗುವುದು ಅತ್ಯಂತ ಅಪಾಯಕಾರಿ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪಾದಚಾರಿ ಮಾರ್ಗದಲ್ಲಿರುವ ವ್ಯಾಪಾರಸ್ಥರನ್ನು ತೆರವುಗೊಳಿ ಜನರಿಗೆ ಓಡಾಡಲು ಅನುಕೂಲ ಕಲ್ಪಿಸಿಕೊಡಬೇಕು ಎಂದು ಕೆಂಗೇರಿ ನಿವಾಸಿ ರುದ್ರಸ್ವಾಮಿ ಒತ್ತಾಯಿಸಿದರು.

ಕೆಂಗೇರಿ ಸಂಚಾರ ಪೊಲೀಸ್‌ ಇನ್‌ಸ್ಪೆಕ್ಟರ್ ಶಿವಸ್ವಾಮಿ, ‘ಪಾದಾಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿರುವವರನ್ನು ಈ ಕೂಡಲೇ ತೆರವುಗೊಳಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.