ಬೀದರ್ ಜಿಲ್ಲೆಯ ಸಚಿವರ ಸಭೆ
ಬೀದರ್: ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಎಸ್ ಕೆ) ಲೀಸ್ ಮೇಲೆ ಕೊಟ್ಟು ಪುನರಾರಂಭಿಸುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.
ಬೆಳಗಾವಿಯಲ್ಲಿ ಬುಧವಾರ ಬೀದರ್ ಜಿಲ್ಲೆಯ ಸಚಿವರು, ಶಾಸಕರು, ಡಿಸಿಸಿ ಬ್ಯಾಂಕ್, ಕಾರ್ಮಿಕ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಮೇಲಿನಂತೆ ಹೇಳಿದರು.
ರಾಜ್ಯದ ಅನೇಕ ಕಾರ್ಖಾನೆಗಳನ್ನು ಲೀಸ್ ಮೇಲೆ ಕೊಡಲಾಗಿದೆ. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಕೂಡ ಲೀಸ್ ಗೆ ಕೊಡಬೇಕೆಂದು ಎರಡು ವರ್ಷಗಳ ಹಿಂದೆ ಸಚಿವ ಸಂಪುಟದಲ್ಲಿ ತೀರ್ಮಾನವಾಗಿದೆ. ಬ್ಯಾಂಕಿನವರು ಕಾರ್ಖಾನೆಯ ಸಾಲದ ಮೇಲಿನ ಬಡ್ಡಿ ಬಿಟ್ಟು ಕೊಡಲು ಕ್ರಮ ಜರುಗಿಸಬೇಕೆಂದು ಸಭೆಯಲ್ಲಿ ಗಮನ ಸೆಳೆಯಲಾಯಿತು.
ಅದಕ್ಕೆ ಸಚಿವ ಶಿವಾನಂದ ಪಾಟೀಲ ಅವರು, ವಿಸ್ತೃತವಾದ ವರದಿ ಕಳಿಸಿಕೊಡಿ, ಸಂಪುಟದ ಮುಂದಿಟ್ಟು, ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ಕೊಟ್ಟಿದ್ದಾರೆ ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ದಿಗಂಬರ ಸ್ವಾಮಿ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಪರಿಸರ, ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ, ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಸಾಲದ ಹೊರೆಯಿಂದ ಸ್ಧಗಿತಗೊಂಡಿದ್ದು, ಹಲವು ಕಾರ್ಮಿಕರ ಭವಿಷ್ಯ ಅಂಧಕಾರದಲ್ಲಿದೆ. ಪ್ರಸ್ತುತ ನಡೆದಿರುವ ಹರಾಜಿಗೆ ತಡೆ ಹಿಡಿಯಬೇಕು., ಪುನಶ್ಚೇತನಕ್ಕೆ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಖಾನೆಯೂ ಉಳಿಯಬೇಕು, ಕಾರ್ಮಿಕರೂ ಉಳಿಯಬೇಕು. ಕಾರ್ಖಾನೆಗೆ ಸಾಲ ನೀಡಿರುವ ಬ್ಯಾಂಕ್ ಗಳೂ ಉಳಿಯಬೇಕು. ಈ ರೀತಿ ಒಂದು ಸೂತ್ರ ರೂಪಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಬೀದರ್ ಸಕ್ಕರೆ ಕಾರ್ಖಾನೆ ಡಿಸಿಸಿ ಬ್ಯಾಂಕ್ ನಿಂದ ₹115 ಕೋಟಿ ಸಾಲ ಪಡೆದಿದ್ದು ಬಡ್ಡಿ ಸಹಿತ ₹237 ಕೋಟಿ ಸಾಲ ಹೊಂದಿದೆ. ಇದರ ಜೊತೆಗೆ ಅಪೆಕ್ಸ್ ಬ್ಯಾಂಕ್ ಗೆ ₹110 ಕೋಟಿ ಬಾಕಿ ಉಳಿಸಿಕೊಂಡಿದ್ದು, ಒಟ್ಟು ₹406 ಕೋಟಿ ಸಾಲದ ಸುಳಿಯಲ್ಲಿ ಸಿಲುಕಿದೆ. ಹೀಗಾಗಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಾಲ ನೀಡಿರುವ ಎಲ್ಲ ಬ್ಯಾಂಕ್ ಗಳ ಉನ್ನತಾಧಿಕಾರಿಗಳು ಮತ್ತು ಕಾರ್ಖಾನೆ ಆಡಳಿತ ಮಂಡಳಿ ಸಭೆ ಕರೆದು ಒನ್ ಟೈಮ್ ಸೆಟಲ್ಮೆಂಟ್ - ಒಟಿಎಸ್ ಮಾಡುವ ಬಗ್ಗೆ ನಿರ್ಣಯ ಮಾಡಿ, ಸರ್ಕಾರಕ್ಕೆ ಸಲಿಸುವಂತೆ ತಿಳಿಸಿದರು.
25 ಸಾವಿರ ರೈತ ಸದಸ್ಯರ ಭವಿಷ್ಯ ಈ ಕಾರ್ಖಾನೆಯ ಮೇಲಿದ್ದು, ಈ ಸಭೆಯ ನಂತರ ಕಾರ್ಖಾನೆಯನ್ನು 30 ವರ್ಷಗಳ ಗುತ್ತಿಗೆಗೆ ನೀಡಿ ಪುನಾರಂಭ ಮಾಡಿಸುವ ಬಗ್ಗೆ ಚಿಂತಿಸಬಹುದು. ಕಾರ್ಖಾನೆಯನ್ನು ಗುತ್ತಿಗೆಗೆ ನೀಡಿದರೆ ಉತ್ತಮವೋ ಅಥವಾ ಸಕ್ಕರೆ ಕಾರ್ಖಾನೆ ಮುಂದುವರಿಸುವ ಷರತ್ತಿನೊಂದಿಗೆ ಬಹಿರಂಗ ಹರಾಜು ಮಾಡುವುದು ಉತ್ತಮವೋ ಎಂಬ ಬಗ್ಗೆ ನಂತರ ಚರ್ಚಿಸೋಣ ಎಂದು ಸಲಹೆ ಮಾಡಿದರು.
ನಾನು ಕೂಡ 2009ರ ವರೆಗೆ 10 ವರ್ಷಗಳ ಕಾಲ ಈ ಸಕ್ಕರೆ ಕಾರ್ಖಾನೆಯ ಅಧ್ಯಕ್ಷನಾಗಿದ್ದೆ ಎಂದು ಸ್ಮರಿಸಿದ ಈಶ್ವರ ಖಂಡ್ರೆ, ಆಗ ಕಾರ್ಖಾನೆಯ ಮೇಲೆ ₹28 ಕೋಟಿ ಸಾಲ ಇತ್ತು. ಆದರೆ ₹56 ಕೋಟಿ ಸಕ್ಕರೆ ಮತ್ತು ಮೊಲಾಸಿಸ್ ಇತ್ತು. ಸಾಲಕ್ಕಿಂತ ಹೆಚ್ಚಿನ ಮೌಲ್ಯದ ಉತ್ಪನ್ನ ಕಾರ್ಖಾನೆಯಲ್ಲಿತ್ತು. ನಂತರ ಲಾಭದಲ್ಲಿದ್ದ ಕಾರ್ಖಾನೆ ನಷ್ಟ ಅನುಭವಿಸಿ, ಸಾಲದ ಸುಳಿಯಲ್ಲಿ ಸಿಲುಕಿದೆ ಎಂದರು.
2015-16ರಲ್ಲಿ ಕಬ್ಬಿದ್ದರೂ ಕಬ್ಬು ನುರಿದಿದ್ದು 67,659 ಟನ್, ಆದರೆ ನಾನು ಅಧ್ಯಕ್ಷನಿದ್ದಾಗ 6.5 ಲಕ್ಷ ಟನ್ ಕಬ್ಬು ನುರಿಯಲಾಗಿತ್ತು, ರಿಕವರಿ ದರ 10.8ರಷ್ಟಿತ್ತು. ಆದರೆ ನಂತರ ರಿಕವರಿ ಪ್ರಮಾಣ ಶೇ.5ಕ್ಕೆ ಕುಸಿಯಿತು. ಅದಕ್ಷ ಆಡಳಿತದಿಂದ ಕಾರ್ಖಾನೆ ನಷ್ಟ ಅನುಭವಿಸಿದೆ. ಸಂಬಳ ಕೊಡಲಾರದ ಸ್ಥಿತಿ ತಲುಪಿದೆ ಎಂದು ವರ್ಷವಾರು ಅಂಕಿ ಅಂಶ ನೀಡಿದರು.
ಈಗ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಖಾನೆಗೆ ಹಣ ಕೊಡಿಸುತ್ತಿಲ್ಲ ಎನ್ನುತ್ತಾರೆ. ಆಡಳಿತದ ವೈಫಲ್ಯದಿಂದ ನಷ್ಟ ಅನುಭವಿಸಿರುವ ಕಾರ್ಖಾನೆಗೆ ಯಾವುದೇ ಸರ್ಕಾರ ಬಂದಾಗಲೂ, ಸಾರ್ವಜನಿಕರ ತೆರಿಗೆಯ ಹಣ ಕೊಡಲು ಆಗುವುದಿಲ್ಲ ಎಂದು ವಿವರಿಸಿದರು.
ಸಭೆಯಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್, ಶಾಸಕರಾದ ಡಾ. ಶೈಲೇಂದ್ರ ಕೆ.ಬೆಲ್ದಾಳೆ, ಶರಣು ಸಲಗರ, ಡಾ. ಸಿದ್ದಲಿಂಗಪ್ಪ ಪಾಟೀಲ, ಭೀಮರಾವ ಪಾಟೀಲ, ಚಂದ್ರಶೇಖರ ಪಾಟೀಲ, ಕಾರ್ಖಾನೆ ಎಂಡಿ ದಿಗಂಬರ ಸ್ವಾಮಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಎಸ್ಪಿ ಪ್ರದೀಪ್ ಗುಂಟಿ, ಕಾಂಗ್ರೆಸ್ ಮುಖಂಡ ರಾಜಶೇಖರ ಪಾಟೀಲ, ಬಿಜೆಪಿ ಮುಖಂಡ ಸುಭಾಷ್ ಕಲ್ಲೂರ್ ಹಾಜರಿದ್ದರು.
ಬಿಎಸ್ಎಸ್ ಕೆ ನಡೆಸಬೇಕಾದರೆ ರಾಜ್ಯದ ಇತರೆ ಕಾರ್ಖಾನೆಗಳಂತೆ ಲೀಸ್ ಮೇಲೆ ಕೊಡುವುದು ಉತ್ತಮ ಎಂಬುದನ್ನು ಸಕ್ಕರೆ ಸಚಿವರ ಗಮನಕ್ಕೆ ತರಲಾಗಿದೆ. ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.-ದಿಗಂಬರ ಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ, ಬಿಎಸ್ಎಸ್ ಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.