ಬೆಂಗಳೂರು: ‘ಮಾಧ್ಯಮ ಕ್ಷೇತ್ರ ಇಲ್ಲದೆ ಹೋಗಿದ್ದರೆ ಪ್ರಜಾಪ್ರಭುತ್ವ ಉಳಿಯುತ್ತಿರಲಿಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಅಭಿಪ್ರಾಯಪಟ್ಟರು.
ಬೆಂಗಳೂರು ಪ್ರೆಸ್ ಕ್ಲಬ್ನ 2022ನೇ ಸಾಲಿನ ‘ವರ್ಷದ ವ್ಯಕ್ತಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ‘ಪತ್ರಕರ್ತರು ಸಾಮಾಜಿಕ ನ್ಯಾಯದ ಜತೆಗೆ ಯಾವುದು ಸರಿಯಿದೆ? ಈ ದೇಶಕ್ಕೆ ಏನು ಅಗತ್ಯವಿದೆ? ಎನ್ನುವುದನ್ನೂ ಬರೆಯಬೇಕು’ ಎಂದರು.
ಮಾಧ್ಯಮಕ್ಕೆ ಮಂತ್ರಿ ಮಾಡುವ ಶಕ್ತಿಯಿದೆ:
‘2009ರಲ್ಲಿ ರಾಜ್ಯದಿಂದ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದ ಆರು ಸಂಸದರಲ್ಲಿ ಎಸ್.ಎಂ. ಕೃಷ್ಣ, ವೀರಪ್ಪ ಮೊಯಿಲಿ ಸಚಿವರಾದರು. ನನಗೆ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು. ಆಗಲೇ ಇಬ್ಬರು ಸಚಿವರಾಗಿದ್ದರಿಂದ ನನಗೆ ಸಚಿವ ಸ್ಥಾನ ಸಿಗುವುದಿಲ್ಲವೆಂದು ಗೆಳೆಯರ ಜೊತೆ ಬೌದ್ಧ ಗಯಾದತ್ತ ಹೊರಟಿದ್ದೆ. ಬೇಸರದಿಂದ ಖರ್ಗೆ ಹೋಗಿದ್ದಾರೆ ಎಂಬ ರೀತಿಯಲ್ಲಿ ಪತ್ರಿಕೆಗಳಲ್ಲಿ ಸುದ್ದಿಗಳು ಬಂದವು. ತಕ್ಷಣ ಗುಲಾಂನಬಿ ಆಜಾದ್ ಕರೆ ಮಾಡಿ, ‘ದೆಹಲಿಯಲ್ಲಿ ಇರುವುದು ಬಿಟ್ಟು ಅಲ್ಲಿಗೆ ಏಕೆ ಹೋಗಿದ್ದೀರಿ ಬನ್ನಿ’ ಎಂದು ಕರೆದರು. ‘ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದವರನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಅನ್ಯಾಯ ಮಾಡಿದರು’ ಎಂಬ ರೀತಿಯಲ್ಲಿಯೂ ನನ್ನ ಬಗ್ಗೆ ಸುದ್ದಿಗಳನ್ನು ಬರೆಯಲಾಗಿತ್ತು. ಆ ಮೇಲೆ ನನಗೆ ಸಚಿವ ಸ್ಥಾನ ಸಿಕ್ಕಿತ್ತು. ಹೀಗಾಗಿ, ಮಾಧ್ಯಮಗಳಿಗೆ ಮಂತ್ರಿ ಮಾಡುವ ಶಕ್ತಿಯಿದೆ’ ಎಂದು ನೆನಪಿಸಿಕೊಂಡರು.
ಪ್ರೆಸ್ ಕ್ಲಬ್ ‘ವಿಶೇಷ
ಪ್ರಶಸ್ತಿ’ಯನ್ನು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮತ್ತು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಪ್ರದಾನ ಮಾಡಲಾಯಿತು. ಅಲ್ಲದೆ, 32 ಮಂದಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಗಳನ್ನು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಪ್ರದಾನ ಮಾಡಿದರು. ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಬಿ.ಪಿ. ಮಲ್ಲಪ್ಪ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.